ಕನ್ನಡಪ್ರಭ ವಾರ್ತೆ ಬೆಂಗಳೂರು
ಎಸ್ಐಆರ್ ಸಮೀಕ್ಷೆ ವೇಳೆ ಗಣತಿ ನಮೂನೆ (ಎರ್ಮೋರೇಷನ್) ವಿತರಣೆ ವಿಚಾರವಾಗಿ ಕರ್ತವ್ಯ ನಿರತ ಸರ್ಕಾರಿ ಅಧಿಕಾರಿ ಮೇಲೆ ಹಲ್ಲೆ ನಡೆಸಿ ದುಂಡಾವರ್ತನೆ ತೋರಿದ್ದ ಇಬ್ಬರನ್ನು ಡಿ.ಜೆ.ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಕೊಳಚೆ ನಿರ್ಮೂಲನಾ ಮಂಡಳಿಯ ಮೇಲ್ವಿಚಾರಕ ಫಕೀರಪ್ಪ ಮೇಲೆ ಹಲ್ಲೆ ನಡೆದಿದ್ದು, ಜಯನಗರದ ಯಾರಬ್ ಹಾಗೂ ದಸ್ತಗಿರ್ನನ್ನು ಬಂಧಿಸಲಾಗಿದೆ. ಡಿ.ಜೆ.ಹಳ್ಳಿ ಸಮೀಪ ರೋಷನ್ ನಗರಕ್ಕೆ ಬುಧವಾರ ಮಧ್ಯಾಹ್ನ ಎಸ್ಐಆರ್ ಸಮೀಕ್ಷೆಗೆ ಸಿಬ್ಬಂದಿ ತೆರಳಿದ್ದಾಗ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಮೊದಲು ರೋಷನ್ ನಗರದಲ್ಲಿ ನೆಲೆಸಿದ್ದ ಯಾರಬ್ ಹಾಗೂ ದಸ್ತಗಿರಿ, ಇತ್ತೀಚಿಗೆ ಜಯನಗರಕ್ಕೆ ವಾಸ್ತವ್ಯ ಬದಲಿಸಿದ್ದರು. ಆದರೆ ಎಸ್ಐಆರ್ ಸಮೀಕ್ಷೆ ಸಂದರ್ಭದಲ್ಲಿ ತಮಗೆ ಗಣತಿ ನಮೂನೆ ನೀಡುವಂತೆ ಸಿಬ್ಬಂದಿಯನ್ನು ರೋಷನ್ ಹಾಗೂ ಯಾರಬ್ ಕೇಳಿದಿದ್ದರು. ಆಗ ತಾವು ಬೇರೆಡೆ ವಾಸವಾಗಿರುವ ಕಾರಣ ಗಣತಿ ನಮೂನೆ ನೀಡಲು ಕಾನೂನು ಪ್ರಕಾರ ಬರುವುದಿಲ್ಲವೆಂದು ಸಿಬ್ಬಂದಿ ನಿರಾಕರಿಸಿದ್ದರು. ಈ ಮಾತಿಗೆ ಆಕ್ಷೇಪಿಸಿ ಇಬ್ಬರು ಗಲಾಟೆ ಮಾಡಿದ್ದಾರೆ. ಆಗಲೂ ಗಣತಿ ನಮೂನೆ ವಿತರಿಸಲು ನಿರಾಕರಿಸಿದಾಗ ಫಕೀರಪ್ಪ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದಾರೆ.ತಕ್ಷಣವೇ ಘಟನಾ ಸ್ಥಳಕ್ಕೆ ಪೊಲೀಸರು ತೆರಳಿದ ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಬಳಿಕ ಸಂತ್ರಸ್ತ ನೀಡಿದ ದೂರಿನ ಮೇರೆಗೆ ಡಿ.ಜೆ.ಹಳ್ಳಿ ಠಾಣೆ ಪೊಲೀಸರು ಎಫ್ಐಆರ್ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.