ರಣಜಿ ಕ್ವಾರ್ಟರ್‌ ಫೈನಲ್‌ಗೆ ಕರ್ನಾಟಕ ಲಗ್ಗೆ

KannadaprabhaNewsNetwork |  
Published : Feb 20, 2024, 01:52 AM ISTUpdated : Feb 20, 2024, 02:04 PM IST
ರಣಜಿ ಕ್ವಾರ್ಟರ್‌ ಫೈನಲ್‌ಗೆ ಕರ್ನಾಟಕ ಲಗ್ಗೆ | Kannada Prabha

ಸಾರಾಂಶ

ದಶಕದ ಬಳಿಕ ರಣಜಿ ಟ್ರೋಫಿ ಎತ್ತಿ ಹಿಡಿಯುವ ನಿರೀಕ್ಷೆಯೊಂದಿಗೆ ಈ ಬಾರಿ ಟೂರ್ನಿಯಲ್ಲಿ ಕಣಕ್ಕಿಳಿದಿರುವ ಕರ್ನಾಟಕ ತಂಡ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ದಶಕದ ಬಳಿಕ ರಣಜಿ ಟ್ರೋಫಿ ಎತ್ತಿ ಹಿಡಿಯುವ ನಿರೀಕ್ಷೆಯೊಂದಿಗೆ ಈ ಬಾರಿ ಟೂರ್ನಿಯಲ್ಲಿ ಕಣಕ್ಕಿಳಿದಿರುವ ಕರ್ನಾಟಕ ತಂಡ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ನಿರ್ಣಾಯಕ ಪಂದ್ಯದಲ್ಲಿ ಚಂಡೀಗಢ ವಿರುದ್ಧ ರಾಜ್ಯ ತಂಡ ಡ್ರಾ ಸಾಧಿಸಿದರೂ ಮೊದಲ ಇನ್ನಿಂಗ್ಸ್‌ ಮುನ್ನಡೆ ಆಧಾರದಲ್ಲಿ 3 ಅಂಕ ಸಂಪಾದಿಸಿ ನಾಕೌಟ್‌ ಸ್ಥಾನ ಖಚಿತಪಡಿಸಿಕೊಂಡಿತು.

ರಾಜ್ಯ ತಂಡಕ್ಕೆ ಕ್ವಾರ್ಟರ್‌ಗೇರಬೇಕಿದ್ದರೆ ಈ ಪಂದ್ಯದಲ್ಲಿ ಗೆಲ್ಲಬೇಕಿತ್ತು ಅಥವಾ ಮೊದಲ ಇನ್ನಿಂಗ್ಸ್‌ ಮುನ್ನಡೆ ಪಡೆದು ಡ್ರಾ ಸಾಧಿಸಬೇಕಿತ್ತು. ಒಟ್ಟು 7 ಪಂದ್ಯಗಳಲ್ಲಿ 27 ಅಂಕ ಸಂಪಾದಿಸಿದ ಕರ್ನಾಟಕ ಗುಂಪಿನಲ್ಲಿ 2ನೇ ಸ್ಥಾನಿಯಾದರೆ, ತಮಿಳುನಾಡು 28 ಅಂಕದೊಂದಿಗೆ ಅಗ್ರಸ್ಥಾನಿಯಾಗಿ ಕ್ವಾರ್ಟರ್‌ಗೇರಿತು.

ಇಲ್ಲಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ 296 ರನ್‌ಗಳ ಹಿನ್ನಡೆ ಅನುಭವಿಸಿದ್ದ ಚಂಡೀಗಢ 2ನೇ ಇನ್ನಿಂಗ್ಸ್‌ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. 

3ನೇ ದಿನದಂತ್ಯಕ್ಕೆ ವಿಕೆಟ್‌ ನಷ್ಟವಿಲ್ಲದೆ 61 ರನ್‌ ಗಳಿಸಿದ್ದ ಚಂಡೀಗಢ ಕೊನೆ ದಿನವಾದ ಸೋಮವಾರ ಇನ್ನಿಂಗ್ಸ್‌ ಸೋಲಿನ ಭೀತಿಗೊಳಗಾಗಿತ್ತು. ಆದರೆ ಕರ್ನಾಟಕ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸಿದ ಚಂಡೀಗಢ, 5 ವಿಕೆಟ್‌ಗೆ 236 ರನ್‌ ಗಳಿಸಿದ್ದಾಗ ಅಂಪೈರ್‌ಗಳು ಪಂದ್ಯ ಡ್ರಾಗೊಳಿಸಲು ನಿರ್ಧರಿಸಿತು.

ಹೋರಾಟ: ಹಿಂದಿನ ದಿನಕ್ಕೆ ಒಂದೂ ರನ್‌ ಸೇರಿಸದೆ ಆರಂಭಿಕ ಜೋಡಿ ನಿರ್ಗಮಿಸಿತು. ಶಿವಂ ಭಾಂಬ್ರಿ 33 ರನ್‌ಗೆ ವಿಕೆಟ್‌ ಒಪ್ಪಿಸಿದರು. 2ನೇ ವಿಕೆಟ್‌ಗೆ ಅರ್ಸ್‌ಲನ್‌ ಖಾನ್‌ ಜೊತೆಗೂಡಿ ನಾಯಕ ಮನನ್‌ ವೋಹ್ರಾ(23) 61 ರನ್‌ ಸೇರಿಸಿದರು. 

ಶತಕದತ್ತ ಮುನ್ನುಗ್ಗತುತ್ತಿದ್ದ ಅರ್ಸ್‌ಲನ್‌ 61 ರನ್‌ ಗಳಿಸಿದ್ದಾಗ ಕೌಶಿಕ್‌ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಕುನಾಲ್‌ ಮಹಾಜನ್‌ ಇನ್ನಿಂಗ್ಸ್‌ 1 ರನ್‌ಗೆ ಕೊನೆಗೊಂಡಿತು. 122ರ ಬಳಿಕ ಕೇವಲ 5 ರನ್‌ ಅಂತರದಲ್ಲಿ 3 ವಿಕೆಟ್‌ ಕಳೆದುಕೊಂಡ ತಂಡ ಸೋಲಿನ ಸುಳಿಗೆ ಸಿಲುಕಿತ್ತು. ಆದರೆ ಮಯಾಂಕ್‌ ಸಿಧು ತಂಡಕ್ಕೆ ಆಸರೆಯಾದರು.

5ನೇ ವಿಕೆಟ್‌ಗೆ ಕೌಶಿಕ್(15) ಜೊತೆಗೂಡಿ 48 ರನ್‌ ಸೇರಿಸಿದ ಅವರು, ಮುರಿಯದ 6ನೇ ವಿಕೆಟ್‌ಗೆ ಕರಣ್‌ ಕೈಲಾ ಅವರೊಂದಿಗೆ 61 ರನ್‌ ಜೊತೆಯಾಟವಾಡಿ ಪಂದ್ಯ ಡ್ರಾ ಗೊಳಿಸಲು ಸಹಕರಿಸಿದರು. ಸಿಧು ಔಟಾಗದೆ 56 ರನ್‌ ಗಳಿಸಿದರು. ವೇಗಿ ಕೌಶಿಕ್‌, ಸ್ಪಿನ್ನರ್‌ ಶಶಿಕುಮಾರ್‌ ತಲಾ 2 ವಿಕೆಟ್ ಕಬಳಿಸಿದರು.

ಇದಕ್ಕೂ ಮುನ್ನ ಚಂಡೀಗಢವನ್ನು ಮೊದಲ ಇನ್ನಿಂಗ್ಸ್‌ನಲ್ಲಿ 267ಕ್ಕೆ ನಿಯಂತ್ರಿಸಿದ್ದ ರಾಜ್ಯ ತಂಡ, ಮನೀಶ್‌ ಪಾಂಡೆ, ವೈಶಾಖ್‌ ವಿಜಯ್‌ ಕುಮಾರ್‌, ಎಸ್‌.ಶರತ್‌ರ ಶತಕಗಳ ನೆರವಿನಿಂದ 5 ವಿಕೆಟ್‌ಗೆ 563 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿ ದೊಡ್ಡ ಮುನ್ನಡೆ ಪಡೆದಿತ್ತು.

ಸ್ಕೋರ್‌: ಚಂಡೀಗಢ 267/10 ಮತ್ತು 236/5(ಅರ್ಸ್‌ಲನ್‌ 63, ಮಯಾಂಕ್‌ ಸಿಧು 56*, ಕೌಶಿಕ್‌ 2-26, ಶಶಿಕುಮಾರ್‌ 2-55), ಕರ್ನಾಟಕ 563/5 ಡಿಕ್ಲೇರ್‌.

ಕ್ವಾರ್ಟರಲ್ಲಿ ಫೆ.23ರಿಂದ ಕರ್ನಾಟಕ vs ವಿದರ್ಭ

ಈ ಬಾರಿ ಕ್ವಾರ್ಟರ್‌ ಫೈನಲ್‌ನಲ್ಲಿ ರಾಜ್ಯ ತಂಡಕ್ಕೆ ಫೆ.23ರಿಂದ ವಿದರ್ಭ ಸವಾಲು ಎದುರಾಗಲಿದೆ. ರಾಜ್ಯ ತಂಡ ಎಲೈಸ್‌ ‘ಸಿ’ ಗುಂಪಿನಲ್ಲಿ 2ನೇ ಸ್ಥಾನಿಯಾಗಿದ್ದರೆ, ಕೊನೆ ಪಂದ್ಯದಲ್ಲಿ ಹರ್ಯಾಣವನ್ನು ಸೋಲಿಸಿದ ವಿದರ್ಭ ‘ಎ’ ಗುಂಪಿನಲ್ಲಿ ನಂ.1 ಸ್ಥಾನಿಯಾಯಿತು. 

ಗುಂಪು ಹಂತದಲ್ಲಿ ಅಗ್ರಸ್ಥಾನ ಪಡೆದ ತಂಡದ ತವರಿನಲ್ಲಿ ಕ್ವಾರ್ಟರ್‌ ಪಂದ್ಯ ನಡೆಯಲಿದ್ದು, ಕರ್ನಾಟಕ-ವಿದರ್ಭ ಪಂದ್ಯಕ್ಕೆ ನಾಗ್ಪುರ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಕ್ರಿಕೆಟ್‌ ‘ವಿಶ್ವ’ ಯುದ್ಧ ಗೆಲ್ಲೋರ್‍ಯಾರು..?
ಫೈನಲ್‌ ಟಿಕೆಟ್‌ಗಾಗಿ ಇಂದು ಕಿವೀಸ್‌ vs ದ.ಆಫ್ರಿಕಾ