ಕುಕನೂರು: ತಾಲೂಕಿನ ಸಿದ್ನೆಕೊಪ್ಪ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಗ್ರಾಮದ ಮಹಿಳೆಯರು ತಹಸೀಲ್ದಾರ್ ಕಚೇರಿಯಲ್ಲಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು. ಗ್ರೇಡ್ 2 ತಹಸೀಲ್ದಾರ್ ಮುರುಳಿಧರರಾವ್ ಕುಲಕರ್ಣಿ ಮನವಿ ಸ್ವೀಕರಿಸಿದರು.

ವಿದ್ಯಾರ್ಥಿಗಳೂ ಸಾರಾಯಿ ಚಟಕ್ಕೆ ಬಲಿಯಾಗುತ್ತಿದ್ದಾರೆ. ಇದನ್ನು ತಡೆಯಬೇಕಾದ ಅಬಕಾರಿ ಇಲಾಖೆಯು ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದೆ. ಸಾರಾಯಿ ಅನೇಕ ಕುಟುಂಬಗಳನ್ನು ಬೀದಿಗೆ ತರುತ್ತಿದೆ. ಕುಡಿದು ಬಂದ ಪುರುಷರು ಕೊಡುವ ಹಿಂಸೆಗೆ ಮನೆಯಲ್ಲಿರುವ ಹೆಣ್ಣು ಮಕ್ಕಳು ಕಣ್ಣೀರು ಹಾಕುವ ಪ್ರಸಂಗಗಳು ನಡೆಯುತ್ತಿವೆ. ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಚಿಕ್ಕ-ಚಿಕ್ಕ ವಿದ್ಯಾರ್ಥಿಗಳು ಈ ಹೆಂಡದ ಚಟಕ್ಕೆ ದಾಸರಾಗುತ್ತಿರುವ ವಿದ್ಯಾಮಾನ ನಡೆಯುತ್ತಿರುವುದು ದುದೈರ್ವದ ಸಂಗತಿ. ಗ್ರಾಮದ ವ್ಯಾಪ್ತಿಯಲ್ಲಿ ಇಂದಿನಿಂದಲೇ ಅಕ್ರಮ ಸಾರಾಯಿ ಮಾರಾಟ ನಿಲ್ಲಬೇಕು. ಅಕ್ರಮ ಸಾರಾಯಿ ಮಾರಾಟಗಾರರನ್ನು ಗುರುತಿಸಿ ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಸಿದ್ನೆಕೊಪ್ಪ ಗ್ರಾಮದ ಮಹಿಳೆಯರಾದ ಸಿದ್ದಮ್ಮ, ವಿಶಾಲಾಕ್ಷಿ, ಸುವರ್ಣ, ಸಿದ್ದಮ್ಮ, ಚೆನ್ನಮ್ಮ, ಅಂದಮ್ಮ, ಲಕ್ಷ್ಮಮ್ಮ, ದೇವಕ್ಕ ಇತರರು ಇದ್ದರು.