ಪುತ್ತೂರು ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ‘ಲೋಕಸಭಾ ಚುನಾವಣೆ’ ವಿಶ್ಲೇಷಣೆ

| Published : Jun 10 2024, 12:53 AM IST

ಪುತ್ತೂರು ವಿವೇಕಾನಂದ ಕಾನೂನು ಮಹಾವಿದ್ಯಾಲಯದಲ್ಲಿ ‘ಲೋಕಸಭಾ ಚುನಾವಣೆ’ ವಿಶ್ಲೇಷಣೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾರ್ಯಕ್ರಮದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ೮ ವಿದ್ಯಾರ್ಥಿಗಳು ಲೋಕಸಭಾ ಚುನಾವಣೆಯ ಕುರಿತಾಗಿ ವಿಷಯ ಮಂಡನೆ ಮಾಡಿದರು

ಕನ್ನಡಪ್ರಭ ವಾರ್ತೆ ಪುತ್ತೂರು

ಸಮ್ಮಿಶ್ರ ಸರ್ಕಾರಗಳು ನಮ್ಮ ದೇಶಕ್ಕೆ ಹೊಸ ವಿಚಾರವಲ್ಲ. ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರಿಗೂ ಸಮ್ಮಿಶ್ರ ಸರ್ಕಾರಗಳು ಹೊಸದಲ್ಲ. ಅವರು ಕಳೆದ ೧೦ ವರ್ಷದಲ್ಲಿ ಸಮ್ಮಿಶ್ರ ಮಾದರಿಯ ಸರ್ಕಾರವನ್ನೇ ಮುನ್ನಡೆಸಿದ್ದಾರೆ. ಆದರೆ ಈ ಭಾರಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಹೊಸ ಮಾದರಿ ಸಮ್ಮಿಶ್ರ ಸರ್ಕಾರ ಈ ದೇಶವನ್ನು ಮುನ್ನಡೆಸಲಿದೆ ಎಂದು ಖ್ಯಾತ ರಾಜಕೀಯ ವಿಶ್ಲೇಷಕ ವಿಕಾಸ್ ಪಿ. ಹೇಳಿದರು.

ಅವರು ಪುತ್ತೂರಿನ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ಡಿಬೇಟ್ ಸೊಸೈಟಿ ವತಿಯಿಂದ ಕಾಲೇಜ್‌ನಲ್ಲಿ ಭಾನುವಾರ, ‘ಲೋಕಸಭಾ ಚುನಾವಣೆ -೨೦೨೪’ರ ವಿಶ್ಲೇಷಣಾ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದರು.

ಇದೇ ಸಂದರ್ಭದಲ್ಲಿ ರಾಜ್ಯಶಾಸ್ತ್ರ ವಿಭಾಗದ ಜ್ಞಾನಬಿಂಬ ಭಿತ್ತಿಪತ್ರಿಕೆಯ ವಿಶೇಷ ಸಂಚಿಕೆಯನ್ನು ಅನಾವರಣ ಮಾಡುವ ಮೂಲಕ ಉದ್ಘಾಟಿಸಿ ಬಳಿಕ ಮಾತನಾಡಿದರು.

ವೈವಿಧ್ಯತೆಗಳ ತವರೂರು ಆಗಿರುವ ಭಾರತದಲ್ಲಿ ಭಾರತೀಯ ಜನತಾ ಪಕ್ಷದ ೧೦ ವರ್ಷಗಳ ಆಡಳಿತವನ್ನು ಒಪ್ಪಿಕೊಂಡಿರುವ ಜನರು ಮತ್ತೆ ಬಿಜೆಪಿಗೆ ಹೆಚ್ಚಿನ ಸ್ಥಾನವನ್ನು ನೀಡಿದ್ದಾರೆ. ಇಂತಹ ಉತ್ತಮ ರೀತಿಯ ಫಲಿತಾಂಶ ಭಾರತದ ಇತಿಹಾಸದಲ್ಲಿ ಯಾವುದೇ ಪಕ್ಷ ಪಡೆದುಕೊಂಡಿಲ್ಲ ಎಂದರು.

ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲೆ ಅಕ್ಷತಾ ಎ.ಪಿ. ಮಾತನಾಡಿ, ಭಾರತದ ಪ್ರಜಾಪ್ರಭುತ್ವದ ಅಂತಸತ್ವ ಇಲ್ಲಿ ನಡೆಸುವ ಚುನಾವಣೆಯಲ್ಲಿದೆ. ಪ್ರತಿಯೊಂದು ಲೋಕಸಭಾ ಚುನಾವಣೆಯು ಅದರದ್ದೇ ಆಗಿರುವ ವಿಶೇಷತೆಯನ್ನು ಒಳಗೊಂಡಿದೆ. ಕಾನೂನು ವಿದ್ಯಾರ್ಥಿಗಳು ಇಂತಹ ಪ್ರಚಲಿತ ವಿದ್ಯಾಮಾನಗಳ ಕುರಿತು ಸರಿಯಾದ ಮಾಹಿತಿಯನ್ನು ಪಡೆದುಕೊಂಡಿರಬೇಕು ಎಂಬ ನಿಟ್ಟಿನಲ್ಲಿ ಇಂತಹ ವಿಶ್ಲೇಷಣಾ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ೮ ವಿದ್ಯಾರ್ಥಿಗಳು ಲೋಕಸಭಾ ಚುನಾವಣೆಯ ಕುರಿತಾಗಿ ವಿಷಯ ಮಂಡನೆ ಮಾಡಿದರು. ಕಾಲೇಜ್‌ನ ಸಂಚಾಲಕ ವಿಜಯನಾರಾಯಣ ಕೆ. ಎಂ., ಉಪಸ್ಥಿತರಿದ್ದರು. ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಂಯೋಜಕ ಲಕ್ಷ್ಮೀಕಾಂತ ಎ. ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಎಂ. ಯಶ್ಮಿತಾ ಸ್ವಾಗತಿಸಿದರು. ಗಣ್ಯ ವಂದಿಸಿದರು. ವಿದ್ಯಾಶ್ರೀ ನಿರೂಪಿಸಿದರು.