ಕನ್ನಡಪ್ರಭ ವಾರ್ತೆ ಮೈಸೂರುಬಸಾಪುರ ಕೆರೆ ಅತಿಕ್ರಮಣ ತೆರವುಗೊಳಿಸಲು ಆಗ್ರಹಿಸಿ ಮತ್ತು 46ನೇ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಜು. 21 ರಂದು ಕೊಪ್ಪಳದ ಬಲ್ಡೋಟ ಕಂಪನಿ ಗೇಟ್ ಎದುರು ಬೃಹತ್ ರೈತ ಸಮಾವೇಶ ಹಮ್ಮಿಕೊಂಡಿರುವುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.ಕೊಪ್ಪಳ-ಭಾಗ್ಯನಗರದ 1.5 ಲಕ್ಷ ಜನರ ಜೀವಕ್ಕೆ ಕಂಟಕವಾಗಿರುವ ಬಲ್ಡೋಟ ಕಾರ್ಖಾನೆ ಕೊಪ್ಪಳಕ್ಕೆ ಬೇಡವೆಂದು ಧೂಳಿನಿಂದ ಬಾಧಿತರಾದ 22 ಹಳ್ಳಿಗಳ ಜನ 2025 ರಿಂದ ನಿರಂತರ ಹೋರಾಟ ಮಾಡುತ್ತಿದ್ದಾರೆ. ಕೊಪ್ಪಳ ಜಿಲ್ಲಾ ಬಚಾವೊ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ನಿರಂತರವಾಗಿ ಧರಣಿ ಸತ್ಯಾಗ್ರಹ ನಡೆಸುತ್ತಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಜೀವ ವಿರೋಧಿಯಾಗಿರುವ ಕೊಪ್ಪಳದ ಬಲ್ಡೋಟ ಕಂಪನಿಯನ್ನು ಒದ್ದೋಡಿಸಬೇಕು. 2 ಬಾರಿ ಕೊಪ್ಪಳ ಬಂದ್ ಮಾಡಲಾಗಿದ್ದು, ವಿಧಾನ ಮಂಡಲದ ಬೆಳಗಾವಿ ಅಧಿವೇಶನ ವೇಳೆ ಸತ್ಯಾಗ್ರಹ ನಡೆಸಲಾಗಿದೆ. ಈ ಹೋರಾಟದಿಂದ 2 ಕಾರ್ಖಾನೆ ಮುಚ್ಚಿವೆ. ಇನ್ನೂ ಮೂರು ಕಾರ್ಖಾನೆಗಳಿಗೆ ಮುಚ್ಚಲು ನೋಟಿಸ್ ನೀಡಲಾಗಿದೆ. ಇನ್ನುಳಿದ 14 ಕಾರ್ಖಾನೆಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಭರವಸೆ ನೀಡಿದೆ ಎಂದು ಅವರು ತಿಳಿಸಿದರು.ಜನ-ಜಾನುವಾರುಗಳ ಉಪಯೋಗಕ್ಕಿದ್ದ 44.35 ಎಕರೆ ವಿಸ್ತೀರ್ಣದ ಸಮುದಾಯದ ಸ್ವತ್ತಾದ ಬಸಾಪುರ ಕೆರೆಯನ್ನು ಸರ್ಕಾರ ಬಲ್ಡೋಟ ಕಂಪನಿಗೆ ಕಾನೂನು ಬಾಹಿರವಾಗಿ 33 ಲಕ್ಷಕ್ಕೆ ಮಂಜೂರು ಮಾಡಿದೆ. ಹೈಕೋರ್ಟ್ ಆದೇಶದಂತೆ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿದ್ದ ಕೆರೆಯ ಸುತ್ತ ಕಾಂಪೌಂಡ್ ನಿರ್ಮಿಸಿಕೊಂಡು ನಿರ್ಬಂಧ ಹೇರಿದೆ. ಇದರ ವಿರುದ್ಧ ಅಲ್ಲಿಯ ರೈತ ಸಂಘ ಎರಡು ತಿಂಗಳಿನಿಂದ ಕಂಪನಿಯ ಗೇಟಿನ ಎದುರು ಧರಣಿ ನಡೆಸುತ್ತಿದೆ ಎಂದು ಅವರು ಹೇಳಿದರು.ರೈತ ಹುತಾತ್ಮ ದಿನಾಚರಣೆಯಂದು ಕೊಪ್ಪಳದ ಹೊಸಪೇಟೆ ರಸ್ತೆಯಲ್ಲಿನ ಬಲ್ಡೋಟ ಕಂಪನಿಯ ಗೇಟಿನ ಎದುರು ನಡೆಯುವ ಬೃಹತ್ ರೈತ ಸಮಾವೇಶದಲ್ಲಿ ರಾಜ್ಯದ ಮೂಲೆ- ಮೂಲೆಗಳಿಂದ ರೈತರು, ರೈತ ಮಹಿಳೆಯರು, ಯುವ ರೈತರು, ಚಳವಳಿಗಾರರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಲ್ಲಿಯ ರೈತ ಸಮುದಾಯ ಮತ್ತು ಇತರೆ ದುಡಿಯುವ ವರ್ಗವನ್ನು ಉಳಿಸಬೇಕಿದೆ ಎಂದು ಅವರು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಹೊಸಕೋಟೆ ಬಸವರಾಜ್, ಮಹೇಶ್, ಹೊಸೂರು ಕುಮಾರ್ ಮೊದಲಾದವರು ಇದ್ದರು.---ಬಾಕ್ಸ್ಬಿಡದಿ ಟೌನ್‌ಶಿಪ್‌ಗೆ ಶೇ,80 ರಷ್ಟು ರೈತರು ಒಪ್ಪಿಗೆ ಸೂಚಿಸಿಲ್ಲ

ಬಿಡದಿ ಟೌನ್‌ ಶಿಪ್ ಮಾಡುವ ಬಗ್ಗೆ ಸರ್ಕಾರದ ಚಿಂತನೆ ಬದಲಾಗಬೇಕು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜ್ಯದಲ್ಲಿ ಹೊಸ ಬದಲಾವಣೆ ತರಬೇಕು ಎಂಬ ಉತ್ಸಾಹದಲ್ಲಿ ಇದ್ದಾರೆ. ಆದರೆ, ನೀರಾವರಿಯುಳ್ಳ ರೈತ ಭೂಮಿಯನ್ನು ಕಿತ್ತುಕೊಳ್ಳುವುದು ಎಷ್ಟರಮಟ್ಟಿಗೆ ನ್ಯಾಯ?.

ಈ ಕುರಿತು ಕೇಂದ್ರದ ಹೈಕಮಾಂಡ್‌ ಗೂ ಪತ್ರ ಬರೆಯಲಾಗುತ್ತದೆ. ಟೌನ್‌ ಶಿಪ್ ಮಾಡಲು ಶೇ. 80 ರಷ್ಟು ರೈತರು ಒಪ್ಪಿದ್ದಾರೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಅದೇ ಶೇ. 80 ರಷ್ಟು ರೈತರು ಒಪ್ಪಿಗೆ ಸೂಚಿಸಿಲ್ಲ ಎಂಬ ವರದಿ ಪಟ್ಟಿಯನ್ನು ನಾವು ಬಿಡುಗಡೆಗೊಳಿಸುತ್ತೇವೆ. ಇದೇ ಜು. 23 ರಂದು ಸಾರ್ವತ್ರಿಕ ಹೋರಾಟ ನಡೆಸಲಾಗುತ್ತದೆ. ಇದರಲ್ಲಿ ರೈತ ಮುಖಂಡರು, ನ್ಯಾಯಾಧೀಶರು, ದಲಿತ ಮುಖಂಡರು ಭಾಗವಹಿಸುವರು.- ಬಡಗಲಪುರ ನಾಗೇಂದ್ರ, ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷರು