ದೇಸಿ ಕ್ರಿಕೆಟ್‌ನ ರಾಜ ಮುಂಬೈಗೆ 27 ವರ್ಷಗಳ ಬಳಿಕ ಇರಾನಿ ಕಪ್‌ : 15ನೇ ಬಾರಿ ಪ್ರಶಸ್ತಿ

KannadaprabhaNewsNetwork |  
Published : Oct 06, 2024, 01:25 AM ISTUpdated : Oct 06, 2024, 04:15 AM IST
ಇರಾನಿ ಕಪ್ | Kannada Prabha

ಸಾರಾಂಶ

ಶೇಷ ಭಾರತ ವಿರುದ್ಧ ಡ್ರಾ. ಇನ್ನಿಂಗ್ಸ್‌ ಮುನ್ನಡೆ ಆಧಾರದಲ್ಲಿ ಮುಂಬೈ ಚಾಂಪಿಯನ್‌. ಈ ಮೂಲಕ ಇರಾನಿ ಕಪ್‌ನಲ್ಲಿ 15ನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ.

ಲಖನೌ: ಹಾಲಿ ರಣಜಿ ಟ್ರೋಫಿ ಚಾಂಪಿಯನ್‌ ಮುಂಬೈ ತಂಡ ಇರಾನಿ ಕಪ್‌ನಲ್ಲಿ 15ನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. 5ನೇ ದಿನವಾದ ಶನಿವಾರ ಶೇಷ ಭಾರತ ವಿರುದ್ಧ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತು. ಆದರೆ ಮೊದಲ ಇನ್ನಿಂಗ್ಸ್‌ ಮುನ್ನಡೆ ಪಡೆದಿದ್ದ ಕಾರಣ ಮುಂಬೈ ಚಾಂಪಿಯನ್‌ ಎಂದು ಘೋಷಿಸಲಾಯಿತು. ಈ ಮೂಲಕ 27 ವರ್ಷ ಬಳಿಕ ಮತ್ತೊಮ್ಮೆ ಇರಾನಿ ಕಪ್‌ ಮುಡಿಗೇರಿಸಿಕೊಂಡಿತು. ತಂಡ ಕೊನೆ ಬಾರಿ 1997-98ರಲ್ಲಿ ಪ್ರಶಸ್ತಿ ಗೆದ್ದಿತ್ತು.

4ನೇ ದಿನದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 153 ರನ್‌ ಗಳಿಸಿದ್ದ ಮುಂಬೈ ಕೊನೆ ದಿನವಾದ ಶನಿವಾರ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿತು. ಪಂದ್ಯ ಡ್ರಾಗೊಂಡರೂ ಸಾಕಿದ್ದ ಕಾರಣ ಮುಂಬೈ ನಿಧಾನ ಆಟವಾಡಿತು. 8 ವಿಕೆಟ್‌ಗೆ 329 ರನ್‌ ಗಳಿಸಿದ್ದಾಗ ಡಿಕ್ಲೇರ್‌ ಘೋಷಿಸಿದರೂ, 451 ರನ್‌ ಗುರಿ ಸಿಕ್ಕ ಕಾರಣ ಶೇಷ ಭಾರತ ತಂಡ ಬ್ಯಾಟಿಂಗ್‌ ಆರಂಭಿಸದೆ ಡ್ರಾಗೆ ತೃಪ್ತಿಪಟ್ಟುಕೊಂಡಿತು. 

ಮುಂಬೈನ ತನುಶ್‌ ಕೋಟ್ಯನ್‌ ಔಟಾಗದೆ 114, ಮೋಹಿತ್‌ ಅವಸ್ತಿ ಔಟಾಗದೆ 51 ರನ್‌ ಬಾರಿಸಿದರು.ಇದಕ್ಕೂ ಮುನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಮುಂಬೈ 537 ರನ್ ಕಲೆ ಹಾಕಿದ್ದರೆ, ಋತುರಾಜ್‌ ಗಾಯಕ್ವಾಡ್‌ ನಾಯಕತ್ವದ ಶೇಷ ಭಾರತ 416 ರನ್‌ಗೆ ಆಲೌಟಾಗಿತ್ತು. ಮುಂಬೈ 121 ರನ್‌ ಮುನ್ನಡೆ ಸಾಧಿಸಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಬಾರಿಸಿದ್ದ ಮುಂಬೈನ ಸರ್ಫರಾಜ್ ಖಾನ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.ಸ್ಕೋರ್‌: ಮುಂಬೈ 537/10 ಮತ್ತು 329/8 ಡಿ. (ತನುಶ್‌ ಔಟಾಗದೆ 114, ಮೋಹಿತ್‌ ಔಟಾಗದೆ 51, ಶರನ್ಸ್‌ ಜೈನ್‌ 6-121) ಶೇಷ ಭಾರತ 416/10

ಪಂದ್ಯಶ್ರೇಷ್ಠ: ಸರ್ಫರಾಜ್‌ ಖಾನ್‌.

ದೇಸಿ ಕ್ರಿಕೆಟ್‌ನ ಕಿಂಗ್‌ ಮುಂಬೈ

ಮುಂಬೈ ತಂಡ ದೇಸಿ ಕ್ರಿಕೆಟ್‌ಗೆ ಒಂದರ್ಥದಲ್ಲಿ ರಾಜ ಇದ್ದಂತೆ. ಹಲವು ದಶಕಗಳಿಂದಲೂ ಅಧಿಪತ್ಯ ಸಾಧಿಸುತ್ತಲೇ ಬಂದಿರುವ ಮುಂಬೈ ದೇಸಿ ಕ್ರಿಕೆಟ್‌ನಲ್ಲಿ ಒಟ್ಟಾರೆ 62 ಟ್ರೋಫಿ ಗೆದ್ದಿದೆ. ರಣಜಿ ಕ್ರಿಕೆಟ್‌ನಲ್ಲಿ 42 ಬಾರಿ ಚಾಂಪಿಯನ್‌ ಆಗಿರುವ ತಂಡ, ಇರಾನಿ ಕಪ್‌ನಲ್ಲಿ 15ನೇ ಪ್ರಶಸ್ತಿ ಜಯಿಸಿದೆ. 4 ಬಾರಿ ವಿಜಯ್‌ ಹಜಾರೆ, 1 ಬಾರಿ ಸೆಯ್ಯದ್‌ ಮುಷ್ತಾಕ್‌ ಅಲಿ ಟಿ20 ಟೂರ್ನಿಯಲ್ಲಿ ಚಾಂಪಿಯನ್‌ ಎನಿಸಿಕೊಂಡಿದೆ.

PREV
Get the latest sports news in Kannada (ಕ್ರೀಡಾ ಸುದ್ದಿ) — live cricket scores, football highlights, tennis, badminton, and updates on all major sports events. Stay ahead with Kannada Prabha’s full-coverage sports reporting.

Recommended Stories

ರೋಲರ್‌ ಸ್ಕೇಟಿಂಗ್‌: ಮಂಗಳೂರು ಮೂಲದ ಅಹ್ಯಾನ್ ಅನ್ವರ್‌ಗೆ ಚಿನ್ನ
ಕ್ರಿಕೆಟಿಂದಲೇ ಪಾಕ್‌ ಹೊರಗಟ್ಟುವ ಟೈಂ ಬಂತಾ?