ನವದೆಹಲಿ: ಹೇರಳ ತೈಲ ನಿಕ್ಷೇಪವಿರುವ ರಾಷ್ಟ್ರಗಳಲ್ಲಿ ಒಂದಾದ ಇರಾನ್‌ ಯುದ್ಧಗ್ರಸ್ತವಾಗಿ, ಹೋರ್ಮುಜ್‌ ಜಲಸಂಧಿ ಬಂದ್‌ ಆಗಿರುವ ಹೊತ್ತಿನಲ್ಲಿ ವಿಶ್ವಾದ್ಯಂತ ಇಂಧನ ಬೆಲೆ ಹೆಚ್ಚಳ ಹಾಗೂ ಕೊರತೆಯ ಭೀತಿ ಶುರುವಾಗಿದೆ. ಹೀಗಿರುವಾಗ, 3ನೇ ಅತಿದೊಡ್ಡ ತೈಲ ಆಮದುದಾರ ದೇಶವಾದ ಭಾರತದಲ್ಲಿ 10 ದಿನಗಳಿಗಾಗುವಷ್ಟು ಕಚ್ಚಾತೈಲ ಮತ್ತು 5-7 ದಿನಗಳಿಗೆ ಸಾಕಾಗುವಷ್ಟು ತೈಲದ ದಾಸ್ತಾನು ಇದೆ ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಕರ್ನಾಟಕದ ಮಂಗಳೂರು(15 ಲಕ್ಷ ಮೆಟ್ರಿಕ್‌ ಟನ್‌), ಪಾದೂರು(25 ಲಕ್ಷ ಮೆಟ್ರಿಕ್‌ ಟನ್‌) ಮತ್ತು ಆಂಧ್ರದ ವಿಶಾಖಪಟ್ಟಣಂ(13.3 ಲಕ್ಷ ಮೆಟ್ರಿಕ್‌ ಟನ್‌) ಸೇರಿ ಭಾರತದಲ್ಲಿ ಒಟ್ಟು 3 ಭೂಗತ ತೈಲಾಗಾರಗಳಿದ್ದು, ಇವುಗಳಿಂದ ದೇಶಾದ್ಯಂತ ಇಂಧನ ಪೂರೈಸಲಾಗುವುದು.

ಜತೆಗೆ, ದಾಸ್ತಾನು ಖಾಲಿಯಾಗುವ ಸಂದರ್ಭ ಬಂದರೂ ರಷ್ಯಾದ ಆಮದನ್ನು ನೆಚ್ಚಿಕೊಳ್ಳಬಹುದು. ಆದರೆ ಬೆಲೆ ಹೆಚ್ಚಳ ಬಿಸಿ ತಟ್ಟುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಈಗಾಗಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜನವರಿಗೆ ಹೋಲಿಸಿದರೆ ಅದರ ಬೆಲೆಯಲ್ಲಿ ಶೇ.16ರಷ್ಟು ಹೆಚ್ಚಳವಾಗಿದೆ. ಸದ್ಯ ಬ್ಯಾರಲ್‌ಗೆ 6830 ರು. ಇರುವ ದರ ಮುಂದಿನ ದಿನಗಳಲ್ಲಿ 7286 ರು.ಗೆ ಹೆಚ್ಚಳವಾಗಲಿದೆ ಎಂದು ಅಂದಾಜಿಸಲಾಗಿದೆ.