ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಬೆಂಗಳೂರುಬೆಂಗಳೂರಿನ ಏರೋಸ್ಪೇಸ್ ಪಾರ್ಕ್ನಲ್ಲಿ 445 ಕೋಟಿ ಬಂಡವಾಳದೊಂದಿಗೆ ಕಂಪನಿ ತೆರೆದು 20 ಸಾವಿರ ಉದ್ಯೋಗ ಅವಕಾಶ ಸೃಷ್ಟಿಸುವುದಾಗಿ ಭರವಸೆ ನೀಡಿ 15 ಎಕರೆ ಜಮೀನು ಪಡೆದು 9 ವರ್ಷ ಕಳೆದರೂ ಯೋಜನೆ ಕಾರ್ಯಗತಗೊಳಿಸದ ಹಿನ್ನೆಲೆಯಲ್ಲಿ ಮಾಹಿತಿ ತಂತ್ರಜ್ಞಾನ ಕಂಪನಿ ‘ಜಸ್ಟ್ ಡಯಲ್ ಲಿಮಿಟೆಡ್’ಗೆ ಭೂಮಿ ಮಂಜೂರಾತಿ ಮಾಡಿದ್ದ ಆದೇಶ ರದ್ದುಪಡಿಸಿದ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಕ್ರಮವನ್ನು ಹೈಕೋರ್ಟ್ ಪುರಸ್ಕರಿಸಿದೆ.
ಭೂ ಮಂಜೂರಾತಿಯನ್ನು ರದ್ದುಪಡಿಸಿದ್ದ ಕೆಐಎಡಿಬಿ ಆದೇಶ ಅನೂರ್ಜಿತಗೊಳಿಸಲು ಕೋರಿ ಮೆರ್ಸಸ್ ಜಸ್ಟ್ ಡಯಲ್ ಲಿಮಿಟೆಡ್ ಸಲ್ಲಿಸಿದ್ದ ತಕರಾರು ಅರ್ಜಿ ವಜಾಗೊಳಿಸಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಆದೇಶಿಸಿದೆ.ಇದರಿಂದ ಕೈಗಾರಿಕೆ/ಕಂಪನಿ ಸ್ಥಾಪಿಸುವುದಾಗಿ ತಿಳಿಸಿ ಸರ್ಕಾರಿ ಜಮೀನು ಪಡೆದು ವರುಷಗಳು ಉಳಿದರೂ ಯಾವೊಂದು ಅಭಿವೃದ್ಧಿ ಚಟುವಟಿಕೆ ನಡೆಸದೆ ಇರುವ ಸಂಸ್ಥೆಗಳಿಗೆ ಎಚ್ಚರಿಕೆ ಸಂದೇಶ ರವಾನೆಯಾಗಿದೆ.
ಪ್ರಕರಣದಲ್ಲಿ ಕೆಐಎಡಿಬಿ 2014ರಲ್ಲಿ ಮಂಜೂರು ಮಾಡಿದ್ದ 5 ಎಕರೆ ಜಮೀನನ್ನು ಅರ್ಜಿದಾರ ಕಂಪನಿ ಸ್ವಾಧೀನಪಡಿಸಿಕೊಂಡಿತ್ತು. ಒಪ್ಪಂದ ಪ್ರಕಾರ ಸ್ವಾಧೀನ ಹೊಂದಿದ ದಿನದಿಂದ ಮೂರು ವರ್ಷದೊಳಗೆ ಉದ್ದೇಶಿತ ಯೋಜನೆ ಜಾರಿಗೊಳಿಸಬೇಕು. ಆದರೆ, ಅರ್ಜಿದಾರ ಕಂಪನಿ ಭೂಮಿ ಮಂಜೂರಾಗಿ 9 ವರ್ಷ ಕಳೆದರೂ ಒಂದು ಇಂಚು ನೆಲವನ್ನೂ ಅಭಿವೃದ್ಧಿಪಡಿಸಿಲ್ಲ. 2023ರ ಅ.10ರಂದು ತಡೆಗೋಡೆ ನಿರ್ಮಾಣ, ಭೂಮಿ ಅಗೆಯುವ ಕೆಲಸ ಮಾಡಿದೆ. ಇದು ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂಬುದಾಗಿ ಬಿಂಬಿಸಿ ಭೂ ಮಂಜೂರಾತಿ ಆದೇಶ ರದ್ದು ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುವ ತಂತ್ರವಾಗಿದೆಯಷ್ಟೆ ಎಂದು ಆದೇಶದಲ್ಲಿ ಹೈಕೋರ್ಟ್ ಕಟುವಾಗಿ ನುಡಿದಿದೆ.ಅಲ್ಲದೆ, ತಮಗೆ ಮಂಜೂರಾದ ಭೂಮಿಗೆ ವಾಹನ ಪ್ರವೇಶಿಸಲು ಅನುಕೂಲವಾಗುವಂತೆ ರಸ್ತೆ ನಿರ್ಮಾಣ ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳನ್ನು ಕೆಐಎಡಿಬಿ ಕಲ್ಪಿಸದ ಕಾರಣ ಕಾಲಮಿತಿಯಲ್ಲಿ ಯೋಜನೆ ಅನುಷ್ಠಾನ ಮಾಡಿಲ್ಲ. ಈ ವಿಚಾರವನ್ನು 2017ರಲ್ಲಿ ಗಮನಕ್ಕೆ ತರಲಾಗಿತ್ತು. ಮೂಲ ಸೌಕರ್ಯ ಕಲ್ಪಿಸಿದ್ದರೆ ಕಾಲಮಿತಿಯಲ್ಲಿ ಜಾಗದಲ್ಲಿ ಕಟ್ಟಡ ನಿರ್ಮಾಣ ಪೂರ್ಣಗೊಳಿಸಲಾಗುತ್ತಿತ್ತು. ಭೂ ಮಂಜೂರಾತಿ ಆದೇಶ ರದ್ದುಪಡಿಸುವ ಮುನ್ನ ತನ್ನ ಅಹವಾಲು ಆಲಿಸಿಲ್ಲ ಎಂಬ ಅರ್ಜಿದಾರ ಕಂಪನಿಯ ವಾದವನ್ನು ಹೈಕೋರ್ಟ್ ತಳ್ಳಿ ಹಾಕಿದೆ.
ಯೋಜನೆ ಅನುಷ್ಠಾನ ಮಾಡುವಲ್ಲಿ ವಿಳಂಬ ಮಾಡಿರುವಾಗ ಭೂ ಮಂಜೂರಾತಿ ಆದೇಶ ರದ್ದುಪಡಿಸಲು ಇನ್ಯಾವ ಕಾರಣ ನೀಡಲು ಸಾಧ್ಯ ಎಂಬುದು ಅರ್ಥವಾಗುತ್ತಿಲ್ಲ. ಅರ್ಜಿದಾರ ಕಂಪನಿ ಈಗಲೂ ಸಹ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಆ ಜಾಗದಲ್ಲಿ ಯಾವುದೇ ಕಟ್ಟಡ ಇಲ್ಲ. ಕೇವಲ ಪೊದೆಗಳು ಬೆಳೆದಿವೆ. ಅರ್ಜಿದಾರ ಕಂಪನಿಗೆ ನೀಡಿರುವ ಜಾಗದ ಪಕ್ಕದಲ್ಲಿ ಇತರೆ ಎರಡು ಕಂಪನಿಗಳಿಗೆ ಜಾಗ ನೀಡಲಾಗಿತ್ತು. ಅವು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಜಾಗ ಅಭಿವೃದ್ಧಿಪಡಿಸಿದ್ದು, ಕೆಐಎಡಿಬಿ ಹೇಳುವಂತೆ 600ರಿಂದ 1000 ಜನರಿಗೆ ಉದ್ಯೋಗಾವಕಾಶ ಕಲ್ಪಿಸಿವೆ. ಹಾಗಾಗಿ, ಮೂಲ ಸೌಕರ್ಯ ಕಲ್ಪಿಸಿಲ್ಲ ಎಂಬುದು ಕೇವಲ ತಂತ್ರಗಾರಿಕೆಯಾಗಿದ್ದು, ಕೆಐಎಡಿಬಿ ನಡೆಯಲ್ಲಿ ಯಾವುದೇ ತಪ್ಪು ಇಲ್ಲ ಎಂದು ಹೈಕೋರ್ಟ್ ತಿಳಿಸಿದೆ.ಬಾಕ್ಸ್...ಪ್ರಕರಣದ ವಿವರ
ಮೆರ್ಸಸ್ ಜಸ್ಟ್ ಡಯಲ್ ಲಿಮಿಟೆಡ್ 445.08 ಕೋಟಿ ರು. ಬಂಡವಾಳ ಹೂಡಿ 20,991 ಜನರಿಗೆ ಉದ್ಯೋಗ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿ 2014ರಲ್ಲಿ ಹೈ-ಟೆಕ್, ಡಿಫೆನ್ಸ್/ಏರೋಸ್ಪೇಸ್ ಪಾರ್ಕ್ನಲ್ಲಿ (ಐಟಿ ಸೆಕ್ಟರ್) 15 ಎಕರೆ ಜಮೀನನ್ನು 99 ವರ್ಷಗಳ ಗುತ್ತಿಗೆಗೆ ಕೆಐಡಿಬಿಯಿಂದ ಪಡೆದಿತ್ತು. 2014ರ ಸೆ.26ರಿಂದ 2017ರ ಅ.6ರೊಳಗೆ ಯೋಜನೆ ಕಾರ್ಯಗತಗೊಳಿಸಬೇಕೆಂದು ಕಂಪನಿ ಹಾಗೂ ಕೆಐಎಡಿಬಿ ನಡುವೆ ಒಪ್ಪಂದವಾಗಿತ್ತು. ಆದರೆ, ಭೂಮಿ ಹಂಚಿಕೆಯಾಗಿ 8 ವರ್ಷ 10 ತಿಂಗಳು ಕಳೆದಿದ್ದರೂ ಕಂಪನಿಯು ಜಮೀನಿನನ್ನು ಅಭಿವೃದ್ಧಿಪಡಿಸಿ ಯೋಜನೆ ಅನುಷ್ಠಾನಗೊಳಿಸಿರಲಿಲ್ಲ ಬಂಡವಾಳ ಹೂಡಿಕೆ ಮಾಡಿಲ್ಲ. ಉದ್ಯೋಗ ಅವಕಾಶ ಸಹ ಕಲ್ಪಿಸಿಲ್ಲ. ಆದ್ದರಿಂದ ಭೂಮಿ ಹಂಚಿಕೆಯನ್ನು ರದ್ದುಪಡಿಸಲಾಗುತ್ತಿದೆ. 2023ರ ಅ.24ರೊಳಗೆ ಭೂಮಿಯನ್ನು ತನ್ನ ವಶಕ್ಕೆ ವಹಿಸಬೇಕು ಎಂದು 2023ರ ಸೆ.25ರಂದು ಕೆಐಎಡಿಬಿ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಕಂಪನಿ ಹೈಕೋರ್ಟ್ ಮೊರೆ ಹೋಗಿತ್ತು.