;Resize=(412,232))
ನವದೆಹಲಿ: ಬೆಂಗಳೂರಿನಲ್ಲಿ ನಡೆವ ಪ್ರತಿ ಐಪಿಎಲ್ ಪಂದ್ಯಗಳಿಗೂ ಕರ್ನಾಟಕದ ಎಲ್ಲಾ ಶಾಸಕರಿಗೂ ಉಚಿತ ಟಿಕೆಟ್ ನೀಡುವ ವಿಷಯ ಭಾರೀ ವಿವಾದಕ್ಕೆ ಕಾರಣವಾಗಿದ್ದ ನಡುವೆಯೇ 2026ರ ಐಪಿಎಲ್ ಫೈನಲ್ ಪಂದ್ಯದ ಆತಿಥ್ಯ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಕೈತಪ್ಪಿದೆ.
ಮೇ 31ರಂದು ಫೈನಲ್ ಪಂದ್ಯ ಗುಜರಾತ್ನ ಅಹಮದಾಬಾದ್ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಬುಧವಾರ ಬಿಸಿಸಿಐ ಘೋಷಿಸಿದೆ.ಹಾಲಿ ಚಾಂಪಿಯನ್ ತಂಡದ ತವರು ಕ್ರೀಡಾಂಗಣದಲ್ಲಿ ಪ್ಲೇ-ಆಫ್ ಹಾಗೂ ಫೈನಲ್ ಪಂದ್ಯ ನಡೆಸಬೇಕೆಂಬುದು ಬಿಸಿಸಿಐ ನಿಯಮ. ಇದರ ಪ್ರಕಾರ, 2025ರಲ್ಲಿ ಚಾಂಪಿಯನ್ ಆಗಿದ್ದ ಆರ್ಸಿಬಿ ತಂಡದ ತವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಬಾರಿ ಫೈನಲ್ ನಡೆಯಬೇಕಿತ್ತು. ಅಲ್ಲದೆ, ಕ್ವಾಲಿಫೈಯರ್ ಅಥವಾ ಎಲಿಮಿನೇಟರ್ ಪಂದ್ಯಕ್ಕೂ ಬೆಂಗಳೂರು ಆತಿಥ್ಯ ವಹಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಬೆಂಗಳೂರಿನಲ್ಲಿ ಪಂದ್ಯ ನಡೆಸದಿರುವ ಬಿಸಿಸಿಐ ನಿರ್ಧರಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ, ‘ಫೈನಲ್ ಪಂದ್ಯವನ್ನು ಆಯೋಜಿಸಲು ಬೆಂಗಳೂರನ್ನು ಆಯ್ಕೆ ಮಾಡಬೇಕಿತ್ತು. ಆದರೆ ಕೆಎಸ್ಸಿಎ ಹಾಗೂ ಅಧಿಕಾರಿಗಳ ಕೆಲ ಬೇಡಿಕೆ ಪೂರೈಸುವುದು ಬಿಸಿಸಿಐನ ಮಾರ್ಗಸೂಚಿ ಹಾಗೂ ಶಿಷ್ಟಾಚಾರದ ವ್ಯಾಪ್ತಿಯನ್ನು ಮೀರುವುದರಿಂದಾಗಿ ಫೈನಲ್ ಪಂದ್ಯವನ್ನು ಬೆಂಗಳೂರಿನಿಂದ ಸ್ಥಳಾಂತರಿಸಲಾಗಿದೆ’ ಎಂದು ಸ್ಪಷ್ಟಪಡಿಸಿದೆ.
ಮೇ 24ರಂದು ಲೀಗ್ ಹಂತದ ಪಂದ್ಯಗಳು ಮುಕ್ತಾಯಗೊಳ್ಳಲಿದ್ದು, ಮೇ 26ರಂದು ಧರ್ಮಶಾಲಾ ಕ್ರೀಡಾಂಗಣದಲ್ಲಿ ಕ್ವಾಲಿಫೈಯರ್-1 ಪಂದ್ಯ ನಡೆಯಲಿದೆ. ಬಳಿಕ ನವ ಚಂಡೀಗಢದ ಮುಲ್ಲಾನ್ಪುರ ಕ್ರೀಡಾಂಗಣದಲ್ಲಿ ಮೇ 27ರಂದು ಎಲಿಮಿನೇಟರ್, ಮೇ 29ಕ್ಕೆ ಕ್ವಾಲಿಫೈಯರ್-2 ಪಂದ್ಯ ನಡೆಯಲಿದೆ ಎಂದು ಬಿಸಿಸಿಐ ಮಾಹಿತಿ ನೀಡಿದೆ.
ಬಿಸಿಸಿಐ ಮೂಲಗಳ ಪ್ರಕಾರ, ಕ್ರೀಡಾಂಗಣದ ಆಸನ ಸಾಮರ್ಥ್ಯದ ಕಾರಣಕ್ಕೆ ಬೆಂಗಳೂರು ಬದಲು ಅಹಮದಾಬಾದ್ ಕ್ರೀಡಾಂಗಣಕ್ಕೆ ಫೈನಲ್ ಪಂದ್ಯ ಸ್ಥಳಾಂತರಿಸಲಾಗಿದೆ. ಚಿನ್ನಸ್ವಾಮಿಯಲ್ಲಿ 35000 ಆಸನ ಸಾಮರ್ಥ್ಯವಿದೆ. ಆದರೆ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ಎನಿಸಿಕೊಂಡಿರುವ ಅಹಮದಾಬಾದ್ 132000 ಆಸನ ಸಾಮರ್ಥ್ಯ ಹೊಂದಿದೆ.
ಈ ನಡುವೆ ಶಾಸಕರಿಗೂ ಉಚಿತ ಐಪಿಎಲ್ ಟಿಕೆಟ್ ನೀಡುವ ವಿಷಯದಿಂದ ವಿವಾದ
ಅದರ ಬೆನ್ನಲ್ಲೇ ನೇರವಾಗಿ ವಿಷಯ ಪ್ರಸ್ತಾಪಿಸದೇ ಬೆಂಗಳೂರಿನ ಪಂದ್ಯಗಳು ರದ್ದು
ಬೇಡಿಕೆ, ಶಿಷ್ಟಾಚಾರದ ಉಲ್ಲಂಘನೆ ಎಂದು ಹೇಳಿ ಇತರೆ 3 ನಗರಗಳಿಗೆ ಪಂದ್ಯ ವರ್ಗ