ಸಾರಾಂಶ
ಕೆಜಿಎಫ್ನಲ್ಲಿ ನಿಷ್ಕ್ರಿಯಗೊಂಡಿರುವ 1003 ಎಕರೆ ವ್ಯಾಪ್ತಿಯ ಗಣಿ ಪ್ರದೇಶದಲ್ಲಿನ 13 ಟೇಲಿಂಗ್ (ಗಣಿ ತ್ಯಾಜ್ಯ) ಡಂಪ್ಗಳಲ್ಲಿ ಗಣಿ ಚಟುವಟಿಕೆ ನಡೆಸುವ ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಬೆಂಗಳೂರು : ಕೆಜಿಎಫ್ನಲ್ಲಿ ನಿಷ್ಕ್ರಿಯಗೊಂಡಿರುವ 1003 ಎಕರೆ ವ್ಯಾಪ್ತಿಯ ಗಣಿ ಪ್ರದೇಶದಲ್ಲಿನ 13 ಟೇಲಿಂಗ್ (ಗಣಿ ತ್ಯಾಜ್ಯ) ಡಂಪ್ಗಳಲ್ಲಿ ಗಣಿ ಚಟುವಟಿಕೆ ನಡೆಸುವ ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
1973 ರಿಂದ 5,213 ಎಕರೆ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸುತ್ತಿದ್ದ ಕೆಜಿಎಫ್ನ ಭಾರತ್ ಗೋಲ್ಡ್ ಮೈನ್ಸ್ ಸಂಸ್ಥೆ (ಬಿಜಿಎಂಎಲ್) ಅಧಿಕೃತವಾಗಿ ಗಣಿಗಾರಿಕೆ ಸ್ಥಗಿತಗೊಳಿಸುವ ವೇಳೆಗೆ ಒಟ್ಟು 1,003 ಎಕರೆ ವ್ಯಾಪ್ತಿಯಲ್ಲಿ 13 ಟೇಲಿಂಗ್ ಡಂಪ್ಗಳು ಸೃಷ್ಟಿಯಾಗಿದ್ದವು. ಚಿನ್ನ ತೆಗೆದು ಉಳಿದಿರುವ 32.26 ಲಕ್ಷ ಟನ್ ಗಣಿ ತ್ಯಾಜ್ಯ ಇದರಲ್ಲಿರುವುದಾಗಿ ಅಂದಾಜಿಸಲಾಗಿದೆ.
ಇದರಲ್ಲಿ ಸಾವಿರಾರು ಕೋಟಿ ರು. ಬೆಲೆಯ ಪಲ್ಲಾಡಿಯಮ್ ಹಾಗೂ ಟಂಗ್ಸ್ಟನ್ನಂತಹ ಲೋಹಗಳು ಪತ್ತೆಯಾಗಿವೆ. ಹೀಗಾಗಿ ಈ 13 ಟೇಲಿಂಗ್ ಡಂಪ್ ಪ್ರದೇಶಗಳಲ್ಲಿ ಎಂಎಂಡಿಆರ್ ಕಾಯಿದೆಯ ಕಲಂ 17ರಡಿ ಲಭ್ಯವಿರುವ ವಿಶೇಷ ಅಧಿಕಾರವನ್ನು ಚಲಾಯಿಸಿ ಗಣಿ ಗುತ್ತಿಗೆ ಚಟುವಟಿಕೆ ಮುಂದುವರಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಈ ಸಂಬಂಧ ಸರಕಾರ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಸಮ್ಮತಿ ಕೋರಿತ್ತು.
ಈ ಬಗ್ಗೆ ಕಳೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ್ದ ಸರ್ಕಾರ, ಭಾರತ್ ಚಿನ್ನದ ಗಣಿ ಸಂಸ್ಥೆಯು ರಾಜ್ಯಕ್ಕೆ 75.24 ಕೋಟಿ ರು. ಹಣ ಪಾವತಿ ಬಾಕಿ ಉಳಿಸಿಕೊಂಡಿದೆ. ಹೀಗಾಗಿ ಗಣಿ ಚಟುವಟಿಕೆಗೆ ಅವಕಾಶ ನೀಡಬಾರದು ಎಂದು ಚರ್ಚಿಸಿ, ಗಣಿ ಚಟುವಟಿಕೆಗೆ ಅನುಮತಿ ನೀಡುವ ಪ್ರಸ್ತಾವನೆಯನ್ನು ಮುಂದೂಡಿತ್ತು.
ಗಣಿ ಚಟುವಟಿಕೆಗೆ ಒಪ್ಪಿಗೆ: ಇದೀಗ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿದ್ದು, 32.263 ದಶಲಕ್ಷ ಟನ್ ಖನಿಜ ತ್ಯಾಜ್ಯ ಇರುವ ಟೇಲಿಂಗ್ ಡಂಪ್ಗಳಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗಿದೆ. ಇದೇ ವೇಳೆ ಭಾರತ್ ಚಿನ್ನದ ಗಣಿ ಸಂಸ್ಥೆಯು ರಾಜ್ಯಕ್ಕೆ ಬಾಕಿಯಿರುವ 75.24 ಕೋಟಿ ರು. ಪಾವತಿಸುವಂತೆ ಕೇಂದ್ರಕ್ಕೆ ಸೂಚಿಸಲು ನಿರ್ಧಾರ ಮಾಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಮಾಹಿತಿ ನೀಡಿದ್ದಾರೆ.