ಭಾರತ ಟಿ20 ತಂಡಕ್ಕೆ ಸೂರ್ಯ ನಾಯಕ?

KannadaprabhaNewsNetwork |  
Published : Jul 17, 2024, 12:47 AM IST
ಭಾರತ ಟಿ20 ತಂಡದ ಹೊಸ ನಾಯಕನ ರೇಸ್‌ನಲ್ಲಿ ಹಾರ್ದಿಕ್‌ ಪಾಂಡ್ಯ, ಸೂರ್ಯಕುಮಾರ್‌ ಯಾದವ್‌. | Kannada Prabha

ಸಾರಾಂಶ

ಸೂರ್ಯಕುಮಾರ್‌ ಯಾದವ್‌ಗೆ ಒಲಿಯಲಿದೆಯೇ ಅದೃಷ್ಟ? ಹಾರ್ದಿಕ್‌ ಪಾಂಡ್ಯರನ್ನು ಕಡೆಗಣಿಸಿ ಸೂರ್ಯಗೆ ನಾಯಕತ್ವ ನೀಡಲು ಬಿಸಿಸಿಐ ಯೋಜನೆ? ಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ತಂಡವನ್ನು ಮುನ್ನಡೆಸುವವರು ಯಾರು?

ನವದೆಹಲಿ: ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಅಂತಾರಾಷ್ಟ್ರೀಯ ಟಿ20ಯಿಂದ ನಿವೃತ್ತಿ ಪಡೆದ ಕಾರಣ, ಭಾರತ ಟಿ20 ತಂಡಕ್ಕೆ ಹೊಸ ನಾಯಕನನ್ನು ನೇಮಿಸುವ ಜವಾಬ್ದಾರಿ ಬಿಸಿಸಿಐ ಮುಂದಿದೆ. ಕಳೆದ ವರ್ಷ ಹಾರ್ದಿಕ್‌ ಪಾಂಡ್ಯರನ್ನೇ ಭವಿಷ್ಯದ ನಾಯಕ ಎಂದು ಬಿಂಬಿಸಿದ್ದ ಬಿಸಿಸಿಐ, ಇದೀಗ ಅವರನ್ನು ಪೂರ್ಣಾವಧಿ ನಾಯಕನನ್ನಾಗಿ ನೇಮಿಸಲು ಮೀನಮೇಷ ಎಣಿಸುತ್ತಿದೆ. ಇದಕ್ಕೆ ಹಾರ್ದಿಕ್‌ರ ಫಿಟ್ನೆಸ್‌ ಸಮಸ್ಯೆಯೇ ಪ್ರಮುಖ ಕಾರಣ ಎಂದು ಗೊತ್ತಾಗಿದ್ದು, ಸೂರ್ಯಕುಮಾರ್‌ ಯಾದವ್‌ ಹೆಗಲಿಗೆ ನಾಯಕತ್ವದ ಹೊಣೆ ಹೊರಿಸುವ ಸಾಧ್ಯತೆ ದಟ್ಟವಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.ಹಾರ್ದಿಕ್‌ರನ್ನು ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಟಿ20 ವಿಶ್ವಕಪ್‌ಗೆ ಉಪನಾಯಕನನ್ನಾಗಿ ನೇಮಿಸಲಾಗಿತ್ತು. ಆದರೂ, ಅವರು ತಮ್ಮ 8 ವರ್ಷಗಳ ವೃತ್ತಿಬದುಕಿನಲ್ಲಿ ಹಲವು ಬಾರಿ ಗಾಯದ ಸಮಸ್ಯೆಗೆ ತುತ್ತಾಗಿ ತಂಡದಿಂದ ಹೊರಗುಳಿದಿದ್ದಾರೆ. ಪಾಂಡ್ಯ ನೇಮಕಕ್ಕೆ ಬಿಸಿಸಿಐನ ಕೆಲ ಪ್ರಮುಖ ಅಧಿಕಾರಿಗಳು ಹಾಗೂ ಆಯ್ಕೆ ಸಮಿತಿಯ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇನ್ನು ಹೊಸ ಕೋಚ್‌ ಗೌತಮ್‌ ಗಂಭೀರ್‌ ಕೂಡ ಪಾಂಡ್ಯ ಮೂರೂ ಮಾದರಿಯಲ್ಲಿ ಆಡದೆ ಇರುವುದಕ್ಕೆ ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದರು. ಹಾರ್ದಿಕ್‌ರನ್ನು ನಾಯಕನನ್ನಾಗಿ ನೇಮಿಸಲು ಗಂಭೀರ್‌ಗೂ ಮನಸಿಲ್ಲ ಎಂದು ಹೇಳಲಾಗುತ್ತಿದೆ.

ಸೂರ್ಯಕುಮಾರ್‌ ಟಿ20ಯಲ್ಲಿ ತಂಡದ ನಂಬರ್‌ 1 ಬ್ಯಾಟರ್ ಎನಿಸಿದ್ದು, ಈಗಾಗಲೇ ಒಮ್ಮೆ ನಾಯಕನಾಗಿ ಕಾರ್ಯನಿರ್ವಹಿಸಿದ್ದಾರೆ. ಅವರ ನಾಯಕತ್ವ ಶೈಲಿ ಬಗ್ಗೆ ಡ್ರೆಸ್ಸಿಂಗ್‌ ರೂಂನಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನಲಾಗಿದೆ. ಸೂರ್ಯ ಕಾರ್ಯವೈಖರಿ ಬಗ್ಗೆ ಬಿಸಿಸಿಐ ಹಾಗೂ ಆಯ್ಕೆ ಸಮಿತಿಗೂ ಸಮಾಧಾನವಿದ್ದು, ಅವರನ್ನೇ ನಾಯಕನನ್ನಾಗಿ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚು ಎಂದು ಭಾರತೀಯ ಕ್ರಿಕೆಟ್‌ ವಲಯದಲ್ಲಿ ಚರ್ಚೆಯಾಗುತ್ತಿದೆ. ಲಂಕಾ ಏಕದಿನ: ಭಾರತ ತಂಡಕ್ಕೆ ರಾಹುಲ್‌ ಅಥವಾ ಶುಭ್‌ಮನ್‌ ನಾಯಕ?ನವದೆಹಲಿ: ಶ್ರೀಲಂಕಾ ವಿರುದ್ಧ ಮುಂದಿನ ತಿಂಗಳು ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ತಂಡವನ್ನು ಕೆ.ಎಲ್‌.ರಾಹುಲ್‌ ಅಥವಾ ಶುಭ್‌ಮನ್‌ ಗಿಲ್‌ ಮುನ್ನಡೆಸುವ ಸಾಧ್ಯತೆ ಇದೆ. ವಿಶ್ರಾಂತಿಯಲ್ಲಿರುವ ರೋಹಿತ್‌ ಶರ್ಮಾ ಸರಣಿಗೆ ಅಲಭ್ಯರಾಗಲಿರುವ ಕಾರಣ, ಹಂಗಾಮಿ ನಾಯಕನನ್ನು ನೇಮಿಸಲು ಬಿಸಿಸಿಐ ನಿರ್ಧರಿಸಿದೆ. ಕೆಲ ದಿನಗಳ ಹಿಂದೆ ನಾಯಕತ್ವಕ್ಕೆ ರಾಹುಲ್‌ ಹೆಸರು ಮಾತ್ರ ಕೇಳಿಬರುತ್ತಿತ್ತು. ಆದರೀಗ, ಗಿಲ್‌ ಸಹ ನಾಯಕತ್ವದ ರೇಸ್‌ನಲ್ಲಿದ್ದಾರೆ ಎಂದು ತಿಳಿದುಬಂದಿದೆ. 2027ರ ಏಕದಿನ ವಿಶ್ವಕಪ್‌ ಗಮನದಲ್ಲಿಟ್ಟುಕೊಂಡು ಹೊಸ ನಾಯಕನನ್ನು ಬೆಳೆಸಲು ಪ್ರಧಾನ ಕೋಚ್‌ ಗೌತಮ್‌ ಗಂಭೀರ್‌ ಉದ್ದೇಶಿಸಿದ್ದು, ಈ ನಿಟ್ಟಿನಲ್ಲಿ ಶುಭಮನ್‌ ಗಿಲ್‌ಗೆ ಅವಕಾಶ ಸಿಗಬಹುದು ಎಂದು ಹೇಳಲಾಗುತ್ತಿದೆ.ಮತ್ತೊಂದೆಡೆ, ಗಂಭೀರ್‌ ಹಿರಿಯ ಆಟಗಾರರಾದ ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ ಹಾಗೂ ಜಸ್‌ಪ್ರೀತ್‌ ಬೂಮ್ರಾಗೆ ಲಂಕಾ ವಿರುದ್ಧ ಏಕದಿನ ಸರಣಿಯನ್ನು ಆಡುವಂತೆ ಕೇಳಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಒಂದು ವೇಳೆ ಈ ಮೂವರು ಆಡಲು ನಿರ್ಧರಿಸಿದರೆ, ಆಗ ತಂಡವನ್ನು ರೋಹಿತ್‌ ಅವರೇ ಮುನ್ನಡೆಸಲಿದ್ದಾರೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ಸೆಮಿಫೈನಲ್‌ ಕದನಕ್ಕೆ ಅಖಾಡ ಸಿದ್ಧ - ಸೆಮಿಫೈನಲ್‌ಗಿದೆ ಮೀಸಲು ದಿನ
ಕ್ರೀಡಾಲೋಕದ ಮೇಲೆ ಯುದ್ಧದ ಕಾರ್ಮೋಡ