ಸಾರಾಂಶ
ಆರ್ಬಿಐ, ಎಚ್ಡಿಎಫ್ಸಿ, ಐಸಿಐಸಿಐಬ್ಯಾಂಕ್ಗಳನ್ನು ಸ್ಫೋಟಿಸುವುದಾಗಿ ಬೆದರಿಕೆ ಸಂದೇಶ ರವಾನಿಸಿದ್ದ ಅನಾಮಿಕರು. ಪೊಲೀಸರು 11 ಕಡೆ ತಪಾಸಣೆ ನಡೆಸಿದ ಬಳಿಕ ಹುಸಿ ಬಾಂಬ್ ಕರೆ ಎಂದು ದೃಢಪಡಿಸಿದ್ದಾರೆ.
ಮುಂಬೈ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹಾಗೂ ರಾಜೀನಾಮೆ ನೀಡದಿದ್ದಲ್ಲಿ ಮಂಗಳವಾರ ಮಧ್ಯಾಹ್ನ 1:30ಕ್ಕೆ ಮುಂಬೈನ 11 ವಿವಿಧ ಪ್ರದೇಶಗಳಲ್ಲಿ ಬಾಂಬ್ ಸ್ಫೋಟಿಸುವುದಾಗಿ ಬಂದ ಇ-ಮೇಲ್ ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ತಪಾಸಣೆ ಬಳಿಕ ಇದು ಹುಸಿ ಬಾಂಬ್ ಕರೆ ಎಂದು ಸಾಬೀತಾಗಿದೆ.
‘ಖಿಲಾಫತ್ ಇಂಡಿಯಾ’ ಎಂಬ ಹೆಸರಿನಲ್ಲಿ ಬೆಳಗ್ಗೆ 10:50ಕ್ಕೆ ಆರ್ಬಿಐ ಗವರ್ನರ್ಗೆ ಇ-ಮೇಲ್ ಬಂದಿತ್ತು. ಅದರಲ್ಲಿ, ‘ಆರ್ಬಿಐ ಗವರ್ನರ್ ಹಾಗೂ ಹಣಕಾಸು ಸಚಿವರು ಭಾರತದ ಬಹುದೊಡ್ಡ ಹಗರಣ ಮಾಡಿರುವುದಕ್ಕೆ ನಮ್ಮ ಬಳಿ ಸಾಕ್ಷ್ಯಗಳಿವೆ. ಅವರು ರಾಜೀನಾಮೆ ನೀಡಿ ಮಾಧ್ಯಮಗಳ ಮುಂದೆ ಹಗರಣದ ಕುರಿತು ತಪ್ಪೊಪ್ಪಿಕೊಳ್ಳದಿದ್ದಲ್ಲಿ ಆರ್ಬಿಐ ಕಚೇರಿ, ಎಚ್ಡಿಎಫ್ಸಿ, ಐಸಿಐಸಿಐ ಬ್ಯಾಂಕ್ ಮುಂತಾದ 11 ಕಡೆ ಮಧ್ಯಾಹ್ನ 1:30ಕ್ಕೆ ಬಾಂಬ್ ಸ್ಫೋಟಿಸಲಾಗುವುದು’ ಎಂದು ಬೆದರಿಸಲಾಗಿತ್ತು.ಈ ಹಿನ್ನೆಲೆಯಲ್ಲಿ ಆರ್ಬಿಐ ಕಚೇರಿಯ ಭದ್ರತಾ ಅಧೀಕ್ಷಕ ಸಂಜಯ್ ಹರಿಶ್ಚಂದ್ರ ಪವಾರ್ ಅವರು ಎಂಆರ್ಎ ಮಾರ್ಗ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಎಫ್ಐಆರ್ ಕೂಡ ದಾಖಲಾಗಿದೆ. ನಂತರ ಪೊಲೀಸರು, ‘ಇ-ಮೇಲ್ನಲ್ಲಿ ಉಲ್ಲೇಖಿಸಿದ ಸ್ಥಳಗಳನ್ನು ಬಾಂಬ್ ನಿಷ್ಕ್ರಿಯ ದಳದೊಂದಿಗೆ ತಪಾಸಣೆ ನಡೆಸಿ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡು ಬಂದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.