ಸಾರಾಂಶ
ಉಡುಪಿ: ಇಲ್ಲಿನ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ವಾರ್ಷಿಕ ಸಾಮಾನ್ಯ ಸಭೆ ನಗರದ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಸೊಸೈಟಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆಯಲ್ಲಿ ಜರುಗಿತು.
ಸಂಘದ ಪ್ರಧಾನ ವ್ಯವಸ್ಥಾಪಕ ರಾಜೇಶ್ ವಿ. ಶೇರಿಗಾರ್ ವಾರ್ಷಿಕ ವರದಿ, ಲೆಕ್ಕಪತ್ರಗಳನ್ನು ಮಂಡಿಸಿದರು. ವರದಿ ಸಾಲಿನ ಅಂತ್ಯಕ್ಕೆ ಸಂಘವು ಒಟ್ಟು 21,519 ಸದಸ್ಯರಿಂದ ರು. 4.83 ಕೋಟಿ ಪಾಲು ಬಂಡವಾಳ ಹಾಗೂ ರು. 573.19 ಕೋಟಿ ಠೇವಣಿ ಹೊಂದಿದ್ದು, ರು. 476.99 ಕೋಟಿ ಹೊರಬಾಕಿ ಸಾಲ ಹೊಂದಿರುತ್ತದೆ. ಸಂಘವು 2024-25ನೇ ಸಾಲಿನಲ್ಲಿ ಸರಿಸುಮಾರು ರು. 2,956 ಕೋಟಿಗೂ ಮೇಲ್ಪಟ್ಟು ವಾರ್ಷಿಕ ವಹಿವಾಟು ನಡೆಸಿರುತ್ತದೆ. ವರದಿ ಸಾಲಿನಲ್ಲಿ ಸಂಘವು ರು.15.47 ಕೋಟಿ ನಿವ್ವಳ ಲಾಭ ಗಳಿಸಿದ್ದು, ಸಂಘದ ಸದಸ್ಯರಿಗೆ ಶೇ.15 ಡಿವಿಡೆಂಡ್ ಘೋಷಿಸಲಾಯಿತು.13 ಪೌರಕಾರ್ಮಿಕರನ್ನು ಮತ್ತು ಭರತನಾಟ್ಯದ ದಾಖಲೆ ಬರೆದ ವಿದುಷಿ ದೀಕ್ಷಾ ವಿ. ಅವರನ್ನು ಗೌರವಿಸಲಾಯಿತು.ಅಧ್ಯಕ್ಷರು ಮಾತನಾಡಿ, ಸತತ 2 ಬಾರಿ ರಾಷ್ಟ್ರ ಪ್ರಶಸ್ತಿ, 9 ಬಾರಿ ರಾಜ್ಯ ಪ್ರಶಸ್ತಿ ಪಡೆದಿರುವ ಸಂಸ್ಥೆಗೆ ಇತ್ತೀಚೆಗೆ ಮಂಗಳೂರಿನಲ್ಲಿ ಜರಗಿದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾಸಭೆಯಲ್ಲಿ 2024-25ನೇ ಸಾಲಿನ ‘ಸಾಧನಾ ಪ್ರಶಸ್ತಿ’ ಲಭಿಸಿರುತ್ತದೆ. ಸತತವಾಗಿ 19ನೇ ಬಾರಿಗೆ ಒಲಿದ ಜಿಲ್ಲಾ ಪ್ರಶಸ್ತಿ ಇದಾಗಿರುತ್ತದೆ ಎಂದರು.
ಡಿಜಿಟಲೀಕರಣದ ಹೆಜ್ಜೆಯಾಗಿ ಅಭಿವೃದ್ಧಿಪಡಿಸಿದ ‘ಚೇತನಾ ಮೊಬೈಲ್ ಆ್ಯಪ್’ ಅತ್ಯಂತ ಸುರಕ್ಷಿತವಾಗಿದ್ದು, ಸದಸ್ಯರು ಈ ಸೌಲಭ್ಯದ ಪ್ರಯೋಜನ ಪಡೆಯುವಂತೆ ತಿಳಿಸಿದರು. ದೈನಿಕ ಠೇವಣಿ ಸಂಗ್ರಹಣೆಯನ್ನು ಮೊಬೈಲ್ ಆ್ಯಪ್ (ಪಿಗ್ಮಿ ಮೊಬೈಲ್ ಆ್ಯಪ್) ಮೂಲಕ ನಡೆಸಲಾಗುತ್ತಿದೆ. ಸಂಸ್ಥೆ ಬ್ಯಾಂಕಿಂಗ್ ವ್ಯವಹಾರ ಮಾತ್ರವಲ್ಲದೇ ಶಿಕ್ಷಣ, ಆರೋಗ್ಯ ಇತ್ಯಾದಿ ಸಮಾಜಮುಖಿ ಸೇವಾ ಕಾರ್ಯಕ್ರಮಗಳಿಗೆ ವಾರ್ಷಿಕ ಸುಮಾರು ರು. 25 ಲಕ್ಷ ರು. ವಿನಿಯೋಗಿಸುತ್ತಿದೆ ಎಂದರು.ಸಂಘದ ಉಪಾಧ್ಯಕ್ಷ ಜಾರ್ಜ್ ಸಾಮ್ಯುವೆಲ್, ಆಡಳಿತ ಮಂಡಳಿ ಸದಸ್ಯರಾದ ಸಂಜೀವ ಕಾಂಚನ್, ಎಲ್. ಉಮಾನಾಥ, ಪುರುಷೋತ್ತಮ ಪಿ. ಶೆಟ್ಟಿ. ಹಾಜಿ ಸಯ್ಯದ್ ಅಬ್ದುಲ್ ರಜಾಕ್, ವಿನಯ ಕುಮಾರ್ ಟಿ.ಎ., ಪದ್ಮನಾಭ ಕೆ ನಾಯಕ್, ಸದಾಶಿವ ನಾಯ್ಕ್, ಸಾಧು ಸಾಲ್ಯಾನ್, ಜಯಾ ಶೆಟ್ಟಿ, ಸಭೆಯಲ್ಲಿ ಉಪಸ್ಥಿತರಿದ್ದರು. ಮಲ್ಪೆ ಶಾಖಾ ವ್ಯವಸ್ಥಾಪಕ ನವೀನ್ ಕೆ ಸನ್ಮಾನ ಕಾರ್ಯಕ್ರಮ ನಿರೂಪಿಸಿದರು. ಸಂಘದ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಪ್ರವೀಣ್ ಕುಮಾರ್ ವಂದಿಸಿದರು.