ಸಾರಾಂಶ
ಪೊಲೀಸರ ಬಗ್ಗೆ ಸಮಾಜದ ಪರಿಕಲ್ಪನೆ ಬದಲಾಯಿಸಿ ಜನಸ್ನೇಹಿ ವ್ಯವಸ್ಥೆ ರೂಪಿಸುವ ಸದುದ್ದೇಶದಿಂದ ರಾಜ್ಯಾದ್ಯಂತ ‘ಮನೆ-ಮನೆಗೆ ಪೊಲೀಸ್’ ಎಂಬ ಹೊಸ ಕಾರ್ಯಕ್ರಮ ಜಾರಿಗೊಳಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಪೊಲೀಸರ ಬಗ್ಗೆ ಸಮಾಜದ ಪರಿಕಲ್ಪನೆ ಬದಲಾಯಿಸಿ ಜನಸ್ನೇಹಿ ವ್ಯವಸ್ಥೆ ರೂಪಿಸುವ ಸದುದ್ದೇಶದಿಂದ ರಾಜ್ಯಾದ್ಯಂತ ‘ಮನೆ-ಮನೆಗೆ ಪೊಲೀಸ್’ ಎಂಬ ಹೊಸ ಕಾರ್ಯಕ್ರಮ ಜಾರಿಗೊಳಿಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.ಮಂಗಳವಾರ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಮೊದಲಿನಿಂದಲೂ ಪೊಲೀಸರ ಕುರಿತು ಜನರಲ್ಲಿ ವಿರೋಧಾಭಾಸ ಅಭಿಪ್ರಾಯವಿದೆ. ಸಮಾಜದ ಈ ಪರಿಕಲ್ಪನೆ ಬದಲಾಯಿಸಿ ಪೊಲೀಸರನ್ನು ಹೆಚ್ಚು ಜನ ಸ್ನೇಹಿಯಾಗಿಸುವ ನಿಟ್ಟಿನಲ್ಲಿ ಇಲಾಖೆ ಮುನ್ನಡೆಯುತ್ತಿದೆ. ಇನ್ನು ಮುಂದೆ ಜನರ ದುಃಖ ದುಮ್ಮಾನ ಆಲಿಸಲು ‘ಮನೆ-ಮನೆ ಪೊಲೀಸ್’ ಎಂಬ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು.ತಮ್ಮ ಠಾಣಾ ಸರಹದ್ದಿನ ಪ್ರತಿ ಮನೆಗಳಿಗೆ ಪೊಲೀಸರು ಭೇಟಿ ನೀಡಿ ಜನರ ಸಂಕಷ್ಟ ಕೇಳಬೇಕು. ಅಲ್ಲದೆ ಠಾಣೆಗಳಿಗೆ ನ್ಯಾಯ ಅರಸಿ ಬರುವ ನೊಂದವರ ಜತೆ ಸೌಜನ್ಯಯುತವಾಗಿ ನಡೆದುಕೊಳ್ಳುವಂತೆ ಸೂಚಿಸಿದ್ದೇನೆ ಎಂದರು.
ಸೈಬರ್ ಕಮಾಂಡ್ ಸೆಂಟರ್ಗೆ ಶೀಘ್ರ ಚಾಲನೆ:ದೇಶದಲ್ಲೇ ಸೈಬರ್ ಅಪರಾಧ ಪ್ರಕರಣಗಳ ತನಿಖೆಗೆ ಪ್ರತ್ಯೇಕ ವಿಭಾಗ ಸ್ಥಾಪಿಸಲಾಗಿದ್ದು, ಶೀಘ್ರದಲ್ಲೇ ಸೈಬರ್ ಕಮಾಂಡ್ ಸೆಂಟರ್ಗೆ ಚಾಲನೆ ನೀಡಲಾಗುತ್ತದೆ. ಕಳೆದ ವರ್ಷ 16 ಸಾವಿರ ಪ್ರಕರಣಗಳು ದಾಖಲಾಗಿದ್ದು, 1800 ಕೋಟಿ ವಂಚನೆಯಾಗಿತ್ತು. ಈ ಪೈಕಿ ಶೇ.50 ರಷ್ಟು ಹಣವು ಸಂತ್ರಸ್ತರಿಗೆ ಮರು ಪಾವತಿಯಾಗಿದೆ ಎಂದು ಸಚಿವರು ತಿಳಿಸಿದರು.