ಸಾರಾಂಶ
ಕೊಟ್ಟಿಗೆಹಾರ, ಬಾಳೂರು ಹೋಬಳಿ ಗಬ್ಗಲ್ ಸಮೀಪದ ಕೆ.ತಲಗೂರು ಗ್ರಾಮದ ಸ.ನಂ 59 ರಲ್ಲಿ (ಹಳೆ ಸ.ನಂ.48) 23.20 ಎಕರೆ ಅರಣ್ಯ ಒತ್ತುವರಿಯನ್ನು ಅರಣ್ಯ ಇಲಾಖೆಯವರು ತೆರವುಗೊಳಿಸಿದರು.
ಕನ್ನಡಪ್ರಭ ವಾರ್ತೆ, ಕೊಟ್ಟಿಗೆಹಾರ
ಬಾಳೂರು ಹೋಬಳಿ ಗಬ್ಗಲ್ ಸಮೀಪದ ಕೆ.ತಲಗೂರು ಗ್ರಾಮದ ಸ.ನಂ 59 ರಲ್ಲಿ (ಹಳೆ ಸ.ನಂ.48) 23.20 ಎಕರೆ ಅರಣ್ಯ ಒತ್ತುವರಿಯನ್ನು ಅರಣ್ಯ ಇಲಾಖೆಯವರು ತೆರವುಗೊಳಿಸಿದರು.ಅರಣ್ಯ ಇಲಾಖೆಗೆ ಸೇರಿದ 23.20 ಎಕರೆ ಜಾಗದಲ್ಲಿ ತೋಟದ ಮಾಲೀಕ ಗಣಪತಿ ಚಟ್ಟಿಯಾರ್ ಒತ್ತುವರಿ ಮಾಡಿದ್ದು ಅದರಲ್ಲಿ ಕಾಫಿ ಬೆಳೆ, ಅಡಕೆ, ತೆಂಗು ಬೆಳೆಯಲಾಗಿತ್ತು. ಅದರಲ್ಲಿ ಸದ್ಯಕ್ಕೆ ಕಾಫಿ, ಅಡಕೆ ಬೆಳೆಯನ್ನು ಖುಲ್ಲಾಗೊಳಿಸಿ ಸುಮಾರು ಶೇ. 65 ರಷ್ಟು ಸರ್ಕಾರಿ ಜಾಗವನ್ನು ಆದೇಶದಂತೆ ತೆರವು ಗೊಳಿಸಲಾಯಿತು. ಶೇ. 35 ಭಾಗದಷ್ಟು ಜಾಗವನ್ನು ಖುಲ್ಲಾಗೊಳಿಸಲು ಬಾಕಿ ಇದೆ ಎಂದು ಅರಣ್ಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಅರಣ್ಯ ಇಲಾಖಾ ಅಧಿಕಾರಿಗಳ ತಂಡ ಕಾರ್ಯಾಚರಣೆ ನಡೆಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರ ಸಮಕ್ಷಮದಲ್ಲಿ ಶಾಂತಿಯುತವಾಗಿ ಸರ್ಕಾರಿ ಜಾಗ ತೆರವುಗೊಳಿಸಿ ವಶ ಪಡಿಸಲಾಯಿತು. ಮಾಲೀಕರಿಗೆ ನಾಲ್ಕು ವರ್ಷದ ಹಿಂದೆಯೇ ಈ ಬಗ್ಗೆ ನೋಟಿಸ್ ನೀಡಲಾಗಿತ್ತು. ಅದರಂತೆಯೇ ಜಾಗದಲ್ಲಿನ ಬೆಳೆ ತೆರವುಗೊಳಿಸಲಾಗಿದೆ.ಈ ಸಂದರ್ಭದಲ್ಲಿ ಆಲ್ದೂರು ವಲಯ ಅರಣ್ಯ ಅಧಿಕಾರಿಗಳಾದ ಹರೀಶ್ ಕುಮಾರ್, ಚರಣ್ ಕುಮಾರ್, ಶಿವಕುಮಾರ್, ಉಪ ವಲಯ ಅರಣ್ಯಾಧಿಕಾರಿಗಳಾದ ನವೀನ್, ಗೌತಮ್, ಸಂದೀಪ್, ಚೇತನ್, ವಿಜಯ ಕುಮಾರ್, ಗಸ್ತು ಅರಣ್ಯ ಪಾಲಕರಾದ ಮೊಹಸೀನ್, ಕಿಶೋರ್, ನಾಗರಾಜ್, ಉಮೇಶ್, ಸುರೇಶ್, ಅರಣ್ಯ ವೀಕ್ಷಕ ಗಿರೀಶ್, ಸುಧೀರ್ ಭಾಗವಹಿಸಿದ್ದರು. 15 ಕೆಸಿಕೆಎಂ 5ಬಾಳೂರು ಹೋಬಳಿಯ ಗಬ್ಗಲ್ ಸಮೀಪದ ಕೆ.ತಲಗೂರು ಗ್ರಾಮದಲ್ಲಿ ಎಕರೆ ಅರಣ್ಯ ಒತ್ತುವರಿಯನ್ನು ಅರಣ್ಯ ಇಲಾಖೆಯವರು ತೆರವುಗೊಳಿಸಿದರು.