ಶೇಖ್‌ ಹಸೀನಾ ರಾಜೀನಾಮೆಗೆ ಒತ್ತಾಯಿಸಿ ವಿದ್ಯಾರ್ಥಿಗಳು ಮತ್ತೆ ಬೀದಿಗೆ : 91 ಜನರಿಗೆ ಗಾಯ

KannadaprabhaNewsNetwork |  
Published : Aug 05, 2024, 12:39 AM ISTUpdated : Aug 05, 2024, 04:14 AM IST
ಬಾಂಗ್ಲಾದೇಶ | Kannada Prabha

ಸಾರಾಂಶ

ರ್ಕಾರಿ ಹುದ್ದೆಗಳಲ್ಲಿ ಮೀಸಲು ಕಡಿತಕ್ಕೆ ಆಗ್ರಹಿಸಿ ಬಾಂಗ್ಲಾದೇಶದಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆ 150ಕ್ಕೂ ಹೆಚ್ಚು ಜನರನ್ನು ಬಲಿ ಪಡೆದು ಇನ್ನೇನು ತಣ್ಣಗಾಯಿತು ಅನ್ನುವಷ್ಟರಲ್ಲೇ ಮತ್ತೆ ಹಿಂಸಾತ್ಮಕ ರೂಪ ಪಡೆದಿದೆ.

ಢಾಕಾ: ಸರ್ಕಾರಿ ಹುದ್ದೆಗಳಲ್ಲಿ ಮೀಸಲು ಕಡಿತಕ್ಕೆ ಆಗ್ರಹಿಸಿ ಬಾಂಗ್ಲಾದೇಶದಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆ 150ಕ್ಕೂ ಹೆಚ್ಚು ಜನರನ್ನು ಬಲಿ ಪಡೆದು ಇನ್ನೇನು ತಣ್ಣಗಾಯಿತು ಅನ್ನುವಷ್ಟರಲ್ಲೇ ಮತ್ತೆ ಹಿಂಸಾತ್ಮಕ ರೂಪ ಪಡೆದಿದೆ. ಮೀಸಲು ಪರವಾಗಿ ಇದ್ದ ಪ್ರಧಾನಿ ಶೇಖ್‌ ಹಸೀನಾ ರಾಜೀನಾಮೆಗೆ ಒತ್ತಾಯಿಸಿ ವಿದ್ಯಾರ್ಥಿಗಳು ಮತ್ತೆ ಬೀದಿಗೆ ಇಳಿದಿದ್ದು, ಭಾನುವಾರ ದೇಶವ್ಯಾಪಿ ನಡೆದ ಹಿಂಸಾಚಾರದಲ್ಲಿ ಕನಿಷ್ಠ 91 ಜನರು ಸಾವನ್ನಪ್ಪಿ, ಸಾವಿರಾರು ಜನರು ಗಾಯಗೊಂಡಿದ್ದಾರೆ.

ಪ್ರತಿಭಟನೆ ಹಿಂಸಾರೂಪ ಪಡೆದ ಬೆನ್ನಲ್ಲೇ ರಾಜಧಾನಿ ಢಾಕಾದಲ್ಲಿ ಅನಿರ್ದಿಷ್ಟಾವಧಿಗೆ ಕರ್ಫ್ಯೂ ಜಾರಿಗೊಳಿಸಲಾಗಿದೆ. ಅಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ.ಇತ್ತೀಚೆಗೆ ಬಾಂಗ್ಲಾ ಸುಪ್ರೀಂಕೋರ್ಟ್‌ ಮೀಸಲು ಪ್ರಮಾಣ ಕಡಿತ ಮಾಡಿದ ಬಳಿಕ ಪ್ರತಿಭಟನೆ ಸ್ವಲ್ಪ ತಣ್ಣಗಾಗಿತ್ತು. ಆದರೆ ತಮ್ಮ ಇತರೆ ಬೇಡಿಕೆ ಈಡೇರಿಕೆ ಮತ್ತು ಪ್ರಧಾನಿ ಶೇಖ್‌ ಹಸೀನಾ ರಾಜೀನಾಮೆಗೆ ಆಗ್ರಹಿಸಿ ಲಕ್ಷಾಂತರ ಯುವಕರು ಮತ್ತೆ ದೇಶವ್ಯಾಪಿ ಬೀದಿಗಿಳಿದು ಅಸಹಕಾರ ಹೋರಾಟ ಆರಂಭಿಸಿದ್ದಾರೆ.

ಈ ಹೋರಾಟದ ವೇಳೆ ಪ್ರತಿಭಟನಾಕಾರರು ಮತ್ತು ಶೇಖ್‌ ಹಸೀನಾ ಅವರ ಅವಾಮಿ ಲೀಗ್‌, ಛತ್ರಾ ಲೀಗ್ ಮತ್ತು ಇತರೆ ಮಿತ್ರ ಪಕ್ಷಗಳ ಕಾರ್ಯಕರ್ತರ ನಡುವೆ ಬೀದಿ ಕಾಳಗ ನಡೆದಿದೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ಗ್ರೆನೇಡ್‌ಗಳನ್ನು ಬಳಸಿದ್ದಾರೆ. ಈ ವೇಳೆ ನಡೆದ ಹಿಂಸಾಚಾರದಲ್ಲಿ ಭಾನುವಾರ ಒಂದೇ ದಿನ 14 ಪೊಲೀಸರು ಸೇರಿ 91 ಜನರು ಸಾವನ್ನಪ್ಪಿದ್ದಾರೆ.ಹಸೀನಾ ಕಿಡಿ:

ಈ ನಡುವೆ ‘ಪ್ರತಿಭಟನೆಯ ಹೆಸರಲ್ಲಿ ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವವರು ವಿದ್ಯಾರ್ಥಿಗಳಲ್ಲ, ಉಗ್ರರು’ ಎಂದ ಹಸೀನಾ, ಅವರನ್ನು ಹತ್ತಿಕ್ಕುವಂತೆ ಕರೆ ನೀಡಿದ್ದರು. ಈ ಸಂಬಂಧ ಭದ್ರತಾ ವ್ಯವಹಾರಗಳ ರಾಷ್ಟ್ರೀಯ ಸಮಿತಿಯ ಸಭೆಯನ್ನೂ ಕರೆದಿದ್ದರು ಎಂದು ವರದಿಯಾಗಿದೆ.ಕಳೆದ ತಿಂಗಳು ಮೀಸಲಾತಿ ಸಂಬಂಧ ನಡೆದ ಪ್ರತಿಭಟನೆಯಲ್ಲಿ 150 ಮಂದಿ ಸಾವನ್ನಪ್ಪಿ ಅನೇಕರು ಗಾಯಗೊಂಡಿದ್ದರು. 10,000 ಅಧಿಕ ಜನರನ್ನು ಬಂಧಿಸಲಾಗಿತ್ತು.

ಸಂಪರ್ಕದಲ್ಲಿರಿ: ಭಾರತೀಯರಿಗೆ ಸರ್ಕಾರ ಸೂಚನೆ

ನವದೆಹಲಿ: ಬಾಂಗ್ಲಾದಲ್ಲಿ ಮತ್ತೆ ಹಿಂಸಾಚಾರ ಆರಂಭವಾದ ಬೆನ್ನಲ್ಲೇ ನಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿರಿ ಎಂದು ಬಾಂಗ್ಲಾದೇಶದಲ್ಲಿನ ಭಾರತೀಯರಿಗೆ ಕೇಂದ್ರ ಸರ್ಕಾರ ಸಲಹೆ ನೀಡಿದೆ. ಬಾಂಗ್ಲಾದೇಶದಲ್ಲಿ ವಿದ್ಯಾಭ್ಯಾಸ ಮತ್ತಿತರೆ ಕಾರಣಗಳಿಗಾಗಿ ತೆರಳಿದ 15000ಕ್ಕೂ ಹೆಚ್ಚು ಭಾರತೀಯರು ಇದ್ದಾರೆ. ಇತ್ತೀಚಿನ ಹಿಂಸಾಚಾರದ ವೇಳೆ ಹಲವರು ತವರಿಗೆ ಮರಳಿದ್ದರು. ಆದರೆ ಶಾಂತಿ ಸ್ಥಾಪನೆಯಾದ ಬಳಿಕ ಈ ಪೈಕಿ ಒಂದಷ್ಟು ಜನರು ಬಾಂಗ್ಲಾಕ್ಕೆ ಮರಳಿದ್ದರು.

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಆಸ್ಟ್ರೇಲಿಯಾದಲ್ಲಿ 426 ಕೆಜಿಯ ಗಾಂಧಿ ಕಂಚಿನ ಪ್ರತಿಮೆ ಧ್ವಂಸ, ಕಳವು
ಅಣ್ವಸ್ತ್ರ ಕ್ಷಿಪಣೀಲಿ ಇಂಧನ ಬದಲು ನೀರು ತುಂಬಿದ್ದ ಅಧ್ಯಕ್ಷ ಕ್ಸಿ ಆಪ್ತ!