ಮಧ್ಯಪ್ರಾಚ್ಯ ಸಂಘರ್ಷ ಮತ್ತಷ್ಟು ತಾರಕಕ್ಕೇರುವ ಸುಳಿವು: ಇಸ್ರೇಲ್ ಹೆಚ್ಚು ದಿನ ಇರಲ್ಲ, ಇರಾನ್ ಬಹಿರಂಗ ಘೋಷಣೆ

Published : Oct 05, 2024, 05:51 AM IST
Iran-Israel War

ಸಾರಾಂಶ

ಮಧ್ಯಪ್ರಾಚ್ಯ ಸಂಘರ್ಷ ತಾರಕಕ್ಕೆ ಏರಿರುವ ಹೊತ್ತಿನಲ್ಲೇ, ಇಸ್ರೇಲ್ ಇನ್ನು ಹೆಚ್ಚು ದಿನ ಉಳಿಯದು ಎಂದು ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾಖಮೇನಿ ಬಹಿರಂಗ ಘೋಷಣೆ ಮಾಡಿದ್ದಾರೆ

ಟೆಹ್ರಾನ್  : ಮಧ್ಯಪ್ರಾಚ್ಯ ಸಂಘರ್ಷ ತಾರಕಕ್ಕೆ ಏರಿರುವ ಹೊತ್ತಿನಲ್ಲೇ, ಇಸ್ರೇಲ್ ಇನ್ನು ಹೆಚ್ಚು ದಿನ ಉಳಿಯದು ಎಂದು ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾಖಮೇನಿ ಬಹಿರಂಗ ಘೋಷಣೆ ಮಾಡಿದ್ದಾರೆ. ಇಸ್ರೇಲ್ ಮೇಲೆ ಇರಾನ್ ಮೂರು ದಿನಗಳ ಹಿಂದೆ ನಡೆಸಿದ 200 ಕ್ಷಿಪಣಿ ದಾಳಿಯನ್ನು 'ಸಾರ್ವಜನಿಕ ಸೇವೆ' ಎಂದು ಬಣ್ಣಿಸಿದ್ದಾರೆ. ಅಲ್ಲದೆ ಅಗತ್ಯ ಬಿದ್ದರೆ ಇಸ್ರೇಲ್ ಮೇಲೆ ಮತ್ತೊಂದು ಸುತ್ತಿನಲ್ಲಿ ಭಾರೀ ದಾಳಿ ನಡೆಸುವುದಾಗಿಯೂ ಗುಡುಗಿದ್ದಾರೆ. ಇಸ್ರೇಲ್ ವಿರುದ್ಧ ಸಂಘರ್ಷದಲ್ಲಿ ನಿರತವಾ ಗಿರುವ ಹಮಾಸ್ ಹಾಗೂ ಹಿಜ್ಜುಲ್ಲಾ ಉಗ್ರರಿಗೆ ಇರಾನ್ ಬೆಂಬಲವಾಗಿ ನಿಂತಿದ್ದು, ಹಿಜ್ಜುಲ್ಲಾ ಉಗ್ರ ಸಂಘಟನೆ ಮುಖ್ಯಸ್ಥ ನಸ್ರಲ್ಲಾ ಹತ್ಯೆ ಬೆನ್ನಲ್ಲೇ ಇಸ್ರೇಲ್ ಮೇಲೆ ದಾಳಿ ನಡೆಸಿತ್ತು.

ಆ ದಾಳಿಗೆ ಇರಾನ್ ಮೇಲೆ ಪ್ರತೀಕಾರ ತೀರಿಸಿಕೊ ಳ್ಳುವುದಾಗಿ ಇಸ್ರೇಲ್ ಹೇಳುತ್ತಿರುವಾಗಲೇ, ಇಸ್ರೇಲ್ ಹೆಚ್ಚು ದಿನ ಇರುವುದಿಲ್ಲ ಎಂದು ಬಹಿರಂಗವಾಗಿ ಎಚ್ಚರಿಕೆ ನೀಡಿರುವುದು ಮಧ್ಯಪ್ರಾಚ್ಯ ಬಿಕ್ಕಟ್ಟು ಮತ್ತಷ್ಟು ವಿಕೋಪಕ್ಕೆ ಹೋಗುವ ಸುಳಿವನ್ನು ನೀಡಿದೆ. ವಿಶೇಷವೆಂದರೆ, ಐದು ವರ್ಷದ ಬಳಿಕ ಶುಕ್ರವಾರ ಪ್ರಾರ್ಥನೆ ವೇಳೆ ಕಾಣಿಸಿಕೊಂಡು ಹತ್ತಾರು ಸಹಸ್ರ ಜನರನ್ನು ಉದ್ದೇಶಿಸಿಖಮೇನಿ ಮಾತನಾಡಿದರು. ಇಸ್ರೇಲ್‌ನ ಹಿಟ್‌ಲಿಸ್ಟ್‌ನಲ್ಲಿ ರುವ 85 ವರ್ಷದ ಖಮೇನಿ ತಮ್ಮ ಕೈಯಲ್ಲಿ ರಷ್ಯಾ ನಿರ್ಮಿತ ಅತ್ಯಾಧುನಿಕ ರೈಫಲ್ ಹಿಡಿದುಕೊಂಡೇ ಇಸ್ರೇಲ್‌ಗೆ ಭವಿಷ್ಯದ ಸಂದೇಶ ರವಾನಿಸುವ ಪ್ರಯತ್ನ ಮಾಡಿದರು.

ಇತ್ತೀಚೆಗಷ್ಟೇ ಇಸ್ರೇಲ್ ಸೇನಾಪಡೆ ಲೆಬನಾನ್ ನ ಹಿಜ್ಜುಲ್ಲಾ ನಾಯಕ ಹಸನ್ ನಲ್ಲಾ ಹಮಾಸ್ ನಾಯಕ ಹನಿಯೇನನ್ನು ಹತ್ಯೆಗೈ ದಿತ್ತು. ಜೊತೆಗೆ ಇಸ್ರೇಲ್‌ನ ಮುಂದಿನ ಗುರಿ ಖಮೇನಿ ಇರಬಹುದು ಎಂದು ವರದಿಗಳು ಹೇಳಿದ್ದವು. ಅದರ ಬೆನ್ನಲ್ಲೇ ಇಸ್ರೇಲ್ ವಿರುದ್ಧ ಈ ನಾಯಕ ಗುಡುಗಿದ್ದಾರೆ. ಇಸ್ರೇಲ್‌ಗೆ ಎಚ್ಚರಿಕೆ: ಇತ್ತೀಚೆಗೆ ಇಸ್ರೇಲ್‌ನ ವಾಯುದಾಳಿಗೆ ಬಲಿಯಾದ ಹಿಟ್ಟುಲ್ಲಾ ನಾಯಕ ಹಸನ್ ನಸ್ರಲ್ಲಾಪರವಾಗಿ ಶುಕ್ರವಾರ ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಹಮ್ಮಿ ಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಖಮೇನಿ 'ಇಸ್ರೇಲಿಗಳ ಆಕ್ರಮಣಶೀಲತೆಗೆ ಇರಾನ್ ಹೆದರುವುದಿಲ್ಲ.

ಶತ್ರುವಿನ ಇಂಥ ದಾಳಿ ವೇಳೆ ಧರ್ಮದ ಬಗ್ಗೆ ಇನ್ನಷ್ಟು ನಂಬಿಕೆ ವ್ಯಕ್ತಪಡಿಸಿ ಧೈರ್ಯದಿಂದ ನಿಲ್ಲಬೇಕು. ಯುದ್ಧದಲ್ಲಿ ಹುತಾತ್ಮರಾದವರು ಮತ್ತು ರಕ್ತವನ್ನು ನೋಡಿ ನಿಮ್ಮ ನಿರ್ಧಾರ ಅಲುಗಾಡಬಾರದು. ಬದಲಿಗೆ ಇನ್ನಷ್ಟು ಹಠ ತೊಟ್ಟು ಮುನ್ನುಗ್ಗಬೇಕು ಎಂದು ಕರೆಕೊಟ್ಟರು. ಇದೇ ವೇಳೆ ಇತ್ತೀಚಿಗೆ ಇರಾನ್ ನಡೆಸಿದ ಕ್ಷಿಪಣಿ ದಾಳಿಗೆ ಪ್ರತಿಯಾಗಿ ಇಸ್ರೇಲ್ ಪ್ರತೀ ಕಾರಕ್ಕೆ ಮುಂದಾದರೆ ನಾವೂ ಸೂಕ್ತ ತಿರುಗೇಟು ನೀಡಬೇಕಾಗಿ ಬರಲಿದೆ. ಹಾಗಾದಲ್ಲಿ ಇಸ್ರೇಲ್ ಹೆಚ್ಚು ದಿನ ಉಳಿಯದು' ಎಂದು ಖಮೇನಿ ಗಂಭೀರ ಎಚ್ಚರಿಕೆ ನೀಡಿದರು.

ಈ ನಡುವೆ 2023ರ ಅ.7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿ ಪ್ಯಾಲೆಸ್ತೀನ್ ಜನರು ಕೈಗೊಂಡ ಕಾನೂನುಬದ್ದ ಕ್ರಮ. ಜೊತೆಗೆ ಇತ್ತೀಚೆಗೆ ಇಸ್ರೇಲ್ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿ ಕೂಡ ಅಂತಾರಾಷ್ಟ್ರೀಯ ಕಾನೂನು, ದೇಶದ ಕಾನೂನು ಮತ್ತು ಇಸ್ಲಾಮಿಕ್ ನಂಬಿಕೆಗಳ ಆಧಾರದಲ್ಲಿ ನಡೆದದ್ದು' ಎಂದು ಸಮರ್ಥಿಸಿಕೊಂಡ ಖಮೇನಿ ಇಸ್ರೇಲ್ ವಿರುದ್ಧದ ಯುದ್ಧಕ್ಕೆ ಸಿದ್ದರಿರುವಂತೆ ಆಫ್ಘಾನಿಸ್ತಾನದಿಂದ ಯೆಮೆನ್, ಇರಾನ್‌ನಿಂದ ಗಾಜಾದವರೆಗಿನ ದೇಶಗಳಿಗೆ, ವಿಶೇಷವಾಗಿ ಲೆಬನಾನ್ ಮತ್ತು ಪ್ಯಾಲೆಸ್ತೀನ್ ಜನರಿಗೆ ಕರೆ ನೀಡಿದರು. 5 ವರ್ಷ ಬಳಿಕ ಬಹಿರಂಗ ದರ್ಶನ: 2020ರಲ್ಲಿ ಅಮೆರಿಕ ನಡೆಸಿದ ಡೋನ್ ದಾಳಿಯಲ್ಲಿ ರೆವಲ್ಯೂಷನರಿ ಗಾರ್ಡ್‌ನ ಖಾಸಿಮ್ ಸೊಲೈಮಾನಿ ಹತ್ಯೆಯಾದ ಬಳಿಕ ಖಮೇನಿ ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ. ಅದಾದ ನಂತರ ಇದೀಗ ಶುಕ್ರವಾರ ನಡೆದ ಪ್ರಾರ್ಥನಾ ಸಭೆಯಲ್ಲಿ ಮೊದಲ ಬಾರಿ ಕಾಣಿಸಿಕೊಂಡರು.

ಐತಿಹಾಸಿಕ ಮಸೀದಿ ಬಳಿ ಭಾಷಣ: 1979ರಲ್ಲಿ ಅಂದಿನ ಇರಾನ್ ಸರ್ಕಾರದ ವಿರುದ್ದ ಅಯತೊಲ್ಲಾ ಖಮೇನಿ ನೇತೃತ್ವದಲ್ಲಿ ಸಾವಿರಾರು ಜನರು ದಂಗೆ ಎದ್ದಿದ್ದರು. ಈ ಇಸ್ಲಾಮಿಕ್ ಕ್ರಾಂತಿಗೆ ಟೆಹ್ರಾನ್‌ನ ಇಮಾಂ ಖಮೇನಿ ಮಸೀದಿ ಸಾಕ್ಷಿಯಾಗಿತ್ತು. ಶುಕ್ರವಾರ ಮತ್ತೆ ಅದೇ ಮಸೀದಿ ಸ್ಥಳದಲ್ಲೇ ಭಾಷಣ ಮಾಡುವ ಮೂಲಕ, ಇಸ್ಲಾಮಿಕ್ ಕ್ರಾಂತಿ ಸೋತಿಲ್ಲ ಎಂಬ ಸಂದೇಶ ರವಾನಿಸುವ ಯತ್ನವನ್ನು ಖಮೇನಿ ಮಾಡಿದರು.

ಖಮೇನಿ ಯಾರು?

- ಇರಾನ್‌ನ ಪರಮೋಚ್ಚ ರಾಜಕೀಯ, ಧಾರ್ಮಿಕ ನಾಯಕ. ರಾಷ್ಟ್ರದ ಅಧ್ಯಕ್ಷರಿಗಿಂತ ಇವರು ಮೇಲಿರುತ್ತಾರೆ

- ಸೇನೆ, ನ್ಯಾಯಾಂಗ, ದೇಶದ ರೇಡಿಯೋ, ದೂರದರ್ಶನ, ಸರ್ಕಾರದ ಪ್ರಮುಖ ಇಲಾಖೆಗೆ ಇವರೇ ಬಾಸ್‌

- ಇರಾನ್‌ನ ಆಂತರಿಕ ಹಾಗೂ ವಿದೇಶಾಂಗ ನೀತಿಯು ರೂಪಿತವಾಗುವುದು ಖಮೇನಿ ಸೂಚನೆಯ ಮೇರೆಗೆ

- ಒಂದು ದೇಶದ ವಿರುದ್ಧ ಯುದ್ಧ ಸಾರುವುದು ಅಥವಾ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವುದು ಖಮೇನಿಯೇ

- 1979ರಲ್ಲಿ ಇಸ್ಲಾಮಿಕ್‌ ಗಣತಂತ್ರವಾಗಿ ಇರಾನ್‌ ಸ್ಥಾಪನೆಯಾದ ಬಳಿಕ ರಾಹೋಲ್ಲ ಪರಮೋಚ್ಚ ನಾಯಕ ಆಗಿದ್ದರು

- ಅವರ ಸಾವಿನ ಬಳಿಕ 1989ರಲ್ಲಿ ಅಯತೊಲ್ಲಾ ಖಮೇನಿ ನೇಮಕವಾದರು. ಜೀವಿತಾವಧಿವರೆಗೆ ಇವರೇ ನಾಯಕ

ಇಸ್ರೇಲ್‌ ಸೇಡು ತೀರಿಸಿಕೊಳ್ಳುತ್ತಾ?

- ಅ.1ರಂದು ಇಸ್ರೇಲ್‌ ಮೇಲೆ 200 ಕ್ಷಿಪಣಿಗಳಿಂದ ಇರಾನ್‌ ದಾಳಿ ಮಾಡಿತ್ತು. ಆ ಬಳಿಕ ಇಸ್ರೇಲ್‌ ಕೊತಕೊತ ಕುದಿಯುತ್ತಿದೆ

- ಇರಾನ್‌ ಮೇಲೆ ಇಸ್ರೇಲ್‌ ಪ್ರತೀಕಾರ ತೀರಿಸಿಕೊಳ್ಳುವ ಮಾತನ್ನು ಆಡಿದ್ದು, ಇಡೀ ವಿಶ್ವವೇ ಅದನ್ನು ಎದುರು ನೋಡುತ್ತಿದೆ

- ಇರಾನ್‌ ಕ್ಷಿಪಣಿಗಳನ್ನು ಇಸ್ರೇಲ್‌ ತನ್ನ ಸೇನಾ ಶಕ್ತಿ ಬಳಸಿ ಹೊಡೆದುರುಳಿಸಿತ್ತು. ಆದರೆ ಇರಾನ್‌ ಬಳಿ ಆ ಸಾಮರ್ಥ್ಯ ಇಲ್ಲ

- ಒಂದು ವೇಳೆ ಪ್ರತೀಕಾರಕ್ಕಾಗಿ ಇಸ್ರೇಲ್‌ ದಾಳಿಗೆ ಇಳಿದರೆ ಇರಾನ್‌ನಲ್ಲಿ ಭಾರಿ ಸಾವು-ನೋವು ಸಂಭವಿಸಬಹುದು

- ಆದರೆ ಅಂತಹ ದಾಳಿ ಮಧ್ಯಪ್ರಾಚ್ಯದಲ್ಲಿ ಘನಘೋರ ಯುದ್ಧಕ್ಕೆ ಕಾರಣವಾಗಬಹುದು ಎಂಬ ಭೀತಿಯೂ ಇದೆ

- ಆಗ ಜಾಗತಿಕ ತೈಲ ಪೂರೈಕೆ, ವಹಿವಾಟಿನ ಮೇಲೆಯೇ ಪರಿಣಾಮವಾಗುತ್ತದೆ. ಅದನ್ನು ತಪ್ಪಿಸಲು ಜಗತ್ತು ಯತ್ನಿಸುತ್ತಿದೆ

- ಇರಾನ್‌ನಂತಹ ದೇಶದ ಮೇಲೆ ದಾಳಿ ನಡೆಸಲು ಅಮೆರಿಕದ ರಾಜಕೀಯ, ಸೇನಾ ನೆರವನ್ನು ಇಸ್ರೇಲ್‌ ನಿರೀಕ್ಷಿಸುತ್ತಿದೆ

PREV
Stay updated with latest International news (ಅಂತರಾಷ್ಟ್ರೀಯ ಸುದ್ದಿ) - global headlines, international politics, world events, economy, and breaking news from across the globe at KannadaPrabha News.

Recommended Stories

ಬಾಂಗ್ಲಾ ಸರ್ಕಾರ ಕೆಡವಿದ ಜೆನ್‌-ಝೀಗಳೇನಾದರು?
ಉ.ಕೊರಿಯಾ: ಕಿಮ್‌ ಪಟ್ಟಕ್ಕಾಗಿ 13 ವರ್ಷದ ಪುತ್ರಿ, ಸಹೋದರಿ ನಡುವೆ ಜಟಾಪಟಿ