ಆನ್‌ಲೈನ್ ವ್ಯವಹಾರ ನಡೆಸುವಾಗ ಜಾಗ್ರತೆ ಇರಲಿ: ಪಿಎಸ್‌ಐ ವೇಣುಗೋಪಾಲ್

| Published : May 26 2025, 12:01 AM IST

ಆನ್‌ಲೈನ್ ವ್ಯವಹಾರ ನಡೆಸುವಾಗ ಜಾಗ್ರತೆ ಇರಲಿ: ಪಿಎಸ್‌ಐ ವೇಣುಗೋಪಾಲ್
Share this Article
  • FB
  • TW
  • Linkdin
  • Email

ಸಾರಾಂಶ

ರೇಷ್ಮೆ ಡೀಲರ್‌ಗಳು ಆನ್‌ಲೈನ್ ವಹಿವಾಟು ನಡೆಸುವ ಮೊದಲು ಎಚ್ಚರಿಕೆವಹಿಸಬೇಕೆಂದು ನಗರ ಠಾಣೆ ಪಿಎಸ್‌ಐ ಎಂ.ವೇಣುಗೋಪಾಲ್ ಮನವಿ ಮಾಡಿದರು

ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ

ರೇಷ್ಮೆ ಡೀಲರ್‌ಗಳು ಆನ್‌ಲೈನ್ ವಹಿವಾಟು ನಡೆಸುವ ಮೊದಲು ಎಚ್ಚರಿಕೆವಹಿಸಬೇಕೆಂದು ನಗರ ಠಾಣೆ ಪಿಎಸ್‌ಐ ಎಂ.ವೇಣುಗೋಪಾಲ್ ಮನವಿ ಮಾಡಿದರು. ನಗರದ ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಸೈಬರ್ ಕ್ರೈಂ ತಡೆಗೆ ಹಮ್ಮಿಕೊಂಡಿದ್ದ ಜನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೇಷ್ಮೆ ಗೂಡಿಗೆ ಹೊರಗಿನಿಂದ ಯಾರೇ ಬರಲಿ ಅವರ ಬಗ್ಗೆ ಎಚ್ಚರಿಕೆಯಿಂದ ವಹಿವಾಟು ನಡೆಸಬೇಕೆಂದು ಸಲಹೆ ನೀಡಿದರು. ರೇಷ್ಮೆಗೂಡು ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಅದರಲ್ಲೂ ಹೊರಗಿನಿಂದ ಬರುವ ಕಾರ್ಮಿಕರ ಬಗ್ಗೆ ಎಚ್ಚರಿಕೆ ವಹಿಸಬೇಕು. ಅವರ ವಿಳಾಸ, ಆಧಾರ್ ಕಾರ್ಡ್ ಪಡೆದು ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಕೆಲವೊಮ್ಮೆ ಹೊರ ರಾಜ್ಯಗಳ ಕಾರ್ಮಿಕರು ಬಂದು ವ್ಯಾಪಾರಸ್ಥರ ಬಳಿ ಅಥವಾ ಡೀಲರ್‌ ಬಳಿ ಕೆಲಸ ಮಾಡುತ್ತೇವೆಂದು ಲಕ್ಷಾಂತರ ರು, ಪಡೆದು ಕೆಲವೇ ದಿನಗಳಿಗೆ ಕೆಲಸ ಬಿಟ್ಟು ಹೋಗುವುದರಿಂದ ಆರ್ಥಿಕ ಸಮಸ್ಯೆಗೆ ಸಿಲುಕುತ್ತೀರಿ. ಆದ್ದರಿಂದ ಕೆಲಸಕ್ಕೆ ಬರುವ ಯಾರೇ ಕಾರ್ಮಿಕರು ಇರಲಿ ಅವರ ಪೂರ್ವಪರ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕೆಂದರು.

ಆನ್‌ಲೈನ್ ವಹಿವಾಟು ನಡೆಸುವಾಗ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು, ಕೆಲವೊಮ್ಮೆ ಯಾವುದೋ ಅಲೋಚನೆಯಲ್ಲಿ ಬೇರೆ ಯಾರಿಗೊ ಹಣವನ್ನು ನಾವು ಫೋನ್ ಪೇ ಅಥವಾ ಗೂಗಲ್ ಪೇ ಮಾಡುವುದರಿಂದ ಮರಳಿ ಹಣ ಪಡೆಯುವುದು ಕಷ್ಟ. ಸ್ಕ್ಯಾನರ್ ಬಳಸುವಾಗ ಅಗತ್ಯ ಎಚ್ಚರಿಕೆ ವಹಿಸಬೇಕು, ನೀವು ಕಳಿಸುವ ಹಣದ ಲೆಕ್ಕ, ವ್ಯಕ್ತಿಯ ಬ್ಯಾಂಕ್ ಖಾತೆ ಸರಿ ಇದೆಯೆಂಬುದನ್ನು ಪರಿಶೀಲಿಸಿಕೊಂಡು ಹಣ ಕಳಿಸಬೇಕು. ಸೈಬರ್ ಅಪರಾಧಗಳಿಂದ ನಿತ್ಯ ಅಮಾಯಕರು ಲಕ್ಷಾಂತರ ರು. ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಹೆಚ್ಚು ಜಾಗೃತೆ ವಹಿಸಬೇಕೆಂದರು.