ಹೊಲೆಯ ಜಾತಿ ಬರೆಸಲು ಮನವಿ: ಮಹದೇವಯ್ಯ

| Published : May 29 2025, 12:00 AM IST / Updated: May 29 2025, 12:01 AM IST

ಸಾರಾಂಶ

ಚಾಮರಾಜನಗರದಲ್ಲಿ ಡಾ.ಎಚ್.ಸಿ.ಮಹದೇವಪ್ಪ ಅಭಿಮಾನಿಗಳ ಬಳಗದ ಅಧ್ಯಕ್ಷ ಡಾ.ವಿ.ಎನ್.ಮಹದೇವಯ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಾತಿಯೊಂದಿಗೆ ಹೊಲೆಯ ಎಂಬ ಪದವಿರುವ ಜಾತಿಗಳನ್ನು ಹೊಲೆಯ ಎಂದು ನಮೂದಿಸಬೇಕು ಇಲ್ಲದಿದ್ದರೆ ಹೊಲೆಯ ಸಮುದಾಯಕ್ಕೆ ಅನ್ಯಾಯವಾಗಲಿದೆ ಎಂದು ಡಾ.ಎಚ್.ಸಿ.ಮಹದೇವಪ್ಪ ಅಭಿಮಾನಿಗಳ ಬಳಗದ ಅಧ್ಯಕ್ಷ ಡಾ.ವಿ.ಎನ್.ಮಹದೇವಯ್ಯ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಟ್ಟೆ ಹೊಲೆಯ, ಕಪ್ಪೆ ಹೊಲೆಯ, ಕುಕ್ಕ ಹೊಲೆಯ, ಎಮ್ಮೆ ಹೊಲೆಯ, ಮಾರಿ ಹೊಲೆಯ, ಕುಕ್ಕುಟ ಹೊಲೆಯ, ತಮಿಳುನಾಡಿನಿಂದ ಬ೦ದ ಕೊಂಗ ಹೊಲೆಯ ಎಂಬ ಹಲವು ಜಾತಿಗಳು ಹೊಲೆಯ ಜಾತಿಗಳಿಗೆ ಸೇರಿದೆ ಆದರೆ ಜಾತಿ ಗಣತಿ ಸಂದರ್ಭದಲ್ಲಿ ಹಲವು ಜಾತಿಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಟ್ಟಿರುವುದರಿಂದ ಮಾದಿಗ ಎಂದು ಬರೆಸುತ್ತಿರುವುದರಿಂದ ಹೊಲೆಯ ಜಾತಿಗೆ ಅನ್ಯಾಯವಾಗಲಿದೆ ಎಂದರು.

ಪರಿಶಿಷ್ಟ ಜನಾಂಗದ ಪಟ್ಟಿಯಲ್ಲಿ ಕೈ ಬಿಟ್ಟಿರುವ ಜಾತಿಗಳನ್ನು ಗುರುತಿಸಿ ಸರ್ಕಾರ ಕುಲಶಾಸ್ತ್ರೀಯ ಅಧ್ಯಯನ ನಡೆಸಿ ನ್ಯಾಯ ದೊರಕಿಸಿಕೊಡಬೇಕು, ಮೈಸೂರು, ಚಾಮರಾಜನಗರದಲ್ಲಿ ವಾಸವಿರುವ ಪೌರಕಾರ್ಮಿಕರಾಗಿ ಬೀದಿ ಕಸ ಗುಡಿಸುವ ಕೆಲಸ ಮಾಡುತ್ತಿದ್ದಾರೆ. ಇವರ ಜಾತಿಯಲ್ಲಿಯೇ ಹೊಲೆಯ ಶಬ್ದ ಅಂಟಿ ಬಂದಿದ್ದರೂ ಸಹ ಜಾತಿ ಗಣತಿಯ ಸಂದರ್ಭದಲ್ಲಿ ಮಾದಿಗ ಜಾತಿಗೆ ಸೇರ್ಪಡೆ ಮಾಡಿಕೊಳ್ಳತ್ತಿದ್ದಾರೆ ಇಂತಹ ತಪ್ಪುಗಳು ಆಗದಂತೆ ನೋಡಿಕೊಳ್ಳಬೇಕು ಎಂದರು.

2011ನೇ ಜನಗಣತಿಯ ಪ್ರಕಾರ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ ಒಟ್ಟು 58,500 ಕುಟುಂಬಗಳಿದ್ದು 2.58 ಲಕ್ಷ ಜನಸಂಖ್ಯೆ ಇತ್ತು. 2025ರ ಜನಗಣತಿಯ ಸಂದರ್ಭದಲ್ಲಿ 70,643 ಕುಟುಂಬಗಳು ದಾಖಲಾಗಿದ್ದು 2,34,848 ಜನಸಂಖ್ಯೆ ಇದೆ. ಹಾಗಾದರೆ ಉಳಿದ 23.152 ಜನ ಎಲ್ಲ ಹೋದರು ಎಂದು ಪ್ರಶ್ನಿಸಿದ ಅವರು, 2011ರಲ್ಲಿ ನಡೆಸಿದ ಜಾತಿ ಗಣತಿಯಲ್ಲಿ ಕೆಲವು ಜಾತಿಗಳನ್ನು ಕೈ ಇತರೆ ವರ್ಗಕ್ಕೆ ಸೇರಿಸಲಾಗಿತ್ತು. ಅದನ್ನು ಸರಿಪಡಿಸಿ ಒಳ ಮೀಸಲಾತಿ ಕಲ್ಪಿಸುವ ಕೆಲಸವಾಗಬೇಕು ಎಂದರು.ಕಳೆದ 14 ವರ್ಷಗಳ ಹಿಂದೆ ನಡೆದ ಜನಗಣತಿಯಲ್ಲಿ ದಾಖಲಾಗಿದ್ದಷ್ಟು ಜನಸಂಖ್ಯೆ ಕೂಡ 2025ರ ಜನಗಣತಿಯಲ್ಲಿ ದಾಖಲಾಗಿಲ್ಲ. ಅಲ್ಲದೇ ಕಳೆದ 14 ವರ್ಷಗಳ ಅಂತರದಲ್ಲಿ 12,143 ಕುಟುಂಬಗಳು ಹೆಚ್ಚಾಗಿ ಕಂಡುಬರುತ್ತಿದ್ದು ಜನಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಅಭಿಮಾನ ಬಳಗದ ಕೆ.ಎಂ.ನಾಗರಾಜು, ಸಂಘಸೇನಾ, ಕಮಲ್ ನಾಗರಾಜ್, ರಾಜೇಂದ್ರ, ಲಿಂಗಣ್ಣ, ಭಾಗ್ಯ, ಸುಂದರ್ ಇದ್ದರು.