ಕೊಪ್ಪಳ: ತಾಲೂಕಿನ ಬಸಾಪುರ ಕೆರೆಯನ್ನು ಜಾನುವಾರುಗಳಿಗೆ ನೀರು ಕುಡಿಯುವುದಕ್ಕಾಗಿ ಮುಕ್ತವಾಗಿಡಲು ಜಿಲ್ಲಾಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಂಪನಿಗೆ ಬುದ್ದಿ ಹೇಳಬೇಕು. ಹೈಕೋರ್ಟ್ ಆದೇಶವಿದ್ದರೂ ಯಾಕೆ ಹಿಂಜರಿಕೆ ಎಂದು ಹೋರಾಟಗಾರ್ತಿ ಸಾವಿತ್ರಿ ಮುಜುಮದಾರ ಪ್ರಶ್ನಿಸಿದರು.

ಬಲ್ಡೋಟ ಕಾರ್ಖಾನೆ ತೊಲಗಿಸಿ ಕೊಪ್ಪಳ ಉಳಿಸಿ ಘೋಷ ವಾಕ್ಯದೊಂದಿಗೆ ಜಿಲ್ಲಾ ಬಚಾವೋ ಆಂದೋಲನ ಸಮಿತಿಯ ಜಂಟಿ ಕ್ರಿಯಾ ವೇದಿಕೆ ನಗರದ ನಗರಸಭೆ ಬಳಿ ನಡೆಸುತ್ತಿರುವ ಅನಿರ್ದಿಷ್ಠಾವಧಿ ಧರಣಿಯಲ್ಲಿ ಪಾಲ್ಗೊಂಡು ಮಂಗಳವಾರ ಮಾತನಾಡಿದ ಅವರು, ಧಗಧಗ ಉರಿಯುತ್ತಿರುವ ಬಿರುಬಿಸಿಲಿಗೆ ಜನ, ಜಾನುವಾರು ಬಸವಳಿದು ಹೋಗಿವೆ. ಬಸಾಪುರ ಕೆರೆ ಸಮುದಾಯದ ಆಸ್ತಿ. ಸಾವಿರಾರು ಜಾನುವಾರು, ಕುರಿ, ಮೇಕೆ ಬೇಸಿಗೆಯ ನೀರಿನ ದಾಹಕ್ಕೆ ಬಾಯಿ ತೆರೆದಾಗಲೂ ಕಾರ್ಖಾನೆಯವರು ಕಾಂಪೌಂಡ್ ಕಟ್ಟಿ ಕೆರೆಯನ್ನು ಕಬ್ಜಾದಲ್ಲಿ ಇಟ್ಟುಕೊಂಡು ಮಾನವೀಯತೆ ಮರೆತಿರುವುದನ್ನು ಖಂಡಿಸೋಣ ಎಂದರು.

ಸಾಮಾಜಿಕ ಹೋರಾಟಗಾರ್ತಿ ಸರೋಜಾ ಬಾಕಳೆ ಮಾತನಾಡಿ, ಜೀವ, ಆರೋಗ್ಯ ಉಳಿಸಿಕೊಳ್ಳುವ ಈ ಹೋರಾಟಕ್ಕೆ ಸರ್ವ ಜನರು ಬೆಂಬಲಕ್ಕೆ ಬರಬೇಕು ಎಂದರು.

ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಡಾ. ಮಂಜುನಾಥ ಸಜ್ಜನ್, ಮಹಿಳಾ ನಾಯಕಿ ಕಾವ್ಯಾ ಗಡಾದ, ರಾಜ್ಯ ರೈತ ಸಂಘದ ಮುಖಂಡ ಭೀಮಸೇನ ಕಲಕೇರಿ, ಶಿವಪ್ಪ ದೇವರಮನಿ ಬಗನಾಳ, ಮಹೇಶ ವದ್ನಾಳ ಬಗನಾಳ, ಗವಿಸಿದ್ದಪ್ಪ ಪುಟಗಿ ಬಗನಾಳ, ಜಗದೀಶ ಕುಂಬಾರ ಬಗನಾಳ, ಗಣೇಶ ವಿಶ್ವಕರ್ಮ, ಕೊಟ್ರಪ್ಪ ಪಲ್ಲೇದ ಬಗನಾಳ, ದೇವಪ್ಪ ಬಗನಾಳ, ಮೂಕಪ್ಪ ಮೇಸ್ತ್ರಿ ಬಸಾಪುರ, ರವಿ ಕಾಂತನವರ, ಶಂಭುಲಿಂಗಪ್ಪ ಹರಗೇರಿ, ರಾಜಶೇಖರ ಏಳುಬಾವಿ, ಯಮನೂರಪ್ಪ ಹಾಲಳ್ಳಿ ಬಸಾಪುರ, ಮಹಾದೇವಪ್ಪ ಮಾವಿನಮಡು, ಶರಣು ಶೆಟ್ಟರ್, ನಾಗರಾಜ ಕುಷ್ಟಗಿ, ಬಿ.ಜಿ. ಕರಿಗಾರ, ವಿಜಯಮಹಾಂತೇಶ ಹಟ್ಟಿ, ರತ್ನಮ್ಮ, ಭೀಮಪ್ಪ ಯಲಬುರ್ಗಾ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.