ಸಾರಾಂಶ
ಪ್ರಿಯಾ ಕೆರ್ವಾಶೆ
ತಾರಾಗಣ: ಅನೂಪ್ ರೇವಣ್ಣ, ಧನ್ಯಾ ರಾಮ್ಕುಮಾರ್, ಅರವಿಂದ್ ರಾವ್, ರಾಜೇಶ್ ನಟರಂಗ, ಕೃಷ್ಣ ಹೆಬ್ಬಾಲೆ
ನಿರ್ದೇಶನ: ಪುನೀತ್ ನಾಗರಾಜು
ರೇಟಿಂಗ್: 3.5
ಒಂದು ಕಡೆ ಶ್ರೀಮಂತ ಉದ್ಯಮಿಗಳ ಮಕ್ಕಳ ಕಿಡ್ನಾಪ್ ಕೇಸ್ ಬಗ್ಗೆ ಸೀರಿಯಸ್ ಇನ್ವೆಸ್ಟಿಗೇಶನ್, ಇನ್ನೊಂದು ಕಡೆ ಕಿಡ್ನಾಪ್ ಜಾಲದ ಆಸಕ್ತಿಕರ ಕಥೆ. ಪರಸ್ಪರ ಕನೆಕ್ಟೆಡ್ ಆಗಿದ್ದೇ ಭಿನ್ನ ದಾರಿಯಲ್ಲಿ ಸಾಗುವ ಈ ಎರಡು ಸ್ಟೋರಿಲೈನ್ಗಳು ಸಂಧಿಸುವಾಗ ಅಲ್ಲೊಂದು ಮ್ಯಾಜಿಕಲ್ ಟ್ವಿಸ್ಟ್.
ಒಂದು ರೀತಿಯಲ್ಲಿ ನಮ್ಮ ಊಹೆಗಳ ಜೊತೆಗೇ ಕಣ್ಣಾಮುಚ್ಚಾಲೆಯಾಡುವ ಸಿನಿಮಾ ಹೈಡ್ ಆ್ಯಂಡ್ ಸೀಕ್. ಕುತೂಹಲವೇ ಇದರ ಜೀವದ್ರವ್ಯ.
ಶ್ರೀಮಂತ ಉದ್ಯಮಿಯ ಮಗಳ ಕಿಡ್ನಾಪ್ ಆಗಿದೆ. ಉದ್ಯಮಿಗೆ ಈ ಕಿಡ್ನಾಪ್ ಬಗ್ಗೆ ಸಂಶಯ ಇರುವುದು ಸ್ವಂತ ತಮ್ಮನ ಬಗ್ಗೆಯೇ. ಅದೇ ರೀತಿ ತಮ್ಮನ ಮಗಳ ಕಿಡ್ನಾಪ್ ಕೂಡಾ ಆಗಿದೆ, ಆತನ ಸಂದೇಹ ಅಣ್ಣನ ಬಗೆಗೆ. ಆದರೆ ನಿಜವಾದ ಕಿಡ್ನಾಪರ್ಗಳು ಯಾರು? ಅವರ ಗೇಮ್ ಪ್ಲಾನ್ ಏನು? ಈ ಎಲ್ಲದರ ಹಿಂದಿನ ಮಾಸ್ಟರ್ ಮೈಂಡ್ ಯಾವುದು ಅನ್ನುವುದು ಸಿನಿಮಾದಲ್ಲಿದೆ.
ನಿರ್ದೇಶಕ ಪುನೀತ್ ನಾಗರಾಜು ಅವರಿಗೆ ಇಂಥದ್ದೊಂದು ಇನ್ವೆಸ್ಟಿಗೇಟಿವ್ ಥ್ರಿಲ್ಲರ್ ಕಥೆಯ ಟ್ರೀಟ್ಮೆಂಟ್ ಸಿದ್ಧಿಸಿದೆ. ಚಿತ್ರವನ್ನು ಕಣ್ಣಾಮುಚ್ಚಾಲೆ ಆಟದಷ್ಟೇ ಇಂಟರೆಸ್ಟಿಂಗ್ ಆಗಿ ತೆಗೆದುಕೊಂಡು ಹೋಗಿದ್ದಾರೆ.
ಆದರೆ ಧನ್ಯಾ ರಾಮ್ ಕುಮಾರ್ ಮಾಡಿರುವ ಹಾಸಿನಿ ಪಾತ್ರದ ಬಗ್ಗೆ ಇನ್ನಷ್ಟು ಧ್ಯಾನ ಬೇಕಿತ್ತು. ಹೀರೋ ಪಾತ್ರದ ಜಾಣ್ಮೆಯನ್ನು ವೈಭವೀಕರಿಸುವ ಭರದಲ್ಲಿ ನಿರ್ದೇಶಕರು ಈ ಸೂಕ್ಷ್ಮ ಮರೆತಂತಿದೆ.
ಉಳಿದಂತೆ ಧನ್ಯಾ ರಾಮ್ಕುಮಾರ್ ನಟನೆ ಚೆನ್ನಾಗಿದೆ. ಅನೂಪ್ ಮೊದಲ ಪ್ರಯತ್ನದಲ್ಲೇ ತನ್ನ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಪಳಗಿದ ನಟ ಅರವಿಂದ ರಾವ್ ಪಾತ್ರ ನಿಭಾಯಿಸಿದ ರೀತಿ ಪರಿಣಾಮಕಾರಿ.
ಸಣ್ಣಪುಟ್ಟ ಕೊರತೆಗಳ ಹೊರತಾಗಿ ಸಿನಿಮಾ ಚುರುಕು ಚಲನೆ, ಉತ್ತಮ ನಿರೂಪಣೆ, ಮುಖ್ಯವಾಗಿ ಮನರಂಜನೆ ನೀಡುವಲ್ಲಿ ಗೆದ್ದಿದೆ.