ಶಿರಹಟ್ಟಿ: ಭಾವೈಕ್ಯತೆಯ ಜಗದ್ಗುರು ಫಕೀರೇಶ್ವರ ಮಠದ ಜಾತ್ರಾ ಮಹೋತ್ಸವದ ೨ನೇ ದಿನವಾದ ಶನಿವಾರ ಸಂಭ್ರಮದ ಕಡುಬಿನ ಕಾಳಗ ಜರುಗಿತು. ಭಕ್ತರ ಮುಗಿಲು ಮುಟ್ಟಿದ ಉತ್ಸಾಹದ ನಡುವೆ ಶ್ರದ್ಧಾ ಭಕ್ತಿಯಿಂದ ಕಡುಬಿನ ಕಾಳಗ ನಡೆಯಿತು.

೧೩ನೇ ಪಟ್ಟಾಧ್ಯಕ್ಷರಾದ ಶ್ರೀ ಜಗದ್ಗುರು ಫಕೀರ ಸಿದ್ದರಾಮ ಮಹಾಸ್ವಾಮಿಗಳು ಮಠದ ಸಂಪ್ರದಾಯದಂತೆ ಸಂಜೆ ಕರ್ತೃ ಗದ್ದುಗೆಗೆ ಪೂಜೆ ಸಲ್ಲಿಸಿ ಅಶ್ವಾರೂಢರಾಗಿ ನೆರೆದಿದ್ದ ಅಪಾರ ಭಕ್ತ ಸಮೂಹಕ್ಕೆ ಬೆಲ್ಲದ ಕಣ್ಣಿ ತೂರುತ್ತ ಶ್ರೀ ಮಠದ ಗದ್ದುಗೆಗೆ ಮೂರು ಸುತ್ತು ಸುತ್ತಿ ನಂತರ ಭಕ್ತರೆಡೆಗೆ ಕಡುಬಿನ ಕಾಳಗ ತೂರಿದರು.

ನಾಲ್ಕು ಮತ್ತು ಐದನೆ ಸುತ್ತಿಗೆ ಮಠದ ರಥಕ್ಕೆ ಸುತ್ತುಹಾಕಿ ನಂತರ ಅತ್ತಾರ ಮನೆತನದವರು ಸಂಪ್ರದಾಯದಂತೆ ಶ್ರೀಗಳಿಗೆ ಬಣ್ಣ ಎರಚುವುದು ಸಂಪ್ರದಾಯ.ಎರಡನೇ ದಿನದ ಕಡುಬಿನ ಕಾಳಗದಲ್ಲಿ ಎಲ್ಲಿ ನೋಡಿದರಲ್ಲಿ ಜನಸಾಗರವೇ ಕಂಡುಬಂದಿತು.

ಜಿಲ್ಲೆಯ ವಿವಿಢೆಡೆಯಿಂದ ಆಗಮಿಸಿದ್ದ ಕಲಾ ಪ್ರದದರ್ಶಕರು ಡೋಲು, ಕಿಣ್ಣರಿ, ವಾಲಗ, ಆಧುನಿಕ ಸಂಗೀತ ವಾದ್ಯಗಳನ್ನು ಸುಶ್ರಾವ್ಯವಾಗಿ ನುಡಿಸುತ್ತ ಕಡುಬಿನ ಕಾಳಗಕ್ಕೆ ಮೆರಗು ತಂದರು.

ಸಹಸ್ರಾರು ಭಕ್ತರು ಶ್ರೀಗಳು ತೂರುವ ಬೆಲ್ಲದ ಕಣ್ಣಿ ಹಿಡಿದು ನಮಸ್ಕರಿಸಿ ಶ್ರೀಗಳಿಂದ ದೊರೆತ ಪ್ರಸಾದವೆಂದು ಪೂಜ್ಯನೀಯ ಭಾವನೆಯಿಂದ ಮನೆಗೆ ಕೊಂಡೊಯ್ದು ತಮ್ಮ ಮಕ್ಕಳಾದಿಯಾಗಿ ಸೇವಿಸುತ್ತಾರೆ.


ಮಠದ ಉತ್ತಾಧಿಕಾರಿ ಶ್ರೀ ಫಕೀರ ದಿಂಗಾಲೇಶ್ವರ ಶ್ರೀಗಳು ಸಿದ್ದರಾಮ ಶ್ರೀಗಳಿಗೆ ಸಾಥ್ ನೀಡಿದರು.

ಪೊಲೀಸ್ ಬಂದೋಬಸ್ತ್:

ಜನಸ್ತೋಮವನ್ನು ನಿಯಂತ್ರಿಸಲು ಸಿಪಿಐ ಬಿ.ವಿ. ನ್ಯಾಮಗೌಡ, ಪಿಎಸ್‌ಐ ಈರಪ್ಪ ರಿತ್ತಿ ನೇತೃತ್ವದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಯಾವುದೇ ಸಣ್ಣ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್ ಕೈಗೊಂಡು ಅತ್ಯಂತ ಯಶಸ್ವಿ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟರು. ಮಾರ್ಗದುದ್ದಕ್ಕೂ ಪೊಲೀಸರನ್ನು ನಿಯೋಜನೆ ಮಾಡಿ ವಾಹನ, ಜನದಟ್ಟಣೆ ನಿಯಂತ್ರಣಕ್ಕೂ ಕ್ರಮ ಕೈಗೊಳ್ಳಲಾಗಿತ್ತು. ಪೊಲೀಸ್ ಇಲಾಖೆಯ ಕಾರ್ಯಕ್ಕೆ ಫಕೀರ ಸಿದ್ದರಾಮ ಶ್ರೀಗಳು ಮತ್ತು ಮಠದ ಉತ್ತರಾಧಿಕಾರಿ ಶ್ರೀ ಫಕೀರ ದಿಂಗಾಲೇಶ್ವರ ಶ್ರೀಗಳು ಶ್ಲಾಘನೆ ವ್ಯಕ್ತಪಡಿಸಿದರು.