ರೈತರೊಂದಿಗಿನ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿಕೆ । 88 ಕೆರೆ ತುಂಬಿಸಲು 21.73 ಟಿಎಂಸಿ ನೀರಿನ ಅಗತ್ಯ: ಹರೀಶ್ ಮಾಹಿತಿಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಭದ್ರಾ ಮೇಲ್ದಂಡೆ ಯೋಜನೆಯಡಿ ಜಿಲ್ಲೆಯ ಯಾವುದೇ ಭಾಗಗಳು ಬಿಟ್ಟು ಹೋಗದಂತೆ, ಸಂಪೂರ್ಣ ಜಿಲ್ಲೆಯಲ್ಲಿ ಸೂಕ್ಷ್ಮ ನೀರಾವರಿ ಯೋಜನೆ ಅನುಷ್ಠಾನ ಮಾಡುವಂತೆ ಶನಿವಾರ ಬೆಂಗಳೂರಿನಲ್ಲಿ ನಡೆಯಲ್ಲಿರುವ ಮುಖ್ಯಮಂತ್ರಿಗಳ ಸಭೆಯಲ್ಲಿ, ಜಿಲ್ಲೆಯ ರೈತರ ಪರವಾಗಿ ಮನವಿ ಮಾಡುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಭದ್ರಾ ಮೇಲ್ದಂಡೆ ಯೋಜನೆ ಅನುಷ್ಠಾನದ ಕುರಿತಂತೆ ಹೊಳಲ್ಕೆರೆ ಭಾಗದ ರೈತರ ಸಮಸ್ಯೆಗಳ ಕುರಿತು ಸಭೆ ನಡೆಸಿ ಅವರು ಮಾತನಾಡಿದರು.

ಪ್ರತಿ ತಾಲೂಕುವಾರು ಸೂಕ್ಷ್ಮ ಹಾಗೂ ಹನಿ ನೀರಾವರಿ ಯೋಜನೆಯಡಿ ಕೈಬಿಟ್ಟ ಪ್ರದೇಶ ಮತ್ತು ಕೆರೆ ತುಂಬಿಸುವ ಯೋಜನೆಯಡಿ ಒಳಪಡೆದ ಕೆರೆಗಳ ವಿವರಗಳನ್ನು ಅಧಿಕಾರಿಗಳು ನೀಡಿದರೆ, ಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರ ಗಮನಕ್ಕೆ ತರುತ್ತೇನೆ. ಲಭ್ಯವಿರುವ ನೀರಿನ ಹಂಚಿಕೆ ಹಾಗೂ ಹೆಚ್ಚುವರಿ ನೀರಿನ ಬೇಡಿಕೆ ಆಧರಿಸಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಚಿತ್ರದುರ್ಗ ಜಿಲ್ಲೆಯ ಎಲ್ಲಾ ಭಾಗಗಳಿಗೂ ನೀರು ಲಭ್ಯವಾದರೆ, ಜಿಲ್ಲೆಯ ರೈತರ ಶೇ.90ರಷ್ಟು ಸಮಸ್ಯೆಗಳು ಇತ್ಯರ್ಥವಾಗಲಿವೆ. ಅಂರ್ತಜಲ ಬಳಕೆಯ ಮೇಲಿನ ಒತ್ತಡವು ಕಡಿಮೆಯಾಗಿಲಿದೆ. ಇದರೊಂದಿಗೆ ಈಗಾಗಲೇ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.

ರಾಜ್ಯಾದ್ಯಂತ ಒಣಭೂಮಿ ಹಾಗೂ ನೀರಾವರಿ ವ್ಯಾಪ್ತಿಗೆ ಒಳಪಡದ ಪ್ರದೇಶಗಳನ್ನು ಗುರುತಿಸಿ, ನೀರಾವರಿ ವ್ಯಾಪ್ತಿಗೆ ತರಲು ಸರ್ಕಾರ ತಜ್ಞರ ಸಮತಿ ರಚಿಸಿದೆ. ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಿಂದ ವಂಚಿತವಾಗಿರುವ ಒಣಭೂಮಿ ವಿಸ್ತೀರ್ಣ ಹಾಗೂ ಕೆರೆಗಳ ಕುರಿತು ತಾಲೂಕುವಾರು ಮಾಹಿತಿ ಸಂಗ್ರಹಿಸಿ ತಜ್ಞರ ಸಮಿತಿ ಮುಂದೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಭದ್ರಾ ಮೇಲ್ದಂಡೆ ಯೋಜನೆ ಅಧೀಕ್ಷಕ ಎಂಜಿನಿಯರ್ ಹರೀಶ್ ಹೇಳಿದರು.


ಹೊಳಲ್ಕೆರೆ ತಾಲೂಕಿನ ಸುಮಾರು 51,261 ಹೆಕ್ಟೇರ್ ಪ್ರದೇಶವು ಒಣಭೂಮಿಯಾಗಿದೆ. 25 ಕೆರೆಗಳು ತುಂಬಿಸುವುದು ಬಾಕಿ ಉಳಿದಿವೆ, ಈ ಭಾಗಕ್ಕೆ ಸೂಕ್ಷ್ಮ ನೀರಾವರಿ ಕಲ್ಪಿಸಲು ಹೆಚ್ಚುವರಿಯಾಗಿ 5.1 ಟಿಎಂಸಿ ನೀರು ಬೇಕಾಗುತ್ತದೆ.

ಇದೇ ಮಾದರಿಯಲ್ಲಿ ಚಿತ್ರದುರ್ಗ ತಾಲೂಕಿನಲ್ಲಿ 32,200 ಹೆಕ್ಟೇರ್ ಪ್ರದೇಶ ಹಾಗೂ 13 ಕೆರೆ, ಚಳ್ಳಕೆರೆ ತಾಲೂಕಿನಲ್ಲಿ 50,000 ಹೆಕ್ಟೇರ್ ಪ್ರದೇಶ, ಮೊಳಕಾಲ್ಮೂರು ತಾಲೂಕಿನಲ್ಲಿ 40,000 ಹೆಕ್ಟೇರ್ ಪ್ರದೇಶ ಹಾಗೂ 25 ಕೆರೆ, ಹಿರಿಯೂರು ತಾಲೂಕಿನಲ್ಲಿ 22,000 ಹೆಕ್ಟೇರ್ ಪ್ರದೇಶ 15 ಕೆರೆ, ಹೊಸದುರ್ಗ ತಾಲೂಕಿನಲ್ಲಿ 30,954 ಹೆಕ್ಟೇರ್ ಪ್ರದೇಶ ಹಾಗೂ 10 ಕೆರೆ ತುಂಬಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.

ಒಟ್ಟಾರೆ ಜಿಲ್ಲೆಯಲ್ಲಿ 2,26,415 ಹಕ್ಟೇರ್ ಓಣ ಭೂಮಿಯನ್ನು ಸೂಕ್ಷ್ಮ ನೀರಾವರಿ ಯೋಜನೆಗೆ ಒಳಪಡಿಸಲು ಹಾಗೂ 88 ಕೆರೆ ತುಂಬಿಸಲು 21.73 ಟಿಎಂಸಿ ನೀರಿನ ಅಗತ್ಯವಿದೆ ಎಂದು ಅಧೀಕ್ಷಕ ಎಂಜಿನಿಯರ್ ಹರೀಶ್ ಮಾಹಿತಿ ನೀಡಿದರು.

ಚಿತ್ರದುರ್ಗ ಜಿಲ್ಲೆಯಾದ್ಯಂತ ನೀರಾವರಿ ಸೌಲಭ್ಯ ಕಲ್ಪಿಸಲು 1997ರಿಂದಲೂ ಹೋರಾಟ ನಡೆಸಲಾಗುತ್ತಿದೆ. ಆರಂಭದಲ್ಲಿ 70 ಟಿಎಂಸಿ ನೀರಿನ ಹಂಚಿಕೆ ಬೇಡಿಕೆ ಇಡಲಾಗಿತ್ತು. ಆದರೆ ಜಿಲ್ಲೆಗೆ ಲಭಿಸಿದ 29.91 ಟಿಎಂಸಿ ನೀರಿನಗೆ ಒಪ್ಪಿ, ಯೋಜನೆ ಜಾರಿಗೆ ಸೂಚಿಸಲಾಯಿತು. ಇಂದಿಗೂ ಯೋಜನೆ ಪೂರ್ಣಗೊಂಡಿಲ್ಲ. ಕೆಲಸ ಮುಗಿದು ಹೊಳಲ್ಕೆರೆ ತಾಲೂಕಿಗೆ ನೀರು ಹರಿಯಲು 6 ತಿಂಗಳ ಹಿಡಿಯಬಹದು. ಸರ್ಕಾರ ಯಾವುದೇ ತಾರತಮ್ಯ ತೊರದೇ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳಿಗೂ ಶೇ.100 ರಷ್ಟು ನೀರು ತಲುಪಿಸಿ ನೀರಾವರಿ ಯೋಜನೆ ಪೂರ್ಣಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ರೈತ ಮುಖಂಡ ಸಿದ್ದವೀರಪ್ಪ ಸಭೆಯಲ್ಲಿ ಮನವಿ ಮಾಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಭದ್ರಾ ಮೇಲ್ದಂಡೆ ಯೋಜನೆ ಕಾರ್ಯಪಾಲಕ ಎಂಜಿಯರ್ ಹರ್ಷ, ಸಹಾಯಕ ಇಂಜಿನಿಯರ್ ನಾಗರಾಜ್ ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು.