ಚಂಡೀಗಢ ವಿರುದ್ಧ ಕರ್ನಾಟಕ ಆರ್ಭಟದ ಆಟ

KannadaprabhaNewsNetwork |  
Published : Feb 18, 2024, 01:31 AM IST
ಚಂಡೀಗಢ ವಿರುದ್ಧ ಕರ್ನಾಟಕ ಆರ್ಭಟದ ಆಟ | Kannada Prabha

ಸಾರಾಂಶ

ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಕರ್ನಾಟಕದ ವಿರುದ್ಧ ಚಂಡೀಗಢ ಮೊದಲ ಇನ್ನಿಂಗ್ಸ್‌ನಲ್ಲಿ 267ಕ್ಕೆ ಆಲೌಟ್‌ ಅಗಿದೆ. ಮನೀಶ್‌ ಸ್ಫೋಟಕ ಶತಕ ನೆರವಿನಿಂದ ರಾಜ್ಯ ತಂಡ 2ನೇ ದಿನಾಂತ್ಯಕ್ಕೆ 3 ವಿಕೆಟ್‌ಗೆ 268 ರನ್‌ ಗಳಿಸಿದೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿರಣಜಿ ಟ್ರೋಫಿಯ ಚಂಡೀಗಢ ವಿರುದ್ಧದ ಮಹತ್ವದ ಪಂದ್ಯದಲ್ಲಿ ಕರ್ನಾಟಕ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿದ್ದು, ಕ್ವಾರ್ಟರ್‌ ಫೈನಲ್‌ ಸ್ಥಾನ ಬಹುತೇಕ ಖಚಿತಪಡಿಸಿಕೊಂಡಿದೆ. ಪಂದ್ಯದಲ್ಲಿ ಕರ್ನಾಟಕ ಕನಿಷ್ಠ ಡ್ರಾ ಸಾಧಿಸಿದರೂ ನಾಕೌಟ್‌ಗೇರಲಿದೆ.ಚಂಡೀಗಢವನ್ನು ಮೊದಲ ಇನ್ನಿಂಗ್ಸ್‌ನಲ್ಲಿ 267ಕ್ಕೆ ನಿಯಂತ್ರಿಸಿದ ರಾಜ್ಯ ತಂಡ, ಬಳಿಕ 2ನೇ ದಿನದಂತ್ಯಕ್ಕೆ 3 ವಿಕೆಟ್‌ ಕಳೆದುಕೊಂಡು 268 ರನ್‌ ಕಲೆಹಾಕಿದೆ. 1 ರನ್ ಮುನ್ನಡೆ ಪಡೆದಿರುವ ರಾಜ್ಯ ತಂಡ ಬೃಹತ್‌ ಮೊತ್ತದತ್ತ ದಾಪುಗಾಲಿಟ್ಟಿದೆ.ಮೊದಲ ದಿನ 6 ವಿಕೆಟ್‌ಗೆ 219 ರನ್‌ ಗಳಿಸಿದ್ದ ಚಂಡೀಗಢ 2ನೇ ದಿನ ಬೇಗನೇ ಗಂಟುಮೂಟೆ ಕಟ್ಟಿತು. ಮಯಾಂಕ್‌ ಸಿಧು(31), ಜಗ್‌ಜೀತ್‌ ಸಿಂಗ್‌(25) ಅಲ್ಪ ಹೋರಾಟ ತಂಡಕ್ಕೆ ನೆರವಾಯಿತು. ವೇಗಿ ವೈಶಾಕ್‌ ಹಾಗೂ ಸ್ಪಿನ್ನರ್‌ ಹಾರ್ದಿಕ್‌ ರಾಜ್‌ ತಲಾ 4 ವಿಕೆಟ್‌ ಕಬಳಿಸಿದರು.ಮಯಾಂಕ್‌, ಮನೀಶ್‌ ಆಸರೆ: ಬಳಿಕ ಇನ್ನಿಂಗ್ಸ್‌ ಆರಂಭಿಸಿದ ರಾಜ್ಯ ತಂಡ ಆರ್‌.ಸಮರ್ಥ್‌(04) ವಿಕೆಟನ್ನು ಬೇಗನೇ ಕಳೆದುಕೊಂಡಿತು. ಆದರೆ ನಾಯಕ ಮಯಾಂಕ್‌ ಅಗರ್‌ವಾಲ್‌ ಹಾಗೂ ಉಪನಾಯಕ ನಿಕಿನ್‌ ಜೋಸ್‌ ತಂಡವನ್ನು ಮೇಲೆತ್ತಿದರು. ನಿಕಿನ್‌ 37ಕ್ಕೆ ವಿಕೆಟ್‌ ಒಪ್ಪಿಸಿದರೆ, ಮಯಾಂಕ್‌ 57 ರನ್‌ ಸಿಡಿಸಿ ಕರಣ್‌ ಕೈಲಾ ಎಸೆತದಲ್ಲಿ ಬೌಲ್ಡ್‌ ಆಗಿ ನಿರ್ಗಮಿಸಿದರು. 115ಕ್ಕೆ 3 ವಿಕೆಟ್‌ ಕಳೆದುಕೊಂಡ ಬಳಿಕ 4ನೇ ವಿಕೆಟ್‌ಗೆ ಜೊತೆಯಾದ ಮನೀಶ್ ಪಾಂಡೆ-ಹಾರ್ದಿಕ್‌ ರಾಜ್‌ ಚಂಡೀಗಢ ಬೌಲರ್‌ಗಳನ್ನು ಚೆಂಡಾಡಿದರು.177 ಎಸೆತಗಳಲ್ಲಿ 144 ರನ್‌ ಜೊತೆಯಾಟವಾಡಿದ ಈ ಜೋಡಿ ರಾಜ್ಯಕ್ಕೆ ಇನ್ನಿಂಗ್ಸ್‌ ಮುನ್ನಡೆ ಒದಗಿಸಿಕೊಟ್ಟಿತು. ಸ್ಫೋಟಕ ಆಟವಾಡಿದ ಮನೀಶ್‌ 101 ಎಸೆತಗಳಲ್ಲಿ 14 ಬೌಂಡರಿ, 3 ಸಿಕ್ಸರ್‌ನೊಂದಿಗೆ ಔಟಾಗದೆ 102 ರನ್‌ ಸಿಡಿಸಿದ್ದಾರೆ. ಹಾರ್ದಿಕ್‌ ಪ್ರಬುದ್ಧ ಆಟ ಪ್ರದರ್ಶಿಸಿದ ಹಾರ್ದಿಕ್ 49 ರನ್‌ ಗಳಿಸಿ 3ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ.ಸ್ಕೋರ್: ಚಂಡೀಗಢ 267/10(ಮಯಾಂಕ್‌ 31, ಹಾರ್ದಿಕ್‌ 4-56, ವೈಶಾಕ್‌ 4-77), ಕರ್ನಾಟಕ 268/3(2ನೇ ದಿನದಂತ್ಯಕ್ಕೆ) (ಮನೀಶ್‌ 102*, ಮಯಾಂಕ್‌ 57, ಹಾರ್ದಿಕ್‌ 49*, ಜಗ್‌ಜೀತ್‌ 1-34)-25ನೇ ಶತಕಮನೀಶ್‌ ಪಾಂಡೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 25ನೇ ಶತಕ ಬಾರಿಸಿದರು. ಈ ಬಾರಿ ರಣಜಿಯಲ್ಲಿದು 2ನೇ ಶತಕ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಚಿನ್ನಸ್ವಾಮಿಯಲ್ಲಿ ಕೊಹ್ಲಿ-ಪಡಿಕ್ಕಲ್‌ ಗ್ರೇಟ್‌ ಚೇಸ್‌! ಆರ್‌ಸಿಬಿಗೆ 5 ವಿಕೆಟ್‌ ಗೆಲುವು
ತವರಿನಲ್ಲಿ ಆರ್‌ಸಿಬಿಗಿಂದು ಕೊನೆ ಲೀಗ್‌ ಪಂದ್ಯ