ಮಾಲೂರು: ತಾಲೂಕಿನ ಚಿಕ್ಕಕಡತೂರು ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ಅಡಿಯಲ್ಲಿ ಸಾರ್ವಜನಿಕರಲ್ಲಿ ಸ್ವಚ್ಛತೆ, ಮಿತವಾದ ನೀರಿನ ಬಳಕೆ, ಮಕ್ಕಳಲ್ಲಿ ಮೊಬೈಲ್‌ ಬಳಕೆಯ ಜಾಗೃತಿ ಕುರಿತು ಬೀದಿ ನಾಟಕ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಸತೀಶ್‌ ಅವರು, ಮಾತೃಶ್ರೀ ಹೇಮಾವತಿ ಹೆಗಡೆಯವರ ಆಶಯದಂತೆ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದು, ಈ ಯೋಜನೆ ಮೂಲಕ ಮಹಿಳೆಯರಲ್ಲಿ ಕೌಟುಂಬಿಕ ಮಾಹಿತಿ ಹಾಗೂ ಸಾಮಾಜಿಕ ಕಳಕಳಿ ಕುರಿತಂತೆ ಆರೋಗ್ಯ, ಶಿಕ್ಷಣ, ಕುಟುಂಬ ನಿರ್ವಹಣೆ, ಸ್ವಚ್ಛತೆ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿಗಳನ್ನು ನೀಡಲಾಗುತ್ತಿದೆ ಎಂದರು. ಇದಲ್ಲದೇ ವಿಶೇಷವಾಗಿ ಜನರ ಮನಮುಟ್ಟುವಂತೆ ಜಾಗೃತಿ ಮೂಡಿಸುವ ಸಲುವಾಗಿ ಬೀದಿ ನಾಟಕ ಹಮ್ಮಿಕೊಂಡಿದ್ದು, ಇದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಜನಮನ ಕಲಾ ತಂಡದ ಮುಖ್ಯಸ್ಥ ಎನ್‌.ಸ್ವಾಮಿ ,ಕೀರ್ತೀ ಜ್ಞಾನವಿಕಾಸ ಕೇಂದ್ರದ ಅಧ್ಯಕ್ಷರಾದ ನೇತ್ರಾವತಿ, ಮೇಲ್ವಿಚಾರಕಿ ಲತಾ, ಸೇವಾ ಪ್ರತಿನಿಧಿ ನಾಗವೇಣಿ, ಸಮನ್ವಯಾಧಿಕಾರಿ ರಜನಿ ಇನ್ನಿತರರು ಇದ್ದರು.