ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಪೊಲೀಸ್ ಠಾಣೆ ಮುಂಭಾಗದ ಬಡಾವಣೆಯಲ್ಲಿ ಹಲವು ತಿಂಗಳಿಂದ ನಡೆಯುತ್ತಿದ್ದ ಗೋಮಾಂಸ ಮಾರಾಟದ ಕಸಾಯಿ ಖಾನೆ ಮೇಲೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರು ಪೊಲೀಸರ ನೇತೃತ್ವದಲ್ಲಿ ದಾಳಿ ನಡೆಸಿ ಗೋ ಮಾಂಸ ಹಾಗೂ ಹಸುಗಳನ್ನು ವಶಕ್ಕೆ ಪಡೆದು ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದ್ದಾರೆ.ಪಟ್ಟಣದ ಬಸವನಗುಡಿ ನಿವಾಸಿ ಸೈಮನ್ ಹಾಗೂ ಆರೋಗ್ಯ ದಾಸ್ ಬಂಧಿತ ಆರೋಪಿಗಳು. ಇವರಿಂದ ಗೋಮಾಂಸ ಹಾಗೂ ಏಳು ಜೀವಂತ ಹಸುಗಳನ್ನು ವಶಕ್ಕೆ ಪಡೆದು ಗೋಶಾಲೆಗೆ ಬಿಡಲಾಗಿದೆ.
ಬಂಧಿತ ಆರೋಪಿಗಳಾದ ಸೈಮನ್ ಮತ್ತು ಆರೋಗ್ಯದಾಸ್ ಅವರು ಪೊಲೀಸ್ ಠಾಣೆ ಮುಂಭಾಗದ ಬಸವನಗುಡಿ ಬಡಾವಣೆಯ ಆರೋಪಿ ಸೈಮನ್ ಮನೆಯಲ್ಲಿ ಹೊರಗಡೆಯಿಂದ ಜೀವಂತ ಹಸುಗಳನ್ನು ತಂದು ಕತ್ತರಿಸಿ ಗೋಮಾಂಸ ಮಾರಾಟ ಮಾಡುತ್ತಿದ್ದರು. ಆರೋಪಿಗಳು ಗೋಮಾಂಸ ಮಾರಾಟ ಮಾಡುತ್ತಿರುವ ವಿಚಾರ ಸ್ಥಳೀಯ ಪೊಲೀಸರಿಗೂ ತಿಳಿದಿದ್ದರೂ ಮೌನವಹಿಸಿದ್ದರು ಎನ್ನಲಾಗಿದೆ.ಆರೋಪಿ ಸೈಮನ್ ಭಾನುವಾರ ಗೋಮಾಂಸ ಮಾರಾಟ ಮಾಡುತ್ತಿರುವ ವಿಚಾರ ತಿಳಿದು ನಂತರ ಎಸ್ಪಿ ಗಮನಕ್ಕೆ ತಂದು ಅವರ ಸೂಚನೆ ಮೇರೆಗೆ ವಿಶ್ವ ಹಿಂದೂ ಪರಿಷತ್, ಬಜರಂಗದಳದ ತಾಲೂಕು ಅಧ್ಯಕ್ಷ ಮಾಜಿ ಸೈನಿಕ ಕೆನ್ನಾಳು ಕಮಲೇಶ್, ಕಾರ್ಯದರ್ಶಿ ಕೇಶವ ಡಿ.ಕೆ., ಸಂಚಾಲಕ ಅರಳಕುಪ್ಪೆ ಯೋಗೇಶ್, ಶಂಕರ ಸೇರಿದಂತೆ ಹಲವರು ಸಬ್ ಇನ್ಸ್ಪೆಕ್ಟರ್ ಉಮೇಶ್ ಹಾಗೂ ಸ್ಥಳೀಯ ಪೊಲೀಸರ ನೇತೃತ್ವದಲ್ಲಿ ಭಾನುವಾರ ಬೆಳಗ್ಗೆ ದಾಳಿ ನಡೆಸಿದಾಗ ಆರೋಪಿ ಸೈಮನ್ ಹಾಗೂ ಆರೋಗ್ಯದಾಸ್ ಅವರು ಹಸುವನ್ನು ಕತ್ತರಿಸಿ ತಮ್ಮ ಮನೆಯಲ್ಲಿ ಗೋಮಾಂಸ ಮಾರಾಟ ಮಾಡುತ್ತಿರುವುದು ಕಂಡುಬಂದಿದೆ.
ತಕ್ಷಣ ಪೊಲೀಸರು ಗೋಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಮಾಂಸ ಹಾಗೂ ಏಳು ಜೀವಂತ ಹಸುಗಳನ್ನು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಕಲಮೇಶ್ ಮಾತನಾಡಿ, ಪಟ್ಟಣದ ಪೊಲೀಸ್ ಠಾಣೆ ಮುಂಭಾಗದ ಬಡಾವಣೆಯಲ್ಲಿ ನಡೆಯುತ್ತಿದ್ದ ಕಸಾಯಿ ಖಾನೆ ಮೇಲೆ ಪೊಲೀಸ್ ನೇತೃತ್ವದಲ್ಲಿ ವಿಶ್ವ ಹಿಂದೂ ಪರಿಷತ್ದ ಹಾಗೂ ಬಜರಂಗ ದಳದ ಕಾರ್ಯಕರ್ತರು ದಾಳಿಸಿ ನಡೆಸಿ ಗೋಮಾಂಸ ಹಾಗೂ ಹಸುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಹಿಂದೆ ಹಲವು ಬಾರಿ ದಾಳಿ ನಡೆಸಿದ್ದರೂ ಇವರು ಎಚ್ಚೆತ್ತುಕೊಳ್ಳದೆ ಗೋಮಾಂಸ ಮಾರಾಟ ಮಾಡುತ್ತಿದ್ದರು. ಹಸುಗಳ ಮಾಂಸ ಪಟ್ಟಣದ ಹಿಂದೂ ಹೋಟೆಲ್ಗಳಿಗೂ ಸಪ್ಲೆ ಮಾಡಲಾಗುತ್ತಿದೆ ಎಂಬ ಮಾಹಿತಿ ಇದ್ದು ಪೊಲೀಸರು ಕ್ರಮವಹಿಸಬೇಕು ಎಂದು ತಿಳಿಸಿದರು.