ಕನ್ನಡಪ್ರಭ ವಾರ್ತೆ ಅಥಣಿ
ಗುತ್ತಿಗೆದಾರ ರಾಜು ಅಲಬಾಳ ನೇತೃತ್ವದಲ್ಲಿ ಆದಿ ಬಣಜಿಗ ಯುವ ವೇದಿಕೆಯಿಂದ ಸಮಾಜದ ಸಂಘಟನೆ ಮತ್ತು ಇನ್ನಿತರ ಕಾರ್ಯಕ್ರಮಗಳನ್ನು ನಡೆಸಲು ಅಗತ್ಯವಿರುವ ಸಮುದಾಯ ಭವನ ನಿರ್ಮಾಣಕ್ಕೆ ಈಗಾಗಲೇ ನಿವೇಶನ ಖರೀದಿಸಿರುವುದು ಒಳ್ಳೆಯ ಬೆಳವಣಿಗೆ. ಮುಂಬರುವ ದಿನಗಳಲ್ಲಿ ನಿರ್ಮಾಣ ಆಗಲಿರುವ ಸಮುದಾಯ ಭವನ ನಿರ್ಮಾಣಕ್ಕೆ ₹25 ಲಕ್ಷ ಸಹಾಯಧನ ನೀಡುವೆ ಎಂದು ಶಾಸಕ ಲಕ್ಷ್ಮಣ ಸವದಿ ಭರವಸೆ ನೀಡಿದರು.ಇಲ್ಲಿನ ಶಿವಣಗಿ ಸಾಂಸ್ಕೃತಿಕ ಭವನದಲ್ಲಿ ಆದಿ ಬಣಜಿಗ ಯುವ ವೇದಿಕೆಯಿಂದ ಹಮ್ಮಿಕೊಳ್ಳಲಾಗಿದ್ದ ರಾಜ್ಯಮಟ್ಟದ 9ನೇ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಮುದಾಯದ ಬಂಧುಗಳು ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಮತ್ತು ಒಳ್ಳೆಯ ಸಂಸ್ಕಾರ, ಮಾನವೀಯ ಮೌಲ್ಯಗಳನ್ನು ಕಲಿಸಿಕೊಡುವುದು ಇಂದಿನ ಅಗತ್ಯವಾಗಿದೆ. ವಿದ್ಯಾರ್ಥಿಗಳು ಕೂಡ ಉನ್ನತಮಟ್ಟದ ಶಿಕ್ಷಣ ಪಡೆದುಕೊಂಡ ನಂತರ ಶಿಕ್ಷಣ ನೀಡಿದ ತಂದೆ-ತಾಯಿಗೆ ಹಾಗೂ ಪುರಸ್ಕಾರ ನೀಡಿದ ಸಮಾಜಕ್ಕೆ ಯಾವತ್ತೂ ಋಣಿಯಾಗಿರಬೇಕು. ಸಮಾಜಮುಖಿ ಸೇವೆಗಳ ಮೂಲಕ ತಮ್ಮ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ಆದಿಬಣಜಿಗ ಸಮಾಜದ ವತಿಯಿಂದ ಕಳೆದ 9 ವರ್ಷಗಳಿಂದ ನಿರಂತರ ಪ್ರತಿಭಾವ ಪುರಸ್ಕಾರ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದು ನಮ್ಮೆಲ್ಲರಿಗೆ ಸಂತಸ ಮತ್ತು ಹೆಮ್ಮೆಯ ವಿಚಾರ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಅನೇಕ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಬೆಳಗಾವಿ ಬಿಡಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಪ್ರತಿಯೊಂದು ಮಕ್ಕಳಲ್ಲೂ ಒಂದೊಂದು ಪ್ರತಿಭೆ ಇರುತ್ತದೆ. ಮಕ್ಕಳಲ್ಲಿರುವ ಪ್ರತಿಭೆಯನ್ನು ಪೋಷಕರು ಹಾಗೂ ಶಿಕ್ಷಕರು ಗುರುತಿಸಿ ಪ್ರೋತ್ಸಾಹಿಸಬೇಕು. ಆಗ ಇನ್ನಷ್ಟು ಸಾಧನೆ ಮಾಡಲು ಸಹಕಾರಿಯಾಗಲಿದೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಜೀವನದ ಪ್ರಮುಖ ತಿರುವಿನ ಘಟ್ಟ. ಇಲ್ಲಿ ಯಶಸ್ಸು ಸಾಧಿಸಿದರೆ ಮುಂದೆ ಸುಲಭವಾಗಿ ಗುರಿ ಮುಟ್ಟಬಹುದು ಎಂದು ತಿಳಿಸಿದರು.ಆದಿ ಬಣಜಿಗ ಯುವ ವೇದಿಕೆಯ ಅಧ್ಯಕ್ಷ ರಾಜು ಆಲಬಾಳ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ 9 ವರ್ಷಗಳಿಂದ ನಿರಂತರವಾಗಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಎಲ್ಲ ಜಿಲ್ಲೆಯ ಮುಖಂಡರು ಒಗ್ಗೂಡಿ ಪ್ರತಿ ವರ್ಷ ಕಾರ್ಯಕ್ರಮ ಆಯೋಜಿಸಿಕೊಂಡು ಬರಲಾಗುತ್ತಿದೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತೀರ್ಣಗೊಂಡ 230ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳನ್ನು ಸನ್ಮಾನಿಸುತ್ತಿದ್ದೇವೆ ಎಂದರು. ಶೆಟ್ಟರ ಮಠದ ಮರಳುಸಿದ್ದ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿಲಾಯಿತು.ಈ ಸಂದರ್ಭದಲ್ಲಿ ಆದಿ ಬಣಜಿಗ ಸಮಾಜದ ತಾಲೂಕು ಅಧ್ಯಕ್ಷ ಚಂದ್ರಶೇಖರ ಬಳ್ಳೊಳ್ಳಿ, ಐಎಎಸ್ ಅಧಿಕಾರಿ ಸುನಿಲ ಟಾಕಳೆ, ಮುಖಂಡರಾದ ಸಿ.ಎಸ್.ನೇಮಗೌಡ, ಬಿ.ಎಸ್.ಬಿರಾದಾರ, ಎ.ಎಸ್.ತೆಲಸಂಗ, ಬೈರಪ್ಪ ಬಿಜ್ಜರಗಿ, ಸಿದ್ದು ಗದ್ಯಾಳ, ಸುರೇಶ ಬಳ್ಳೋಳ್ಳಿ, ಸ್ವಾಗತ ತೋರಿ, ಚನ್ನಬಸಪ್ಪ ತೋರಿ, ಸತೀಶ ಪಾಟೀಲ, ರಮೇಶ ಮುಚ್ಚಂಡಿ, ಅಶೋಕ ಮಾರಾಪೂರ, ಬಸವರಾಜ ಮಾದಗುಡಿ, ಸುರೇಶ ಆಲಬಾಳ, ಚನ್ನಬಸು ಬಳ್ಳೋಳ್ಳಿ, ರಾಜು ಮರಡಿ, ಕುಮಾರ ಬಿಳ್ಳೂರ, ಪರಸುರಾಮ ಬಿರಾದಾರ, ಹಣಮಂತ ವನಜೋಳಿ ಉಪಸ್ಥಿತರಿದ್ದರು. ಸುರೇಶ ಬಳ್ಳೊಳ್ಳಿ ಸ್ವಾಗತಿಸಿದರು. ವಿಜಯ ಹುದ್ದಾರ ಸ್ವಾಗತಿಸಿ, ವಂದಿಸಿದರು. ಪ್ರತಿಭಾ ಪುರಸ್ಕಾರಗಳು ವಿದ್ಯಾರ್ಥಿಗಳ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ. ಅನೇಕ ಸಾಧಕ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುತ್ತದೆ. ಆದಿ ಬಣಜಿಗ ಯುವ ವೇದಿಕೆಯಿಂದ ಕಳೆದ 9 ವರ್ಷಗಳಿಂದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸುತ್ತಿರುವ ಕಾರ್ಯ ಶ್ಲಾಘನೀಯ. ಶಿಕ್ಷಣ ಪಡೆದುಕೊಂಡ ಸಮುದಾಯ ಸರ್ವಾಂಗೀಣ ಅಭಿವೃದ್ಧಿ ಹೊಂದಲು ಸಾಧ್ಯ.-ಲಕ್ಷ್ಮಣ ಸವದಿ,
ಶಾಸಕರು.ಜೊಲ್ಲೆ ಉದ್ಯೋಗ ಸಮೂಹದಿಂದ ಸುಮಾರು ₹1 ಕೋಟಿ ಕಾಯ್ದಿರಿಸುವ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಶಿಷ್ಯವೇತನ ನೀಡುವ ಸಂಕಲ್ಪ ಹೊಂದಿದ್ದೇವೆ. ಸಮುದಾಯದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು.-ಶಾಸಕಿ ಶಶಿಕಲಾ ಜೊಲ್ಲೆ, ನಿಪ್ಪಾಣಿ.ಆದಿ ಬಣಜಿಗ ಯುವ ವೇದಿಕೆಯಿಂದ ಅಥಣಿ ಪಟ್ಟಣದಲ್ಲಿ ಸಮುದಾಯ ಭವನ ನಿರ್ಮಾಣಕ್ಕಾಗಿ ಈಗಾಗಲೇ ರಾಮಲಿಂಗೇಶ್ವರ ದೇವಸ್ಥಾನ ಹತ್ತಿರ ನಿವೇಶನ ಖರೀದಿ ಮಾಡಲಾಗಿದ್ದು, ಇದಕ್ಕೆ ಸಹಾಯ ಸಹಕಾರ ನೀಡಿದ ಶಾಸಕ ಲಕ್ಷ್ಮಣ ಸವದಿ ಹಾಗೂ ಸಮುದಾಯದ ಮುಖಂಡರಿಗೆ ಅಭಿನಂದಿಸುತ್ತೇನೆ. ಮುಂಬರುವ ದಿನಗಳಲ್ಲಿ ಸಕಲ ಸೌಲಭ್ಯವುಳ್ಳ ಸಮುದಾಯ ಭವನ ನಿರ್ಮಾಣಕ್ಕೆ ಸಮಾಜದ ಬಂಧುಗಳು ಹಾಗೂ ಜನಪ್ರತಿನಿಧಿಗಳು ಸಹಾಯ ಸಹಕಾರ ನೀಡಬೇಕು.
-ರಾಜು ಆಲಬಾಳ,
ಆದಿ ಬಣಜಿಗ ಯುವ ವೇದಿಕೆಯ ಅಧ್ಯಕ್ಷರು.