ಶರಣರ ಚಳವಳಿ ಹಬ್ಬಲು ಬಸವಣ್ಣ, ಬಿಜ್ಜಳರ ಬಾಂಧವ್ಯ ಕಾರಣ

| Published : Dec 29 2024, 01:16 AM IST

ಸಾರಾಂಶ

ಬಸವಣ್ಣ ಮತ್ತು ಬಿಜ್ಜಳ ರಾಜ ಅತ್ಯಾಪ್ತರಾಗಿದ್ದುದ್ದರಿಂದಲೇ ಶರಣರ ಚಳವಳಿ 12ನೇ ಶತಮಾನದಲ್ಲಿ ವ್ಯಾಪಕವಾಗಿ ಹಬ್ಬಲು ಸಾಧ್ಯವಾಯಿತು. ತಳಸಮೂಹದಿಂದ ಬಂದಿದ್ದ ಬಿಜ್ಜಳ, ಚಾಲುಕ್ಯ ತೈಲಪನ ಮಾಂಡಲೀಕನಾಗಿ ನಂತರ ಸ್ವತಃ ತಾನೇ ಪಟ್ಟ ಕಟ್ಟಿಕೊಂಡಾಗ ಬಸವಣ್ಣನವರ ಸಹಕಾರ ಅತ್ಯಗತ್ಯವಾಗಿತ್ತು ಎಂದು ಬಸವ ತತ್ವ ಪ್ರತಿಪಾದಕ ಮಹಾಂತೇಶ ನವಲಕಲ್ ಅವರು ನುಡಿದರು.

ತಿಂಗಳ ಬಸವ ಬೆಳಕು -121ರ ಸಭೆಯಲ್ಲಿ ಕಲ್ಯಾಣ ಕ್ರಾಂತಿ ವಿಷಯ ಮಂಡಿಸಿದ ಮಹಾಂತೇಶ ನವಲಕಲ್

ಕನ್ನಡಪ್ರಭ ವಾರ್ತೆ ಶಹಾಪುರಬಸವಣ್ಣ ಮತ್ತು ಬಿಜ್ಜಳ ರಾಜ ಅತ್ಯಾಪ್ತರಾಗಿದ್ದುದ್ದರಿಂದಲೇ ಶರಣರ ಚಳವಳಿ 12ನೇ ಶತಮಾನದಲ್ಲಿ ವ್ಯಾಪಕವಾಗಿ ಹಬ್ಬಲು ಸಾಧ್ಯವಾಯಿತು. ತಳಸಮೂಹದಿಂದ ಬಂದಿದ್ದ ಬಿಜ್ಜಳ, ಚಾಲುಕ್ಯ ತೈಲಪನ ಮಾಂಡಲೀಕನಾಗಿ ನಂತರ ಸ್ವತಃ ತಾನೇ ಪಟ್ಟ ಕಟ್ಟಿಕೊಂಡಾಗ ಬಸವಣ್ಣನವರ ಸಹಕಾರ ಅತ್ಯಗತ್ಯವಾಗಿತ್ತು ಎಂದು ಬಸವ ತತ್ವ ಪ್ರತಿಪಾದಕ ಮಹಾಂತೇಶ ನವಲಕಲ್ ಅವರು ನುಡಿದರು.

ನಗರದ ಲಿಂಗಣ್ಣ ಸತ್ಯಂಪೇಟೆ ವೇದಿಕೆಯಲ್ಲಿ ಬಸವಮಾರ್ಗ ಪ್ರತಿಷ್ಠಾನ ಸತ್ಯಂಪೇಟೆ ವತಿಯಿಂದ ಏರ್ಪಡಿಸಿದ್ದ ಶರಣ ಸಿದ್ದಲಿಂಗಪ್ಪ ಕಾಕನಾಳೆ ಮತ್ತು ಸರಸ್ವತಿ ಕಾಕನಾಳೆ ಸ್ಮರಣೋತ್ಸವ ನಿಮಿತ್ತ ತಿಂಗಳ ಬಸವ ಬೆಳಕು -121 ರ ಸಭೆಯಲ್ಲಿ ಭಾಗವಹಿಸಿ ಕಲ್ಯಾಣ ಕ್ರಾಂತಿ ಎಂಬ ವಿಷಯ ಕುರಿತು ಅವರು ಮಾತನಾಡಿದರು.

ಬಸವಣ್ಣರ ಸದಾ ವಿನಯ ಹಾಗೂ ನಿಷ್ಠುರವಾದ ಮಾತುಗಳು ಕಲ್ಯಾಣ ರಾಜ್ಯವನ್ನು ಕಟ್ಟಲು ಸಾಧ್ಯವಾಯಿತು. ಬಿಜ್ಜಳನ ಮಗ ಸೋವಿದೇವನ ಮಹತ್ವಾಕಾಂಕ್ಷೆಯಿಂದಾಗಿ ಪಟ್ಟಭದ್ರರು ಶರಣರನ್ನು ಹಾಗೂ ಅವರ ಸಾಹಿತ್ಯವನ್ನು ನಾಶ ಮಾಡಲು ಪಟತೊಟ್ಟಂತೆ ಬೆನ್ನುಬಿದ್ದರು. ವಚನ ಸಾಹಿತ್ಯ ಮತ್ತು ಶರಣರ ವಾಸ್ತವ ಬದುಕು ಪರಾವಲಂಬಿ ಜೀವಿಗಳಿಗೆ ನುಂಗದ ತುತ್ತಾಯಿತು ಎಂದರು.

ಹರಳಯ್ಯ ಮಧುವರಸರ ಕುಟುಂಬ ಸಂಬಂಧವನ್ನು ಕಂಡು ಪುರೋಹಿತರು ಕೆಂಡಾಮಂಡಲವಾದರು. ಬಸವಣ್ಣ ಮತ್ತು ಬಿಜ್ಜಳ ಸ್ನೇಹ ಅನಿವಾರ್ಯವಾಗಿ ಕಡಿದುಹೋಯಿತು. ಇದುವರೆಗೆ ದೊರೆತಿರುವ ಶಾಸನಗಳು ಇತಿಹಾಸವನ್ನು ಸಾರಿ ಸಾರಿ ಹೇಳುತ್ತಿವೆ ಎಂದು ಅವರು ವಿವರಿಸಿದರು.

ಪತ್ರಕರ್ತ ಪ್ರಕಾಶ ದೊರೆ ಮಾತನಾಡಿ, ಬಸವಮಾರ್ಗದ ಪರಿಚಯ ಮಾಡಿಕೊಟ್ಟು ಸತ್ಯ ನ್ಯಾಯದ ಪರವಾಗಿ ನಿಲ್ಲಲು ಮತ್ತು ಜನ ಸಾಮಾನ್ಯರ ಬದುಕಿನ ಕಷ್ಟಗಳಿಗೆ ಸ್ಪಂದಿಸುವ ಮನಸ್ಥಿತಿಯನ್ನು ಲಿಂಗಣ್ಣ ಸತ್ಯಂಪೇಟೆಯವರು ಮಾಡಿಕೊಟ್ಟಿದ್ದಾರೆ ಎಂದರು.

ಬಸವಮಾರ್ಗ ಪ್ರತಿಷ್ಠಾನದ ವಿಶ್ವಾರಾಧ್ಯ ಸತ್ಯಂಪೇಟೆ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಾಮಾಣಿಕತೆ- ಸಾಮಾಜಿಕ ಕಾಳಜಿತೇ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ಲಿಂ. ಸಿದ್ಧಲಿಂಗಪ್ಪ ಕಾಕನಾಳೆಯವರು ನಮ್ಮೆಲ್ಲರಿಗೆ ಆದರ್ಶ ಎಂದರು.

ಜೇವರ್ಗಿ ಪುರಸಭೆಯ ಮುಖ್ಯಾಧಿಕಾರಿ ಶಂಭುಲಿಂಗ ದೇಸಾಯಿ ಮಾತನಾಡಿದರು. ಚೇತನ ಮಾಲಿಪಾಟೀಲ್ ಸ್ವಾಗತಿಸಿದರು. ಶಿವಣ್ಣ ಇಜೇರಿ ನಿರೂಪಿಸಿದರು. ಶಿವಕುಮಾರ ಕರದಳ್ಳಿ ವಂದಿಸಿದರು. ಫಜಲುದ್ದೀನ್ ರಹಮಾನ, ಮಹೇಶ ಪತ್ತಾರ ಹಾಗೂ ಬಸವಮಾರ್ಗದ ಚಿಣ್ಣರರು ವಚನ ಪ್ರಾರ್ಥನೆ ನಡೆಸಿಕೊಟ್ಟರು. ಶಾಂತಾ ಗಿರೀಶ ಕಾಕನಾಳೆ ಭಾಲ್ಕಿ ಜ್ಯೋತಿ ಬೆಳಗಿಸುವ ಮೂಲಕ ಸಭೆ ಉದ್ಘಾಟಿಸಿದರು.

ಬಸವರಾಜ ಹೇರುಂಡಿ, ಶಿವಯೋಗಪ್ಪ ಮುಡಬೂಳ, ಮಲ್ಲಿಕಾರ್ಜುನ ಗುಡಿ, ಭೀಮಣ್ಣ ಮೇಟಿ, ಷಣ್ಮುಖ ಸಾಹು, ಶಿವಕುಮಾರ ಆವಂಟಿ, ಬಸವರಾಜ ಆನೇಗುಂದಿ, ಅಕ್ಕಮಹಾದೇವಿ ಬಳಗ ಶಹಾಪುರ, ಅಡಿವೆಪ್ಪ ಜಾಕಾ, ನಾಗಪ್ಪ ಬೊಮ್ಮನಳ್ಳಿ, ವಿಶ್ವನಾಥ ಬುಂಕಲದೊಡ್ಡಿ, ಸಿದ್ದರಾಮ ಹೊನ್ಕಲ್, ಹಂಪಯ್ಯ ಚಂದ್ರಕಲಾ ಕೆಂಭಾವಿ, ರೇಖಾ ಯಡ್ರಾಮಿ, ಖಾಜಾ ಪಟೇಲ್, ತಿಪ್ಪಣ್ಣ ಜಮಾದಾರ, ಮಲ್ಲಿಕಾರ್ಜುನ ಸತ್ಯಂಪೇಟೆ, ಮಲ್ಲಪ್ಪ ನಾಡಗೌಡ, ದೇವಿಂದ್ರಪ್ಪ ಬಡಿಗೇರ, ವಿರೂಪಾಕ್ಷಿ ಸಿಂಪಿ, ಭಂಡಾರಿ ವಕೀಲ, ಚೆನ್ನಪ್ಪ ಗುಂಡಾನೋರ, ಮಲ್ಲಣ್ಣ ಶಿರವಾಳ, ಭೀಮರಾಯ ಶಿರವಾಳ, ಸಿದ್ದಲಿಂಗಪ್ಪ ಆನೇಗುಂದಿ ಇತರರಿದ್ದರು.