ಸಾರಾಂಶ
ಕೊಟ್ಟಾಯಂ: ವಯನಾಡು ಭೂಕುಸಿತ ದುರಂತದ ಕರಾಳ ನೆನಪು ಮಾಸುವ ಮುನ್ನವೇ ಕೊಟ್ಟಾಯಂ ಜಿಲ್ಲೆಯ ಗುಡ್ಡಗಾಡು ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ.
ಶನಿವಾರ ತಡರಾತ್ರಿ ಸುರಿದ ಭಾರೀ ಮಳೆಗೆ ಭುಕುಸಿತದೊಂದಿಗೆ ಪ್ರವಾಹ ಉಂಟಾಗಿ ಹಲವು ಮನೆಗಳು ಸೇರಿದಂತೆ ಬೆಳೆಗಳು ಹಾನಿಯಾಗಿವೆ. ಈ ದುರಂತದಲ್ಲಿ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ. ಪರಥೋಡ್ ಪಂಚಾಯತ್ ವ್ಯಾಪ್ತಿಯ ಮಂಗಪ್ಪರ ಗುಡ್ಡದ ಜನವಸತಿ ಇಲ್ಲದ ರಬ್ಬರ್ ತೋಟದಲ್ಲಿ ಶನಿವಾರ ರಾತ್ರಿ 12.30ರ ಸುಮಾರಿನಲ್ಲಿ ಭೂಕುಸಿತ ಸಂಭವಿಸಿದ್ದು, 2 ಕಿ.ಮೀ ದೂರದ ವರೆಗೂ ಮಣ್ಣು ಕೊಚ್ಚಿಕೊಂಡು ಬಂದಿದೆ. ಇದರಿಂದ 100 ರಬ್ಬರ್ ಮರಗಳು ಧರೆಗೆ ಉರುಳಿವೆ. ಜತೆಗೆ 12 ಮನೆಗಳಿಗೆ ಹಾನಿಯಾಗಿದ್ದು, 16 ಮನೆಗಳಿಗೆ ನೀರು ನುಗ್ಗಿವೆ.
ಪ್ರವಾಹದಿಂದ ಎಚ್ಚೆತ್ತ ಜನರು ಸುರಕ್ಷಿತ ಪ್ರದೇಶದಕ್ಕೆ ತೆರಳಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಮನೆಯಲ್ಲಿದ್ದ ಗ್ಯಾಸ್ ಸಿಲೆಂಡರ್, ವಾಷಿಂಗ್ ಮಿಷನ್ ಸೇರಿದಂತೆ ಮುಂತಾದ ವಸ್ತುಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿವೆ.
ಮುಂಗರಪ್ಪ ಗುಡ್ಡದಲ್ಲಿ 2021ರಲ್ಲಿ ಇದೇ ರೀತಿ ಪ್ರವಾಹ ಉಂಟಾಗಿ ಅನೇಕ ಮನೆಗಳು ಹಾನಿಯಾಗಿದ್ದವು.