ಕನ್ನಡಪ್ರಭ ವಾರ್ತೆ ಭಟ್ಕಳ
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಎಐಟಿಯುಸಿ ಸಂಘಟನೆಯಿಂದ ತಹಸೀಲ್ದಾರ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಲಾಯಿತು.ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು. ಭಾರತೀಯ ಕಾರ್ಮಿಕರ ರಕ್ಷಣೆಗಾಗಿ ಸಂಸತ್ತು 1923 ರಿಂದ 1996ರ ನಡುವೆ ಜಾರಿಗೆ ತಂದ 44 ಕಾರ್ಮಿಕ ಕಾನೂನುಗಳನ್ನು ಪುನಃ ಸ್ಥಾಪಿಸಬೇಕು. ಕಟ್ಟಡ ಮತ್ತು ಇತರೆ ನಿರ್ಮಾಣಕಾರ್ಮಿಕರ (ಉದ್ಯೋಗ ನಿಯಂತ್ರಣ ಮತ್ತು ಸೇವಾ ಷರತ್ತುಗಳು) ಕಾಯ್ದೆ, 1996 ಮತ್ತು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಸೆಸ್ಕಾಯ್ದೆ, 1996 ಅನ್ನು ಪುನಃಸ್ಥಾಪಿಸಿ ಪೂರ್ಣವಾಗಿ ಜಾರಿಗೆ ತರಬೇಕು.
ದೇಶದ ಎಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರು ಪ್ರಯೋಜನಗಳನ್ನು ಪಡೆಯಲು ಇಎಸ್ಐ, ಪಿಎಫ್ ಮತ್ತು ಇತರ ಸಾಮಾಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಎಲ್ಲಾ ನಿರ್ಮಾಣ ಕಾರ್ಮಿಕರಿಗೆ ಕನಿಷ್ಠ ₹36,000 ಮಾಸಿಕ ವೇತನ ನಿಗದಿಪಡಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ಖಾತರಿಪಡಿಸಬೇಕು. 60 ವರ್ಷ ತುಂಬಿದ ನಂತರ ತಿಂಗಳಿಗೆ ₹6,000 ಕನಿಷ್ಠ ಪಿಂಚಣಿ ನೀಡಬೇಕು. ದೇಶಾದ್ಯಂತ ನಿರ್ಮಾಣ ಕಾರ್ಮಿಕರಿಗೆ ವರ್ಷಕ್ಕೆ ಕನಿಷ್ಠ 250 ದಿನಗಳ ಉದ್ಯೋಗದ ಖಾತರಿಯನ್ನು ಖಚಿತಪಡಿಸಬೇಕು. ನಿರ್ಮಾಣ ವಲಯದ ಮಹಿಳಾ ಕಾರ್ಮಿಕರಿಗೆ ಕಾನೂನಿನ ಪ್ರಕಾರ 6 ತಿಂಗಳ ವೇತನ ಸಹಿತ ಹೆರಿಗೆ ರಜೆ ನೀಡಬೇಕು. 60 ವರ್ಷ ವಯೋಮಿತಿ ಒಳಗಡೆ ಯಾವುದೇ ಕಾಯಿಲೆ ಅಥವಾ ಸ್ವಾಭಾವಿಕ ಮರಣಕ್ಕೆ ತುತ್ತಾದಲ್ಲಿ ಅವರ ನಾಮಿನಿಗೆ ಕುಟುಂಬ ಪಿಂಚಣಿ ನೀಡುವುದು. ಅಪಘಾತ ಅಥವಾ ಸ್ವಾಭಾವಿಕ ಮರಣಕ್ಕೆ ತುತ್ತಾದಲ್ಲಿ ಯಾವುದೇ ಸಾವಿಗೂ ಕನಿಷ್ಠ ₹10 ಲಕ್ಷ ಪರಿಹಾರ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟಿ ಮನವಿ ಸ್ವೀಕರಿಸಿದರು. ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಜಿ.ಎನ್. ರೇವಣಕರ್, ಮಂಜುನಾಥ ಆಚಾರಿ, ವೆಂಕಟ್ರಮಣ ನಾಯ್ಕ, ಸುಕ್ರ ಗೊಂಡ ಮುಂತಾದವರಿದ್ದರು.