ಸಾರಾಂಶ
ಕನ್ನಡಪ್ರಭ ವಾರ್ತೆ ಅರಸೀಕೆರೆ
ಜಾತಿ, ಉಪಜಾತಿ ಎನ್ನುತ್ತ ಸಂಘಟನೆಗಳೇ ವಿಘಟನೆಯಾಗುತ್ತ ಸಾಗುತ್ತಿವೆ, ಜಾತ್ಯತೀತ ಸಂಘಟನೆ ಇಂದು ಅಗತ್ಯ ಇದೆ ಎಂದು ಹುಬ್ಬಳ್ಳಿ ಆರ್ಷ ವಿದ್ಯಾಕೇಂದ್ರದ ಶ್ರೀ ಸ್ವಾಮಿ ಚಿದ್ರುಪಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.ನಗರದ ಜ್ಞಾನಜ್ಯೋತಿ ಮಂದಿರದಲ್ಲಿ ಆರ್ಷ ವಿದ್ಯಾಕೇಂದ್ರದ ವತಿಯಿಂದ ಹಮ್ಮಿಕೊಂಡಿರುವ ಭಗವದ್ಗೀತ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಅವರು, ನಾವು ರಾಜಕೀಯದಿಂದ ಬಹು ದೂರ ಇದ್ದೇವೆ. ಸಾಮಾಜಿಕ ಸೇವೆಯೇ ನಮ್ಮ ಗುರಿಯಾಗಿದೆ ನಮ್ಮಲ್ಲಿ ಹಣವಿಲ್ಲ ದಾನಿಗಳ ನೆರವಿನಲ್ಲಿ ಆಶ್ರಮ ನಡೆಯುತ್ತಿದೆ. ನಮ್ಮಲ್ಲಿ ಆರ್ಥಿಕ ದುರ್ಬಲ ವರ್ಗದ ಮತ್ತು ಶಿಕ್ಷಣ ವಂಚಿತ ಮಕ್ಕಳನ್ನು ಆಶ್ರಮಕ್ಕೆ ಕರೆತಂದು 10ನೇ ತರಗತಿಯವರೆಗೆ ವ್ಯಾಸಂಗವನ್ನು ನೀಡುತ್ತಿದ್ದೇವೆ, ಮಿಜೋರಾಮ್, ಅಸ್ಸಾಂ, ಬಿಹಾರ ಮಕ್ಕಳು ನಮ್ಮಲ್ಲಿದ್ದಾರೆ. ವಿವಿಧ ರಾಜ್ಯದ ಮಕ್ಕಳು ವ್ಯಾಸಂಗ ಪಡೆಯುತ್ತಿದ್ದಾರೆ, ನಮಗೆ ಖರ್ಚಿನ ಬಾಬ್ತು ಬಂದಾಗ ದೇವರು ಯಾವುದೋ ಮೂಲದಿಂದ ಅಷ್ಟನ್ನೇ ದೊರಕಿಸಿಕೊಡುತ್ತಾನೆ, ನಾಲ್ಕು ಶಾಲೆಗಳು ದಾನಿಗಳಿಂದಲೇ ನಡೆಯುತ್ತಿದ್ದು ಸಾವಿರ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.
ಮುಂದಿನ ಪೀಳಿಗೆಯನ್ನು ಉತ್ತಮ ಪ್ರಜೆಯಾಗಿ ರೂಪಿಸಬೇಕಾದರೆ ಅವರಿಗೆ ಭಗವದ್ಗೀತೆಯ ಸಾರ ತಿಳಿದರೆ ಸಾರ್ಥಕವಾಗುತ್ತದೆ, ಈ ನಿಟ್ಟಿನಲ್ಲಿ ನಮ್ಮ ಕೇಂದ್ರಗಳ ಸದಸ್ಯರು ಶಾಲೆಗಳಿಗೆ ತೆರಳಿ ಮಕ್ಕಳಿಗೆ ಉಚಿತವಾಗಿ ಭಗವದ್ಗೀತೆಯನ್ನ ಹೇಳಿಕೊಡುತ್ತಿದ್ದಾರೆ. ಅವರನ್ನು ಪ್ರೋತ್ಸಾಹಿಸಲು ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನಗಳನ್ನು ನೀಡುತ್ತ ಬರುತ್ತಿದ್ದಾರೆ. ಲಕ್ಷಾಂತರ ಮಕ್ಕಳಿಗೆ ಭಗವದ್ಗೀತೆಯನ್ನು ತಲುಪಿಸುವ ಕಾರ್ಯವನ್ನು ನಮ್ಮ ಕೇಂದ್ರಗಳು ರಾಜ್ಯಾದ್ಯಂತ ಮಾಡುತ್ತಿವೆ ಎಂದರು.ಈ ಕೇಂದ್ರವು ಜ.5ರಂದು ತನ್ನ 31ನೇ ವಾರ್ಷಿಕ ಸಮಾರಂಭವನ್ನು ಹಮ್ಮಿಕೊಂಡಿದೆ. ಅಂದು ಶ್ರೀ ಸರ್ವೇಶ್ವರ ಸ್ವಾಮಿಗೆ ಸಹಸ್ರ ಶಂಖಾಭಿಷೇಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು ಇದು ವಿಶೇಷವಾಗಿದೆ. ಒಂದು ಸಾವಿರ ಶಂಖ ಹಿಡಿದು ಅಭಿಷೇಕ ನೆರವೇರಿಸಲಿದ್ದಾರೆ, ಈ ಮಹತ್ಕಾರ್ಯದಲ್ಲಿ ಎಲ್ಲಾ ಜನರು ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗಬೇಕು ಎಂದು ಕರೆ ನೀಡಿದರು.
ಅರಸೀಕೆರೆ ಆರ್ಷ ವಿದ್ಯಾ ಕೇಂದ್ರದ ಮುಖ್ಯಸ್ಥೆ ಸುನೀತ, ಪೂಜ್ಯಶ್ರೀ ಸ್ವಾಮೀ ಚಿದ್ರುಪಾನಂದ ಸರಸ್ವತಿಯವರ 78ನೇ ವರ್ಷದ ವರ್ಧಂತಿ ಪ್ರಯುಕ್ತ ಶ್ರೀ ಸರ್ವೇಶ್ವರ ಸ್ವಾಮಿಗೆ ಸಹಸ್ರ ಶಂಖಾಭಿಷೇಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ನಗರದ ಹಾರನಹಳ್ಳಿ ರಾಮಸ್ವಾಮಿ ಸಮುದಾಯ ಭವನದಲ್ಲಿ ಆಯೋಜಿಸಲಾಗಿದೆ ಎಂದರು.ಫೋಟೋ: ಅರಸೀಕೆರೆಯಲ್ಲಿ ಭಗವದ್ಗೀತಾ ಸಪ್ತಾಹ ಕಾರ್ಯಕ್ರಮಕ್ಕೆ ಚಿದ್ರುಪಾನಂದ ಸರಸ್ವತಿ ಸ್ವಾಮೀಜಿ ಚಾಲನೆ ನೀಡಿದರು.