ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ ಸಾಧಕರಿಗೆ ಬೆಂಗಳೂರಿನಲ್ಲಿ ಸನ್ಮಾನ: ಮೈಸೂರು ಪೇಟ ತೊಡಿಸಿ ಗೌರವ

KannadaprabhaNewsNetwork | Updated : Oct 07 2024, 04:32 AM IST

ಸಾರಾಂಶ

ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್‌ ಮುಖ್ಯ ಕೋಚ್ ಸತ್ಯನಾರಾಯಣ ಮುಂದಾಳತ್ವದಲ್ಲಿ ಈ ಸನ್ಮಾನ ಹಮ್ಮಿಕೊಳ್ಳಲಾಗಿತ್ತು. ಒಟ್ಟು 18 ಮಂದಿ ಅಥ್ಲೀಟ್‌ಗಳನ್ನು ಸನ್ಮಾನಿಸಲಾಯಿತು.

ಬೆಂಗಳೂರು: ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ವಿಜೇತರಿಗೆ ಭಾರತೀಯ ಪ್ಯಾರಾ ಪ್ಯಾರಾಲಿಂಪಿಕ್ಸ್‌ ಸಮಿತಿ ಸನ್ಮಾನಿಸಿದೆ. ನಗರದ ಕಂಠೀರವ ಕ್ರೀಡಾಂಗಣ ಮುಂಭಾಗದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ 18 ಮಂದಿ ಪ್ಯಾರಾ ಅಥ್ಲೀಟ್‌ಗಳನ್ನು ಮೈಸೂರು ಪೇಟ, ಶಾಲು ತೊಡಿಸಿ ಸನ್ಮಾನಿಸಲಾಯಿತು. 

ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್‌ ಮುಖ್ಯ ಕೋಚ್ ಸತ್ಯನಾರಾಯಣ ಮುಂದಾಳತ್ವದಲ್ಲಿ ಈ ಸನ್ಮಾನ ಹಮ್ಮಿಕೊಳ್ಳಲಾಗಿತ್ತು. ಅಜೀತ್ ಸಿಂಗ್, ನವದೀಪ್, ಮರಿಯಪ್ಪನ್, ಪ್ರೀತಿ ಪಾಲ್, ದೀಪ್ತಿ ಜೀವಾಂಜಿ, ನಿತೀಶ್ ಕುಮಾರ್, ಹರ್ವಿಂದರ್ ಸಿಂಗ್ ಸೇರಿ ಒಟ್ಟು 18 ಮಂದಿ ಅಥ್ಲೀಟ್‌ಗಳಿದ್ದರು.

ಭಾರತೀಯ ಪ್ಯಾರಾಲಿಂಪಿಕ್ಸ್‌ ಸಮಿತಿ ಮುಖ್ಯಸ್ಥ ದೇವೇಂದ್ರ ಝಝಾರಿಯಾ, 2012ರ ಲಂಡನ್ ಪ್ಯಾರಾಲಿಂಪಿಕ್ಸ್‌ ಪದಕ ವಿಜೇತ ಕನ್ನಡಿಗ ಎಚ್.ಎನ್. ಗಿರೀಶ್ ಉಪಸ್ಥಿತರಿದ್ದರು.ಈ ವೇಳೆ ಮಾತಾಡಿದ ದೇವೇಂದ್ರ ಝಝಾರಿಯಾ, ‘ಸತ್ಯನಾರಾಯಣ ಅವರು ಪ್ಯಾರಾಲಿಂಪಿಕ್ಸ್ ಬೆಳವಣಿಗೆಗೆ ಸಾಕಷ್ಟು ಶ್ರಮಿಸಿದ್ದು, ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲೇ ರಾಷ್ಟ್ರೀಯಯ ಪ್ಯಾರಾ ಅಥ್ಲೆಟಿಕ್ಸ್ ಸ್ಪರ್ಧೆ ನಡೆಸುವುದಾಗಿ ತಿಳಿಸಿದರು.

ಈ ಸಲ ಸೌದಿಯಲ್ಲಿ ಐಪಿಎಲ್‌ ಆಟಗಾರರ ಹರಾಜು: ವರದಿ

ನವದೆಹಲಿ: ಮುಂದಿನ ಆವೃತ್ತಿಯ ಐಪಿಎಲ್‌ನ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಸೌದಿ ಅರೇಬಿಯಾದಲ್ಲಿ ನಡೆಸುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ನವೆಂಬರ್‌ ಕೊನೆ ವಾರದಲ್ಲಿ ರಿಯಾದ್‌ ಅಥವಾ ಜಿದ್ದಾದಲ್ಲಿ ಹರಾಜು ನಡೆಯುವ ಸಾಧ್ಯತೆಯಿದೆ. 

ಯುಎಇಯ ದುಬೈ ಕೂಡಾ ಸಂಭಾವ್ಯ ನಗರಗಳ ಪಟ್ಟಿಯಲ್ಲಿದೆ ಎನ್ನಾಲಾಗುತ್ತಿದೆ. ಕಳೆದ ಬಾರಿ ದುಬೈನಲ್ಲೇ ಹರಾಜು ನಡೆದಿತ್ತು. ದುಬೈಗೆ ಹೋಲಿಸಿದರೆ ಸೌದಿ ನಗರಗಳಲ್ಲಿ ಹರಾಜು ಪ್ರಕ್ರಿಯೆ ವೆಚ್ಚ ಜಾಸ್ತಿ ಎಂದು ತಿಳಿದುಬಂದಿದೆ. ಈ ಮೊದಲು ಲಂಡನ್‌ನಲ್ಲಿ ಹರಾಜು ನಡೆಸುವ ಬಗ್ಗೆಯೂ ಬಿಸಿಸಿಐ ಚಿಂತನೆ ನಡೆಸಿತ್ತು. ಆದರೆ ನವೆಂಬರ್‌ ವೇಳೆ ಲಂಡನ್‌ನಲ್ಲಿ ತೀವ್ರ ಚಳಿ ಇರುವ ಕಾರಣ ಬೇರೆ ನಗರಗಳ ಪಟ್ಟಿ ಸಿದ್ಧಪಡಿಸಿದೆ ಎಂದು ವರದಿಯಾಗಿದೆ.

Share this article