ಸಾರಾಂಶ
ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು
ವಿಜ್ಞಾನ ಎಷ್ಟೇ ಮುಂದುವರೆದರೂ ಸಹ ರಕ್ತವನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ. ರಕ್ತಕ್ಕೆ ಪರ್ಯಾಯ ವಸ್ತು ಬೇರೋಂದಿಲ್ಲ ಎಂದು ಶೃಂಗೇರಿಯ ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯ ಡಾ.ಲಕ್ಷ್ಮೀನಾರಾಯಣ ಹೇಳಿದರು.ಪಟ್ಟಣದ ಜೆಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆಯ ವತಿಯಿಂದ ಶ್ರೀ ಅಭಿನವ ವಿದ್ಯಾತೀರ್ಥ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದಲ್ಲಿ ಬುಧವಾರ ನಡೆದ ಸಿಂಧೂರ ಸಂಜೀವಿನಿ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
ಮಾನವನ ದೇಹದಲ್ಲಿ ನಿಗದಿತ ಪ್ರಮಾಣದಲ್ಲಿ ರಕ್ತವಿಲ್ಲದೆ ಕಡಿಮೆಯಾದರೆ ದೇಹದ ಸ್ಥಿತಿ ಕ್ಷೀಣವಾಗಿ ವಿವಿಧ ರೋಗಬಾಧೆ ಕಾಡಲಿದೆ. ದೇಹದ ಪ್ರತಿಯೊಂದು ಕೋಶಕ್ಕೂ ರಕ್ತದ ಕಾರ್ಯ ನಡೆಯುತ್ತಲೇ ಇರಬೇಕಾಗಿದೆ.ವಿಶ್ವದಲ್ಲಿ ವಿಜ್ಞಾನ ಸಾಕಷ್ಟು ಮುಂದುವರೆದಿದ್ದು, ಚಂದ್ರಲೋಕಕ್ಕೂ ಮಾನವ ಕಾಲಿಟ್ಟು ಬಂದಿದ್ದಾನೆ. ಪ್ರಾಪಂಚಿಕವಾಗಿ ಬೇರೆ ಬೇರೆ ಸಾಧನೆ, ಸಂಶೋಧನೆಗಳನ್ನು ಮಾಡಲಾಗಿದೆ. ಆದರೆ ರೋಗಗಳಿಗೆ ತುತ್ತಾದ ವ್ಯಕ್ತಿಗೆ ರಕ್ತವನ್ನು ನೀಡದೆ ಅದಕ್ಕೆ ಪರ್ಯಾಯವಾದ ಯಾವುದೇ ವಸ್ತುವನ್ನು ಸೃಷ್ಟಿ ಮಾಡಲು ಸಾಧ್ಯವಾಗಿಲ್ಲ ಎಂದರು.
ಒಬ್ಬರ ರಕ್ತವನ್ನು ಮತ್ತೊಬ್ಬರಿಗೆ ಕೊಟ್ಟು ಜೀವ ಉಳಿಸಬೇಕಿದೆಯೇ ಹೊರತು ಬೇರೆ ಯಾವುದೇ ಮಾರ್ಗಗಳು ಇಲ್ಲ. ಯಾವುದೇ ಫಲಾಪೇಕ್ಷೆಯಿಲ್ಲದೆ ಒಬ್ಬರ ಜೀವ ಉಳಿಸಲು ಸ್ವಯಂ ಪ್ರೇರಿತವಾಗಿ ನೀಡುವುದೇ ರಕ್ತದಾನವಾಗಿದೆ.ಬಾಳೆಹೊನ್ನೂರು ಜೇಸಿ ಸಂಸ್ಥೆಯು ದೇಶದ ಸೈನಿಕರು ಹಾಗೂ ರೈತರ ಹೆಸರಿಗಾಗಿ ಅರ್ಪಣೆ ಮಾಡುವ ನಿಟ್ಟಿನಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿರುವುದು ಶ್ಲಾಘನೀಯವಾಗಿದೆ. ಜೇಸಿ ಸಂಸ್ಥೆಯ ಇಂತಹ ಕಾರ್ಯಗಳು ಇನ್ನಷ್ಟು ಮುಂದುವರೆಯಲಿ ಎಂದರು.
ಬಿ.ಕಣಬೂರು ಗ್ರಾಪಂ ಅಧ್ಯಕ್ಷ ರವಿಚಂದ್ರ ಶಿಬಿರ ಉದ್ಘಾಟಿಸಿ ಮಾತನಾಡಿ, ಬಾಳೆಹೊನ್ನೂರು ಜೇಸಿ ಸಂಸ್ಥೆಯು ಈ ವ್ಯಾಪ್ತಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡುತ್ತಿದ್ದು, ಗ್ರಾಪಂನಿಂದ ನೀಡಿದ ಭವನದ ಜಾಗವನ್ನು ಸದುಪಯೋಗಪಡಿಸಿಕೊಂಡಿದೆ.ಬಿ.ಕಣಬೂರು ಗ್ರಾಪಂ ವತಿಯಿಂದ ಪ್ರಸ್ತುತ ತಾಲೂಕು ಪತ್ರಕರ್ತರ ಸಂಘಕ್ಕೆ ಪತ್ರಿಕಾ ಭವನ ನಿರ್ಮಾಣಕ್ಕೆ ಜಾಗವನ್ನು ಸಹ ನೀಡಿದ್ದು, ಶೀಘ್ರದಲ್ಲಿಯೇ ಉತ್ತಮ ಭವನ ನಿರ್ಮಾಣ ಮಾಡಿ ಸಾರ್ವಜನಿಕ ಸೇವೆಗೆ ಅನುವು ಮಾಡಿಕೊಡಲಿದೆ ಎಂಬ ಭರವಸೆಯಿದ ಎಂದರು.
ಬಾಳೆಹೊನ್ನೂರು ಪಟ್ಟಣ ಪ್ರಸ್ತುತ ಜಿಲ್ಲೆಯಲ್ಲಿಯೇ ಗಮನ ಸೆಳೆದಿದ್ದು, ಇತರೆ ಪಟ್ಟಣಗಳಿಗಿಂತ ಹೆಚ್ಚಿನ ಅಭಿವೃದ್ಧಿ ಹೊಂದಿದೆ. ಉತ್ತಮವಾದ ಪಾರ್ಕಿಂಗ್, ಬಸ್ ನಿಲ್ದಾಣದ ಸೌಲಭ್ಯವನ್ನು ಕಲ್ಪಿಸಲಾಗಿದೆ. ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹಳೇ ಟಿಬಿ ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಲಾಗಿದೆ. ಗ್ರಾಪಂ ಮುಂಭಾಗದ ರಸ್ತೆಯು ಶೀಘ್ರವಾಗಿ ಕಾಂಕ್ರೀಟಿಕರಣಗೊಳ್ಳಲಿದೆ ಎಂದರು.ಜೇಸಿಐ ಅಧ್ಯಕ್ಷ ಇಬ್ರಾಹಿಂ ಶಾಫಿ, ನಿಕಟಪೂರ್ವ ಅಧ್ಯಕ್ಷ ಎನ್.ಶಶಿಧರ್, ಕಾರ್ಯದರ್ಶಿ ವಿ.ಅಶೋಕ, ಲಯನ್ಸ್ ಕ್ಲಬ್ ಅಧ್ಯಕ್ಷ ಎಂ.ವಿ.ಶ್ರೀನಿವಾಸಗೌಡ, ಕಾರ್ಯಕ್ರಮ ನಿರ್ದೇಶಕ ಸಿ.ವಿ.ಸುನೀಲ್, ಶೃಂಗೇರಿ ರಕ್ತನಿಧಿ ಕೇಂದ್ರದ ಶ್ಯಾಮ್ಸುಂದರ್, ಲೇಡಿ ಜೇಸಿ ಅಧ್ಯಕ್ಷೆ ಫೌಜಿಯಾ ಶಾಫಿ, ಜೇಸಿ ಪೂರ್ವಾಧ್ಯಕ್ಷ ಚೈತನ್ಯ ವೆಂಕಿ, ಸುಧಾಕರ್, ಸತೀಶ್ ಅರಳೀಕೊಪ್ಪ, ರಿಚರ್ಡ್ ಮಥಾಯಿಸ್ ಮತ್ತಿತರರು ಹಾಜರಿದ್ದರು.