ಗದಗ: ಅಸಮಾನತೆಯಿಂದ ಕೂಡಿದ್ದ ಸಮಾಜದಲ್ಲಿಯ ಅಂಧಶ್ರದ್ಧೆ, ಮೂಢನಂಬಿಕೆ, ಕಂದಾಚಾರಗಳನ್ನು ತೊಲಗಿಸಿ ಸಮಸಮಾಜವನ್ನು ಕಟ್ಟಿದವರು ಬಸವೇಶ್ವರರು. ಸಮಾಜೋಧಾರ್ಮಿಕ ಚಳವಳಿಯ ಹರಿಕಾರರು ಬಸವಣ್ಣನವರು ಎಂದು ಡಾ. ತೋಂಟದ ಸಿದ್ದರಾಮ ಶ್ರೀಗಳು ತಿಳಿಸಿದರು.

ಸೋಮವಾರ ರಾತ್ರಿ ಲಿಂಗಾಯತ ಪ್ರಗತಿಶೀಲ ಸಂಘದ ಅಡಿಯಲ್ಲಿ ಜರುಗಿದ ಬಸವ ಜಯಂತಿ ಹಾಗೂ 2794ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಜಗತ್ತಿನ ಮೊದಲ ಪ್ರಜಾಪ್ರಭುತ್ವದ ನಿರ್ಮಾತೃ ಬಸವಣ್ಣನವರು. ಬಸವೇಶ್ವರರು ಮಾನವ ಸಂಸ್ಕೃತಿಗೆ ಕಳಂಕ ತರುವ ಜಾತಿ, ವರ್ಗ, ಲಿಂಗ ಅಸಮಾನತೆಯನ್ನು ತೊಲಗಿಸಿ ಕಾಯಕ, ದಾಸೋಹದ ಮೂಲಕ ಸಮಾಜೋಧಾರ್ಮಿಕ ಚಳವಳಿಯನ್ನು ಹುಟ್ಟು ಹಾಕಿ ಮಾನವತೆಯ ಅಡಿಯಲ್ಲಿ ಎಲ್ಲರೂ ಒಂದೇ ಎಂಬ ಸಮಾನತೆಯ ಸಂದೇಶ ಸಾರಿದರು ಎಂದರು. ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರು, ವಿಶ್ವಗುರು ಬಸವೇಶ್ವರರು ಅಂದು ಜಾತಿರಹಿತ ಸಮಾಜವನ್ನು ಕಟ್ಟಬೇಕೆಂಬ ಅವರ ಆಶಯ ಇಂದಿಗೂ ಸಂಪೂರ್ಣವಾಗಿ ಯಶಸ್ವಿಯಾಗದಿರುವುದು ವಿಷಾದನೀಯ ಎಂದರು.

ಮಾಜಿ ಸಚಿವ ಎಸ್.ಎಸ್. ಪಾಟೀಲ ಅವರು ಬಸವೇಶ್ವರರ ತತ್ವ ಚಿಂತನೆಗಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಬಸವ ಜಯಂತಿಗೆ ಅರ್ಥ ಬರುತ್ತದೆ ಎಂದರು.

ಬಳ್ಳಾರಿಯ ನಿಷ್ಠಿ ರುದ್ರಪ್ಪ ಅವರು ಉಪನ್ಯಾಸ ನೀಡಿದರು. ಪ್ರೊ. ಶಕುಂತಲಾ ಸಿಂಧೂರ ಬರೆದ ಗದಗ ಜಿಲ್ಲೆಯ ಸಾಂಸ್ಕೃತಿಕ ಕೊಡುಗೆಗಳು ಹಾಗೂ ಡಾ. ವೀರಣ್ಣ ರಾಜೂರ ಅವರು ಬರೆದ ಹಾಲಬಾವಿ ವೀರಭದ್ರಪ್ಪನವರು ಎಂಬ ಗ್ರಂಥಗಳನ್ನು ಬಿಡುಗಡೆಗೊಳಿಸಲಾಯಿತು. ವೀರೇಶ ಬುಳ್ಳಾ ಅವರು ಧರ್ಮ ಗ್ರಂಥ ಪಠಣ, ತೇಜಸ್ವಿನಿ ರಾಜಶೇಖರ ತೋಟದ ಅವರು ವಚನ ಚಿಂತನ ನೆರವೇರಿಸಿದರು. ರಾಜೇಶ್ವರಿ ಕಲಾ ಕುಟೀರ, ನಿತ್ಯಂ ಯೋಗ ಕೇಂದ್ರ ಹಾಗೂ ಭಕ್ತಿ ಹಾತಲಗಿ ಹಾಗೂ ಸಂಗಡಿಗರಿಂದ ವಚನ ನೃತ್ಯಗಳ ವಚನ ವೈಭವ ಕಾರ್ಯಕ್ರಮ ಜರುಗಿತು.

ಜಿಲ್ಲಾ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜಗೋಪಾಲ ಕಡ್ಲಿಕೊಪ್ಪ, ಸುರೇಶ ಮತ್ತು ಪಾರ್ವತಿ ಹಾಲಬಾವಿ, ರಶ್ಮಿ ಅಂಗಡಿ, ಜಾತ್ರಾ ಸಮಿತಿ ಅಧ್ಯಕ್ಷ ವಿನಾಯಕ ಮಾನ್ವಿ, ಶಕುಂತಲಾ ಸಿಂದೂರ ಉಪಸ್ಥಿತರಿದ್ದರು. ವಿನಾಯಕ ಮಾನ್ವಿ ಸ್ವಾಗತಿಸಿದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಡಾ. ಉಮೇಶ ಪುರದ ಸ್ವಾಗತಿಸಿ ನಿರೂಪಿಸಿದರು. ಶಿವಾನುಭವ ಸಮಿತಿ ಚೇರ್ಮನ್ ರಮೇಶ ಕಲ್ಲನಗೌಡರ, ವಿವೇಕಾನಂದಗೌಡ ಪಾಟೀಲ, ದಾನಯ್ಯ ಗಣಾಚಾರಿ, ಐ.ಬಿ. ಬೆನಕೊಪ್ಪ, ರತ್ನಕ್ಕ ಪಾಟೀಲ ಹಾಗೂ ಲಿಂಗಾಯತ ಪ್ರಗತಿಶೀಲ ಸಂಘದ ಪದಾಧಿಕಾರಿಗಳು ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.