ಸಿರಿ ಗ್ರಾಮೋದ್ಯೋಗ ಸಂಸ್ಥೆ ಪ್ರಧಾನ ಕಚೇರಿಗೆ ನಟ ರಮೇಶ್‌ ಅರವಿಂದ್‌ ಭೇಟಿ

| Published : Jan 28 2024, 01:15 AM IST

ಸಿರಿ ಗ್ರಾಮೋದ್ಯೋಗ ಸಂಸ್ಥೆ ಪ್ರಧಾನ ಕಚೇರಿಗೆ ನಟ ರಮೇಶ್‌ ಅರವಿಂದ್‌ ಭೇಟಿ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ರಮೇಶ್‌ ಅರವಿಂದ್‌, ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ನಂತರ ಹೆಗ್ಗಡೆಯವರನ್ನು ಭೇಟಿ ಮಾಡಿ ಅವರ ಆಶೀರ್ವಾದವನ್ನು ಪಡೆದು, ಸಿರಿ ಸಂಸ್ಥೆಯ ಅಭಿವೃದ್ಧಿ ಕುರಿತಾಗಿ ಚರ್ಚಿಸಿದರು.

ಬೆಳ್ತಂಗಡಿ:

ಖ್ಯಾತ ಚಲನಚಿತ್ರ ನಟ ಹಾಗೂ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಉತ್ಪನ್ನಗಳ ರಾಯಭಾರಿ ಆಗಿರುವ ರಮೇಶ್ ಅರವಿಂದ್‍ ಅವರು ಸಿರಿ ಸಂಸ್ಥೆಯ ಪ್ರಧಾನ ಕಚೇರಿ ಉಜಿರೆಗೆ ಶುಕ್ರವಾರ ಭೇಟಿ ನೀಡಿದರು.

ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ದನ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ರಮೇಶ್ ಅರವಿಂದ್‍, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಮತ್ತು ಹೇಮಾವತಿ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಹಾಗೂ ಸಿರಿ ಎಂಡಿ ಕೆ.ಎನ್. ಜನಾರ್ದನ್ ಅವರ ಮುಂದಾಳತ್ವದಲ್ಲಿ ನಡೆಯುತ್ತಿರುವ ಈ ಸಿರಿ ಸಂಸ್ಥೆಯಲ್ಲಿ ಉತ್ಪಾದನೆಗೊಳ್ಳುತ್ತಿರುವ ಸಿರಿ ಉತ್ಪನ್ನಗಳಿಗೆ ರಾಯಭಾರಿಯಾಗಿ ಕೆಲಸ ಮಾಡುತ್ತಿರುವುದು ನನಗೆ ಬಹಳ ಹೆಮ್ಮೆಯೆನಿಸುತ್ತಿದೆ. ಸಿರಿ ಸಂಸ್ಥೆಯ ಪ್ರತಿಯೊಂದು ಉತ್ಪನ್ನಗಳಲ್ಲಿಯೂ ಒಂದು ಭಾವನಾತ್ಮಕ ಸಂಬಂಧ ಬೆಸೆದಿದೆ. ಯಾಕೆಂದರೆ ಈ ಸಂಸ್ಥೆಯ ಪ್ರತಿ ಉತ್ಪನ್ನಗಳಲ್ಲಿಯೂ ಬಡ ಹೆಣ್ಣು ಮಕ್ಕಳ ಪರಿಶ್ರಮ ಅಡಗಿದೆ. ನಾವೆಲ್ಲರೂ ನಮ್ಮ ದಿನಬಳಕೆಗೆ ಸಿರಿ ಉತ್ಪನ್ನಗಳನ್ನು ಉಪಯೋಗಿಸಿದ್ದಲ್ಲಿ ನಮ್ಮ ಸಿರಿ ಸಂಸ್ಥೆಯಲ್ಲಿ ದುಡಿಯುತ್ತಿರುವ ಪ್ರತಿಯೊಬ್ಬ ಹೆಣ್ಣುಮಕ್ಕಳ ಬಾಳಿನಲ್ಲೂ ಸದಾ ನಗು, ನೆಮ್ಮದಿಯಿಂದ ಕೂಡಿರಲು ಸಹಕಾರಿಯಾಗಲಿದೆ. ಆದುದರಿಂದ ಡಾ. ಹೆಗ್ಗಡೆ ದಪಂತಿಗಳ ಆಸರೆಯಲ್ಲಿ ದುಡಿಯುತ್ತಿರುವ ಎಲ್ಲ ಸಿರಿ ಸಿಬ್ಬಂದಿಗಳೂ ಸದಾ ನಗುಮೊಗದಿಂದ ಪರಸ್ಪರ ಪ್ರೀತಿ, ನಂಬಿಕೆ, ವಿಶ್ವಾಸವನ್ನಿಟ್ಟು ಕೆಲಸಕಾರ್ಯಗಳನ್ನು ನಿರ್ವಹಿಸಿದ್ದಲ್ಲಿ ಖಂಡಿತವಾಗಿಯೂ ಯಶಸ್ಸು ತಮ್ಮೆಲ್ಲರನ್ನೂ ಹರಸಿಕೊಂಡು ಬರಲಿದೆ ಎಂದು ಸಿರಿ ಸಿಬ್ಬಂದಿಯಲ್ಲಿ ಸ್ಫೂರ್ತಿ ತುಂಬಿದರು.

ಸಿರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ದನ್‌, ಹೆಗ್ಗಡೆ ದಂಪತಿ ಹಾಗೂ ಸಿರಿ ಸಂಸ್ಥೆಯ ಮೇಲೆ ಅಪಾರ ಪ್ರೀತಿ, ಅಭಿಮಾನವನ್ನು ಹೊಂದಿರುವ ರಮೇಶ್ ಅರವಿಂದರವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವ ಸರಳತೆ, ಸಜ್ಜನಿಕೆ ಹಾಗೂ ಮೌಲ್ಯಯುತ ಜೀವನ ಶೈಲಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಸಂಸ್ಥೆಯ ಪರವಾಗಿ ರಮೇಶ್ ಅವರನ್ನು ಸನ್ಮಾನಿಸಿ ಗೌರವಿಸಿದರು.ಕಾರ್ಯಕ್ರಮದಲ್ಲಿ ಸಿರಿ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕ ರಾಜೇಶ್ ಪೈ ಸಿರಿ ಸಂಸ್ಥೆಯ ಆಡಳಿತ ಮತ್ತು ಲೆಕ್ಕಪತ್ರ ವಿಭಾಗದ ನಿರ್ದೇಶಕ ಪ್ರಸನ್ನ ಯು ಹಾಗೂ ಎಲ್ಲ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಸಿರಿ ಗೋದಾಮು ಪ್ರಬಂಧಕರಾದ ಜೀವನ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ನಂತರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ರಮೇಶ್‌ ಅರವಿಂದ್‌, ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ನಂತರ ಹೆಗ್ಗಡೆಯವರನ್ನು ಭೇಟಿ ಮಾಡಿ ಅವರ ಆಶೀರ್ವಾದವನ್ನು ಪಡೆದು, ಸಿರಿ ಸಂಸ್ಥೆಯ ಅಭಿವೃದ್ಧಿ ಕುರಿತಾಗಿ ಚರ್ಚಿಸಿದರು.