ಕನ್ನಡಪ್ರಭ ವಾರ್ತೆ ಬೀದರ್‌

ಕಲಬುರಗಿ ಸೆಂಟ್ರಲ್‌ ಜೈಲಿನಿಂದ ಜು.14ರಂದು ಪರಾರಿಯಾಗಿದ್ದ ಮೂವರು ಕೈದಿಗಳ ಪೈಕಿ ಈಗಾಗಲೇ ಇಬ್ಬರನ್ನು ಬಂಧಿಸಲಾಗಿದ್ದು, ಇದೀಗ ಕೊನೆಯ ಹಾಗೂ ಮೂರನೇ ಪರಾರಿ ಕೈದಿಯನ್ನೂ ಬೀದರ್‌ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಇದರೊಂದಿಗೆ ಜೈಲಿನಿಂದ ಕೈದಿಗಳು ಪರಾರಿಯಾದ ತೀವ್ರ ಸಂಚಲನ ಕಾರಿ ಪ್ರಕರಣಕ್ಕೆ ಸಂಪೂರ್ಣ ತೆರೆಬಿದ್ದಿದೆ.

​ರಾಜೇಶ್ವರದಲ್ಲಿ ಕೊನೆಯ ಕೈದಿ ಸೆರೆ: ಪೋಕ್ಸೋ (POCSO) ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಒಳಗಾಗಿದ್ದ, ಬಸವಕಲ್ಯಾಣ ತಾಲೂಕಿನ ಇಸ್ಲಾಂಪುರ ಗ್ರಾಮದ ನಿವಾಸಿ ಮಸ್ತಾನ್‌ ಕಮಲಾಪುರೆ ಬಂಧಿತ ಮೂರನೇ ಕೈದಿಯಾಗಿದ್ದಾನೆ. ಈತನ ಸುಳಿವು ಬೆನ್ನಟ್ಟಿದ್ದ ಬೀದರ್‌ ಪೊಲೀಸರು, ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದಲ್ಲಿ ಕಾರ್ಯಾಚರಣೆ ನಡೆಸಿ ಈತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಮಸ್ತಾನ್‌ ಕಮಲಾಪುರೆಯನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಕಲಬುರಗಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

​ಹಂತಹಂತವಾಗಿ ನಡೆದ ಕಾರ್ಯಾಚರಣೆ:

ಜು.14ರಂದು ಕೈದಿಗಳು ಪರಾರಿಯಾದ ತಕ್ಷಣವೇ ಎಚ್ಚೆತ್ತ ಪೊಲೀಸರು ಜಂಟಿ ಕಾರ್ಯಾಚರಣೆ ಆರಂಭಿಸಿದ್ದರು, ಪರಾರಿಯಾದ ಬೆನ್ನಲ್ಲೇ ಬೀದರ್‌ ಪೊಲೀಸರು ಹುಮನಾಬಾದ್‌ನಲ್ಲಿ ಮುಖ್ಯಚರ್ಯೆ ಗೊತ್ತಾಗದಂತೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮೊದಲ ಕೈದಿಯನ್ನು ಸೆರೆಹಿಡಿದಿದ್ದರು. ಭಾಲ್ಕಿ ತಾಲೂಕಿನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಎರಡನೇ ಕೈದಿಯನ್ನು ವಶಕ್ಕೆ ಪಡೆಯಲಾಗಿತ್ತು. ಇದೀಗ ಮಸ್ತಾನ್‌ ಕಮಲಾಪುರೆಯನ್ನು ರಾಜೇಶ್ವರದಲ್ಲಿ ಬಂಧಿಸುವ ಮೂಲಕ ಮೂವರೂ ಪರಾರಿಯಾಗಿದ್ದ ಕೈದಿಗಳನ್ನು ಮತ್ತೆ ಜೈಲು ಕಂಬಿಗಳ ಹಿಂದೆ ತಳ್ಳಲಾಗಿದೆ.


​ಬೀದರ್‌ ಜಿಲ್ಲಾ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ ಮತ್ತು ಚಾಕಚಕ್ಯತೆಯಿಂದಾಗಿ ಪರಾರಿಯಾಗಿದ್ದ ಮೂವರೂ ಕೈದಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಸಾರ್ವಜನಿಕರು ಹಾಗೂ ಪೊಲೀಸ್‌ ಇಲಾಖೆ ನಿಟ್ಟುಸಿರು ಬಿಡುವಂತಾಗಿದೆ.