ಕಿರಿಯರಿಗೆ ಅವಕಾಶಕ್ಕಾಗಿ ಹಿರಿಯರನ್ನು ಕೈಬಿಡುವುದು ಅನಿವಾರ್‍ಯ: ರೋಹಿತ್‌ ಶರ್ಮಾ

KannadaprabhaNewsNetwork | Updated : Jan 25 2024, 05:41 AM IST

ಸಾರಾಂಶ

ಭಾರತದ ನಾಯಕ ರೋಹಿತ್‌ ಶರ್ಮಾ ಚೇತೆಶ್ವರ್‌ ಪೂಜಾರಾ, ಅಂಜಿಂಕ್ಯಾ ರಹಾನೆ ಟೆಸ್ಟ್‌ ತಂಡಕ್ಕೆ ಆಯ್ಕೆಯಾಗದ ಕುರಿತು ಮೌನ ಮುರಿದಿದ್ದು, ಈ ಕುರಿತು ತಮ್ಮದೇ ವಿಚಾರ ಹಂಚಿಕೊಂಡಿದ್ದಾರೆ.

ಹೈದರಾಬಾದ್‌: ಕಿರಿಯ, ಪ್ರತಿಭಾವಂತ ಆಟಗಾರರಿಗೆ ಅವಕಾಶ ಒದಗಿಸುವ ಸಲುವಾಗಿ ಹಿರಿಯರನ್ನು ಆಯ್ಕೆಗೆ ಪರಿಗಣಿಸಿದಿರುವುದು ಅನಿವಾರ್ಯ ಎಂದು ಭಾರತದ ನಾಯಕ ರೋಹಿತ್‌ ಶರ್ಮಾ ಹೇಳಿದ್ದಾರೆ. 

ಇಂಗ್ಲೆಂಡ್‌ ವಿರುದ್ಧದ ಮೊದಲೆರಡು ಟೆಸ್ಟ್‌ಗಳಿಂದ ವಿರಾಟ್‌ ಕೊಹ್ಲಿ ಹೊರಗುಳಿದ ನಂತರ ಚರ್ಚೆಯಲ್ಲಿದ್ದ ಪೂಜಾರಾ, ಅಂಜಿಂಕ್ಯಾ ರಹಾನೆ ಆಯ್ಕೆಯ ಕುರಿತು ರೋಹಿತ್‌ ಬುಧವಾರ ಪ್ರತಿಕ್ರಿಯೆ ನೀಡಿದ್ದಾರೆ. 

ಅನುಭವಿ ಆಟಗಾರರನ್ನು ಆಯ್ಕೆಗೆ ಪರಿಗಣಿಸದೇ ಇರುವುದು ಕಷ್ಟದ ಕೆಲಸ. ಆದರೆ ಕಿರಿಯರನ್ನು ಮುಂದಿಟ್ಟುಕೊಂಡು ಕೆಲವೊಮ್ಮೆ ಕಠಿಣ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದಿದ್ದಾರೆ. 

ಈ ಮೂಲಕ ರಹಾನೆ, ಪೂಜಾರ ಟೆಸ್ಟ್‌ ಕ್ರಿಕೆಟ್‌ಗೆ ಮರಳುವ ಸಾಧ್ಯತೆ ಕ್ಷೀಣಿಸಿದ್ದರ ಬಗ್ಗೆ ರೋಹಿತ್‌ ಸುಳಿವು ನೀಡಿದ್ದಾರೆ.

ಇಂಗ್ಲೆಂಡ್‌ ಸ್ಪಿನ್ನರ್‌ ಬಶೀರ್‌ ವೀಸಾ ಸಮಸ್ಯೆ ಇತ್ಯರ್ಥ
ಲಂಡನ್‌: ಭಾರತ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಪಾಲ್ಗೊಳ್ಳಬೇಕಿದ್ದ ಇಂಗ್ಲೆಂಡ್‌ ಯುವ ಸ್ಪಿನ್ನರ್‌ ಶೋಯೆಬ್‌ ಬಶೀರ್‌ ಅವರ ವೀಸಾ ಸಮಸ್ಯೆ ಕೊನೆಗೂ ಬಗೆಹರಿದಿದೆ. 

ಅವರು ಇದೇ ವಾರ ಭಾರತಕ್ಕೆ ಆಗಮಿಸುವ ನಿರೀಕ್ಷೆಯಿದೆ. ಸರಣಿಗಾಗಿ ಇಂಗ್ಲೆಂಡ್‌ ತಂಡಕ್ಕೆ ಆಯ್ಕೆಯಾಗಿದ್ದ ಬಶೀರ್‌, ಅಬು ಧಾಬಿಯಲ್ಲಿ ತಂಡದ ಜೊತೆ ಅಭ್ಯಾಸ ನಿರತರಾಗಿದ್ದರು. 

ಆದರೆ ಅವರಿಗೆ ಭಾರತದ ವೀಸಾ ಸಿಗದ ಕಾರಣ ಮರಳಿ ತವರಿಗೆ ತೆರಳುವ ಸ್ಥಿತಿ ಬಂದಿತ್ತು. ಈ ಬಗ್ಗೆ ಇಂಗ್ಲೆಂಡ್‌ ನಾಯಕ ಬೆನ್‌ ಸ್ಟೋಕ್ಸ್‌, ಭಾರತದ ನಾಯಕ ರೋಹಿತ್‌ ಶರ್ಮಾ ಅಸಮಾಧಾನ ವ್ಯಕ್ತಪಡಿಸಿದ್ದರು.

Share this article