)
ಕನ್ನಡಪ್ರಭ ವಾರ್ತೆ ಬೆಂಗಳೂರು
ಗ್ರಹಣದಿಂದಾಗಿ ದೇವರ ಪೂಜೆ ಮತ್ತು ಭಕ್ತರ ದರ್ಶನದ ಸಮಯವನ್ನೂ ಬದಲಾವಣೆ ಮಾಡಲಾಗಿತ್ತು. ಬೆಳಗ್ಗೆ ಪೂಜೆ ನೆರವೇರಿಸಿದ ಬಳಿಕ ಮಧ್ಯಾಹ್ನ ದೇವಾಲಯಗಳನ್ನು ಬಂದ್ ಮಾಡಲಾಯಿತು. ಸಂಜೆ ಶುದ್ಧೀಕರಣ ಕೈಗೊಂಡು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಮಧ್ಯಾಹ್ನ 3.20ರ ಸುಮಾರಿಗೆ ಗ್ರಹಣ ಸ್ಪರ್ಶವಾಗಿದ್ದು ಮಧ್ಯಕಾಲ ಸಂಜೆ 5.4 ಆಗಿತ್ತು. ಉನ್ಮಿಲನ ಕಾಲ ಸಂಜೆ 5.33 ಆಗಿದ್ದು 6.47ಕ್ಕೆ ಮೋಕ್ಷ ಕಾಲ ಉಂಟಾಯಿತು.
ಗ್ರಹಣಕ್ಕೆ ಸಂಬಂಧಿಸಿದಂತೆ ಕಾಡುಮಲ್ಲೇಶ್ವರ ದೇವಸ್ಥಾನದ ಅರ್ಚಕ ಶರತ್ ದೀಕ್ಷಿತ್ ಮಾತನಾಡಿ, ಬೆಳಗ್ಗೆ 9 ಗಂಟೆಯಿಂದ ರುದ್ರಾಭಿಷೇಕ, 11 ಗಂಟೆಗೆ ಮಹಾಮಂಗಳಾರಾತಿ ನಡೆಸಲಾಯಿತು. ಮಧ್ಯಾಹ್ನ 12.30 ರವರೆಗೂ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು ನಂತರ ದರ್ಬೆ ಹಾಕಿ ದೇವಸ್ಥಾನ ಬಂದ್ ಮಾಡಲಾಯಿತು. ಸಿಂಹ ರಾಶಿ, ಪುಬ್ಬಾ ನಕ್ಷತ್ರದವರಿಗೆ ಗ್ರಹಣದ ದೋಷ ಇದೆ. ಸಂಜೆ 7 ಗಂಟೆಗೆ ದೇವಸ್ಥಾನದ ಬಾಗಿಲು ತೆರೆಯಲಾಯಿತು. ನಂತರ ದೇವರಿಗೆ ಕ್ಷೀರಾಭಿಷೇಕ, ಪಂಚಾಮೃತ ನೈವೇದ್ಯ ಮಾಡಲಾಯಿತು. ಬುಧವಾರ ನವಗ್ರಹ ಶಾಂತಿ, ವಿಶೇಷ ಪೂಜೆ ಮಾಡಲಾಗುತ್ತದೆ ಎಂದು ವಿವರಿಸಿದರು.ಬನಶಂಕರಿಗೆ ದರ್ಬೆಯ ಬಂಧನ:
ನಗರದ ದೊಡ್ಡಗಣಪತಿ ದೇವಸ್ಥಾನ, ಪಂಚಮುಖಿ ಗಣಪತಿ ದೇವಸ್ಥಾನ, ನಿಮಿಷಾಂಬ ದೇವಿ ದೇವಸ್ಥಾನ ಸೇರಿದಂತೆ ಬಹಳಷ್ಟು ದೇವಾಲಯಗಳಲ್ಲಿ ಬೆಳಗ್ಗೆ ಪೂಜೆ ಸಲ್ಲಿಸಿ ಬಳಿಕ ಗ್ರಹಣದ ಸಂದರ್ಭದಲ್ಲಿ ದೇವಸ್ಥಾನವನ್ನು ಬಂದ್ ಮಾಡಲಾಯಿತು. ಸಂಜೆ ಮೋಕ್ಷ ಕಾಲದಲ್ಲಿ ದೇವಾಲಯಗಳ ಬಾಗಿಲು ತೆರೆದು ವಿಶೇಷ ಪೂಜೆ ಕೈಗೊಳ್ಳಲಾಯಿತು.ಅಣ್ಣಮ್ಮನ ದರ್ಶನಕ್ಕೆ ಅಧಿಕ ಭಕ್ತರು
ಮಂಗಳವಾರವೇ ಹುಣ್ಣಿಮೆ ಸಂಭವಿಸಿದ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಅಧಿಕ ಸಂಖ್ಯೆಯಲ್ಲಿ ಭಕ್ತರು ನಗರ ದೇವತೆ ಅಣ್ಣಮ್ಮನ ದೇವಸ್ಥಾನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದರು. ಮಂಗಳವಾರ ಆದ್ದರಿಂದ ದೇವಿಗೆ ವಿಶೇಷ ಪೂಜೆ, ಅಭಿಷೇಕ ನೆರವೇರಿಸಲಾಯಿತು. ದೇಗುಲಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಮಧ್ಯಾಹ್ನ 2 ಗಂಟೆಯ ಬಳಿಕ ಗರ್ಭಗುಡಿಯನ್ನು ದರ್ಬೆಯಿಂದ ಮುಚ್ಚಿದ ಅರ್ಚಕರು, ಗ್ರಹಣ ಮುಗಿದ ಬಳಿಕ ಸಂಜೆ ದೇವಸ್ಥಾನದ ಬಾಗಿಲು ತೆರೆದು ವಿಶೇಷ ಪೂಜೆ ಕೈಗೊಂಡರು. ಮುಚ್ಚದ ಬಂಡೆ ಮಹಾಕಾಳಿ ದೇಗುಲ!ಕೇತುಗ್ರಸ್ತ ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ನಗರದ ಎಲ್ಲ ದೇವಸ್ಥಾನಗಳು ಬಂದ್ ಆಗಿದ್ದರೆ ಪ್ರಸಿದ್ಧ ದೇಗುಲ ಬಂಡೆ ಮಹಾಕಾಳಿ ದೇವಸ್ಥಾನ ಮಾತ್ರ ತೆರೆದಿದ್ದು ವಿಶೇಷವಾಗಿತ್ತು. ಈ ಬಗ್ಗೆ ಮಾಹಿತಿ ನೀಡಿದ ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿ ಶಶಿಕುಮಾರ್, ಗ್ರಹಣದ ಸಮಯದಲ್ಲಿ ದೇವಾಲಯವನ್ನು ಮುಚ್ಚದ ಪದ್ಧತಿಯನ್ನು ಹಿಂದಿನಿಂದಲೂ ಅನುಸರಿಸಿಕೊಂಡು ಬರಲಾಗುತ್ತಿದೆ. ಗ್ರಹಣ ಪ್ರಾರಂಭದ ಸಮಯದಲ್ಲಿ ಬಂಡೆ ಮಹಾಕಾಳಿ ತಾಯಿಗೆ ತುಪ್ಪದ ಅಭಿಷೇಕ ಮಾಡಲಾಯಿತು. ವಿಶೇಷ ಪೂಜೆ, ಚಂದ್ರಶಾಂತಿ ಹೋಮ ನೆರವೇರಿಸಲಾಯಿತು. ಬುಧವಾರ ಕುಂಭಸ್ನಾನ ನಡೆಸಲಾಗುವುದು ಎಂದು ಮಾಹಿತಿ ನೀಡಿದರು. ಗವಿಗಂಗಾಧರ ಸನ್ನಿಧಿಯಲ್ಲಿ ವಿಶೇಷ ಹೋಮ
ಗ್ರಹಣದ ಹಿನ್ನೆಲೆಯಲ್ಲಿ ಗವಿಗಂಗಾಧರ ದೇವಾಲಯದ ಪ್ರಧಾನ ಆರ್ಚಕ ಸೋಮಸುಂದರ ದೀಕ್ಷಿತ್ ನೇತೃತ್ವದಲ್ಲಿ ಬೆಳಗ್ಗೆ ನಾಡಿನ ಒಳಿತಿಗಾಗಿ ವಿಶೇಷ ಹೋಮ, ಯಜ್ಞ ಕೈಗೊಳ್ಳಲಾಯಿತು. ಬೆಳಿಗ್ಗೆ 9 ಗಂಟೆಗೆ ದೇವಸ್ಥಾನದ ಪ್ರವೇಶದ್ವಾರ ಮುಚ್ಚಿ, ಸಂಜೆ 7 ಗಂಟೆಗೆ ಬಾಗಿಲುಗಳನ್ನು ತೆರೆದು ಸ್ವಾಮಿಗೆ ವಿಶೇಷ ಪೂಜೆ, ಕ್ಷೀರಾಭಿಷೇಕ ನೆರವೇರಿಸಲಾಯಿತು.