ಸಾರಾಂಶ
ಮದ್ದೂರು : ದ್ವಿತೀಯ ಪಿಯುಸಿ ವಾಣಿಜ್ಯ ಶಾಸ್ತ್ರದ ಎರಡು ವಿಷಯಗಳಲ್ಲಿ ಫೇಲಾದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಶಿವಪುರದಲ್ಲಿ ನಡೆದಿದೆ.
ದುಶ್ಯಂತ್ (19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಮಂಗಳವಾರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ವಾಣಿಜ್ಯ ಶಾಸ್ತ್ರ ವಿಭಾಗದ ಎರಡು ವಿಷಯಗಳಲ್ಲಿ ಅನುತ್ತೀರ್ಣನಾಗಿರುವುದು ಗೊತ್ತಾಯಿತು. ಇದರಿಂದ ಮನನೊಂದು ಅಂಗಡಿಯಲ್ಲಿ ದಿನಸಿ ವಸ್ತುಗಳಿಗೆ ಹುಳು ಬರದಂತೆ ಬಟ್ಟೆಯಲ್ಲಿ ಕಟ್ಟಿಡುವ ಮಾತ್ರೆಗಳನ್ನು ಸೇವಿಸಿದ್ದನು. ಮನೆಯವರಿಗೆ ವಿಚಾರ ತಿಳಿದು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಅಷ್ಟರಲ್ಲಿ ಮೃತಪಟ್ಟಿದ್ದನು. ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮದ್ದೂರು ಪಟ್ಟಣದಲ್ಲಿ ಸರಣಿ ಕಳ್ಳತನ
ಮದ್ದೂರು ಪಟ್ಟಣದ ಮಳವಳ್ಳಿ ರಸ್ತೆಯ ಬಿಜೆಪಿ ಕಚೇರಿ ಮುಂಭಾಗದ ರವೀಂದ್ರ ಕಾಂಪ್ಲೆಕ್ಸ್ ನ ನಾಲ್ಕು ಅಂಗಡಿ ಗಳಲ್ಲಿ ಸರಣಿ ಕಳ್ಳತನ ನಡೆದಿದ್ದು, ನಗದು ಸೇರಿದಂತೆ ಹಲವು ವಸ್ತುಗಳನ್ನು ದೋಚಿರುವ ಘಟನೆ ಸೋಮವಾರ ರಾತ್ರಿ ಜರುಗಿದೆ.
ಕಾಂಪ್ಲೆಕ್ಸ್ ನಲ್ಲಿರುವ ಈಶ್ವರಿ ಆಗ್ರೋ ಟೆಕ್ ಮೇಲ್ಚಾವಣಿ ಮುರಿದು ಒಳನುಗ್ಗಿರುವ ಕಳ್ಳರು ಆಗ್ರೋ ಟೆಕ್ ಕ್ಯಾಶ್ ಬಾಕ್ಸ್ ನಲ್ಲಿ ಇದ್ದ 90 ಸಾವಿರ ರು. ಹಣವನ್ನು ಲೂಟಿ ಮಾಡಿದ್ದಾರೆ. ನಂತರ ಪಕ್ಕದ ನ್ಯಾಚುರಲ್ ಸ್ಟೋನ್ , ಜೀವನ್ ಮಾರ್ಗ ಎಂಟರ್ ಪ್ರೈಸಸ್ ಹಾಗೂ ಗುರು ರಾಘವೇಂದ್ರ ದಿನಸಿ ಅಂಗಡಿ ಶೀಟ್ ಗಳನ್ನು ಜಖಂಗೊಳಿಸಿ ದಿನಸಿ ಅಂಗಡಿ ಯಲ್ಲಿದ್ದ ಸುಮಾರು ಮೂರು ಸಾವಿರ ರು ನಗದು ಸೇರಿದಂತೆ ಹಲವು ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.
ಉಳಿದ ಅಂಗಡಿಗಳಲ್ಲಿ ಯಾವುದೇ ವಸ್ತುಗಳು ಕಳುವಾಗಿಲ್ಲ. ಕಳ್ಳರು ಶೀಟ್ ಒಡೆದು ಒಳನುಗ್ಗಿ ಹಣ ದೋಚಿರುವ ದೃಶ್ಯ ಈಶ್ವರಿ ಆಗ್ರೋ ಟೆಕ್ ನ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಈ ಸಂಬಂಧ ಅಂಗಡಿ ಮಾಲೀಕ ನವೀನ್ ಕುಮಾರ್ ಶೆಟ್ಟಿ ನೀಡಿದ ದೂರಿನ ಅನ್ವಯ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲುಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.