ಹನೂರು (ಚಾಮರಾಜನಗರ) : ಕಾವೇರಿ ವನ್ಯಜೀವಿ ಧಾಮದಲ್ಲಿ ಮೂವರು ಶಂಕಿತ ಬೇಟೆಗಾರರ ಹತ್ಯೆ ತರುವಾಯ ಉದ್ರಿಕ್ತರು ಜಿಲೆಟಿನ್ ಕಡ್ಡಿ ಬಳಸಿ ಕಳ್ಳಬೇಟೆ ತಡೆ ಶಿಬಿರದ ದಾಳಿ ನಡೆಸಿದ್ದರು. ಇದರ ಮುಂದುವರಿದ ಭಾಗವಾಗಿ ದುಷ್ಕರ್ಮಿಗಳು ತಮ್ಮ ಕೃತ್ಯವನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಗುರುವಾರ 4.5 ಎಕರೆ ಅರಣ್ಯ ಪ್ರದೇಶಕ್ಕೆ ಬೆಂಕಿ ಇಟ್ಟು ವಿಕೃತಿ ಮೆರೆದಿದ್ದಾರೆ.
ಕೊಳ್ಳೇಗಾಲ ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ಧಾಮದ ಬಫರ್ ವಲಯದ ಶಿಲುಬೆಪುರ ಅರಣ್ಯದಲ್ಲಿ ಕಿಡಿಗೇಡಿಗಳು 3-4 ಕಡೆ ಬೆಂಕಿ ಹಚ್ಚಿದ್ದಾರೆ. ಬೆಂಕಿಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಹರಸಾಹಸ ಪಟ್ಟು ಬೆಂಕಿ ನಂದಿಸಿದರು. ಆದರೂ ಸುಮಾರು 4.5 ಎಕರೆ ಅರಣ್ಯ ಪ್ರದೇಶ ಸಂಪೂರ್ಣವಾಗಿ ಹಾನಿಯಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಕಿಯಿಂದಾಗಿ ಅಸಂಖ್ಯಾತ ಗಿಡಮರಗಳು, ಪೊದೆಗಳು ಸುಟ್ಟು ಕರಕಲಾಗಿವೆ. ಜೊತೆಗೆ ವನ್ಯಜೀವಿಗಳ ಆವಾಸ ಸ್ಥಾನಕ್ಕೂ ಕುತ್ತು ಬಂದಿದೆ. ಬೇಸಿಗೆಯಿಂದ ಬೆಂದಿದ್ದ ವನ್ಯಮೃಗಗಳಿಗೆ ಬೆಂಕಿಯು ಮತ್ತಷ್ಟು ಸಂಕಷ್ಟವನ್ನು ತಂದೊಡ್ಡಿದೆ ಎಂದು ಪ್ರಾಣಿಪ್ರಿಯರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಲೆಮಹದೇಶ್ವರ ವನ್ಯಜೀವಿಧಾಮದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿರಾಜ್ ಸ್ಥಳ ಪರಿಶೀಲನೆ ನಡೆಸಿದ್ದಾರೆ. ‘ಬೆಂಕಿ ಬಿದ್ದಿರುವ ಪ್ರದೇಶವನ್ನು ಪರಿಶೀಲಿಸಲಾಗಿದೆ. ಬೆಂಕಿ ಹಚ್ಚಿದ ಕಿಡಿಗೇಡಿಗಳ ಪತ್ತೆಗೆ ತನಿಖೆ ಆರಂಭಿಸಲಾಗಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು’ ಎಂದು ತಿಳಿಸಿದರು.
ಒಂದೆಡೆ ಶೂಟೌಟ್ ಪ್ರಕರಣದಲ್ಲಿ ತನಿಖೆ ನಡೆಸುವಲ್ಲಿ ಅಧಿಕಾರಿಗಳು ನಿರತರಾಗಿದ್ದು, ಈಗ ಅರಣ್ಯ ಪ್ರದೇಶಕ್ಕೆ ದುಷ್ಕರ್ಮಿಗಳು ಬೆಂಕಿಯಿಟ್ಟು ವಿಕೃತಿ ಮೆರೆದಿದ್ದು, ಸಾಕಷ್ಟು ತೊಂದರೆಗೆ ಗ್ರಾಸವಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಶಾಂತಿ ಮಾತುಕತೆ ನಡೆಸಬೇಕೆಂದು ಜನರು ಆಗ್ರಹಿಸಿದ್ದಾರೆ.
ಸ್ಫೋಟ ಸ್ಥಳಕ್ಕೆ ನಕ್ಸಲ್ ನಿಗ್ರಹ
ಪಡೆ, ಶ್ವಾನ ಪಡೆ ಪರಿಶೀಲನೆ
ಗುಂಡಿನ ದಾಳಿ ಬಳಿಕ ಜಿಲೆಟಿನ್ ಕಡ್ಡಿ, ಸೈನೇಡ್ ಬಳಸಿ ಉದ್ರಿಕ್ತರು ಸ್ಫೋಟಗೊಳಿಸಿದ್ದ ಕಾವೇರಿ ವನ್ಯಜೀವಿ ಧಾಮದ ಹೊಳೆಮುರಿದಟ್ಟಿ ಕಳ್ಳಬೇಟೆ ತಡೆ ಶಿಬಿರ ಮತ್ತು ವಸತಿ ಗೃಹಗಳಿಗೆ ಗುರುವಾರ ನಕ್ಸಲ್ ನಿಗ್ರಹ ದಳ, ಶ್ವಾನ ದಳ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿವೆ.
ಆ.15ರ ಎನ್ಕೌಂಟರ್ ಕಿಡಿಗೇಡಿಗಳು ಜಿಲೆಟಿನ್ ಕಡ್ಡಿ ಮತ್ತು ಡೈನಮೈಟ್ ಬಳಸಿ ಸ್ಫೋಟಗೊಳಿಸಿದ್ದ ಸಂಗತಿ ಆ.17ರಂದು ಬೆಳಕಿಗೆ ಬಂದಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ಬೆನ್ನಲ್ಲೇ ತಂಡವು ಸ್ಥಳ ಪರಿಶೀಲಿಸಿದೆ. ಜಿಲೆಟಿನ್ ಕಡ್ಡಿ ಕುರುಹುಗಳು, ಕಿಡಿಗೇಡಿಗಳ ಹೆಜ್ಜೆ ಗುರುತು ಮತ್ತು ಸೂಕ್ಷ್ಮ ಮಾಹಿತಿಗಳನ್ನು ಕಲೆ ಹಾಕಿತು.
