ಕನ್ನಡಪ್ರಭ ವಾರ್ತೆ ಚಿಂತಾಮಣಿ
ನಗರದ ಕನಂಪಲ್ಲಿಯಲ್ಲಿನ ಶಿಬಿರ ಕಚೇರಿಯಲ್ಲಿ ಚೇಳೂರು ಕ್ಷೇತ್ರ ಹಾಗೂ ಕೈವಾರ ಕ್ಷೇತ್ರಗಳ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಮಿಲ್ಕ್ ಅನಾಲೈಸರ್ಗಳು ಹಾಗೂ ಕಂಪ್ಯೂಟರ್ ವಿತರಣಾ ಕಾರ್ಯಕ್ರಮದಲ್ಲಿ ಕೆ.ಎನ್.ಆವುಲಪ್ಪ ಹಾಗೂ ಕೆಂಚಾರ್ಲಹಳ್ಳಿ ಕೆ.ಎನ್.ಕೃಷ್ಣಾರೆಡ್ಡಿ ಭಾಗವಹಿಸಿ ಕೈವಾರ ಕ್ಷೇತ್ರದಲ್ಲಿನ 18 ಸಂಘಗಳಿಗೆ ಹಾಗೂ ಚೇಳೂರು ಕ್ಷೇತ್ರದಲ್ಲಿನ 12 ಸಂಘಗಳಿಗೆ ಮಿಲ್ಕ್ ಅನಾಲೈಸರ್ಗಳು ಮತ್ತು ಕಂಪ್ಯೂಟರ್ಗಳನ್ನು ವಿತರಿಸಿ ಶುಭಕೋರಿದರು.
ಚಿಮೂಲ್ ನಿರ್ದೇಶಕ ಕೆ.ಎನ್.ಆವುಲಪ್ಪ ಹಾಗೂ ಕೆಂಚರ್ಲಹಳ್ಳಿ ಕೆ.ಎನ್.ಕೃಷ್ಣಾರೆಡ್ಡಿ ಮಾತನಾಡಿ, ಹಾಲಿನ ಗುಣಮಟ್ಟವನ್ನು ಕಾಪಾಡುವುದು ಅತ್ಯಂತ ಮುಖ್ಯವಾಗಿದೆ. ಗುಣಮಟ್ಟದ ಹಾಲನ್ನು ಸರಬರಾಜು ಮಾಡುವ ಮೂಲಕ ಸಂಘದ ಆರ್ಥಿಕ ಅಭಿವೃದ್ಧಿಗೆ ಪ್ರತಿಯೊಬ್ಬರೂ ಶ್ರಮಿಸಬೇಕೆಂದು ಮನವಿ ಮಾಡಿದ ಅವರು, ಒಕ್ಕೂಟದಿಂದ ನೀಡಲಾಗುವ ಮ್ಯಾಟ್ ಹಾಗೂ ಮೇವು ಕಟ್ ಮಾಡುವ ಯಂತ್ರಗಳನ್ನು ಕೊಡಿಸುವ ಪ್ರಾಮಾಣಿಕ ಕೆಲಸ ಮಾಡುವುದಾಗಿ ತಿಳಿಸಿದ ಅವರು ರೈತರು ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳು ಈ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಂಡರೆ ಆರ್ಥಿಕವಾಗಿ ಮತ್ತಷ್ಟು ಬಲವಾಗಲು ಸಾಧ್ಯವೆಂದು ಅಭಿಪ್ರಾಯಪಟ್ಟರು.ಹಾಲು ಉತ್ಪಾದಕರ ರೈತರ ಏನೇ ಸಮಸ್ಯೆಗಳಿದ್ದರೂ ನೇರವಾಗಿ ನಮ್ಮನ್ನು ಸಂಪರ್ಕಿಸುವಂತೆ ಮನವಿ ಮಾಡಿದರು.
ಈ ವೇಳೆ ಚಿಂತಾಮಣಿ ಶಿಬಿರ ಕಚೇರಿಯ ಉಪವ್ಯವಸ್ಥಾಪಕ ಡಾ, ಮಹೇಶ್, ವಿಸ್ತರಣಾಧಿಕಾರಿಗಳಾದ ಸಂತೋಷಕುಮಾರ್, ಶಬ್ಬೀರ್ ಪಾಷಾ, ಸತೀಶ್ ಕುಮಾರ್, ಸಂತೋಷ್ ಕುಮಾರ್, ಗುಲಾಬ್ ಜಾನ್, ವಿನಯ್, ವಸಂತಲಕ್ಷ್ಮೀ ಸೇರಿ ಹಾಲು ಉತ್ಪಾದಕರ ಸಂಘಗಳ ಪ್ರತಿನಿಧಿಗಳು ಹಾಜರಿದ್ದರು.