ಶಾಸಕರು ಟಿಕೆಟ್ ಕೇಳಿದ್ದಕ್ಕಾಗಿ ಐಪಿಎಲ್ ಫೈನಲ್ ಪಂದ್ಯವನ್ನು ಗುಜರಾತ್ಗೆ ಸ್ಥಳಾಂತರಿಸಲಾಗಿದೆ ಎಂಬ ಆರೋಪ ಆಧಾರ ರಹಿತ. ಈ ಕುರಿತು ಬಿಸಿಸಿಐ ಅಥವಾ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್ಸಿಎ) ನೇರವಾಗಿ ಹೇಳಿಕೆ ನೀಡಲಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರು : ಶಾಸಕರು ಟಿಕೆಟ್ ಕೇಳಿದ್ದಕ್ಕಾಗಿ ಐಪಿಎಲ್ ಫೈನಲ್ ಪಂದ್ಯವನ್ನು ಗುಜರಾತ್ಗೆ ಸ್ಥಳಾಂತರಿಸಲಾಗಿದೆ ಎಂಬ ಆರೋಪ ಆಧಾರ ರಹಿತ. ಈ ಕುರಿತು ಬಿಸಿಸಿಐ ಅಥವಾ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್ಸಿಎ) ನೇರವಾಗಿ ಹೇಳಿಕೆ ನೀಡಲಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ ರಾಜ್ಯದಲ್ಲಿ ವಿಧಾನಸಭೆ, ವಿಧಾನ ಪರಿಷತ್ ಎರಡೂ ಸೇರಿ 300 ಶಾಸಕರಿದ್ದಾರೆ. ಒಬ್ಬರಿಗೆ ಎರಡು ಟಿಕೆಟ್ಗಳನ್ನು ನೀಡಲಾಗುತ್ತಿದ್ದು ಒಟ್ಟು 600 ಟಿಕೆಟ್ ನೀಡುವ ಕಾರಣಕ್ಕಾಗಿ ಸ್ಥಳಾಂತರ ಮಾಡುತ್ತಿದ್ದೇವೆ ಎಂದು ಹೇಳಲಿ. ಯಾರಿಗೆಲ್ಲ ಟಿಕೆಟ್ ಕೊಟ್ಟಿದ್ದಾರೆ? ಎಷ್ಟು ಜನರಿಗೆ ಟಿಕೆಟ್ ಕೊಟ್ಟಿದ್ದಾರೆ ಹೇಳಲಿ. ಎದುರಾಳಿ ತಂಡದ ಸಿಎಸ್ಕೆಯವರೂ ಯಾರಿಗೆಲ್ಲ ಟಿಕೆಟ್ ಕೊಟ್ಟಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ.
ಏನು ಬೇಕಿದ್ರೂ ಟೀಕೆ ಮಾಡಲಿ:
ಬಿಜೆಪಿ, ಜೆಡಿಎಸ್ನವರು ಏನಾದರೂ ಟೀಕೆ ಮಾಡಿಕೊಳ್ಳಲಿ. ಅವರ ಅವಧಿಯಲ್ಲಿ ಕ್ರೀಡೆಗೆ ಎಷ್ಟು ಪ್ರೋತ್ಸಾಹ ನೀಡುತ್ತಿದ್ದರು ಎಂದು ಎಲ್ಲರಿಗೂ ಗೊತ್ತಿದೆ ಎಂದು ವ್ಯಂಗ್ಯವಾಡಿದ ಗೃಹ ಸಚಿವರು, ಅಹಮದಾಬಾದ್ ಸ್ಟೇಡಿಯಂನಲ್ಲಿ 1 ಲಕ್ಷ ಆಸನಗಳಿವೆ. ಹೆಚ್ಚಿನ ಲಾಭವಾಗುತ್ತದೆ ಎಂಬ ಕಾರಣಕ್ಕೆ ಫೈನಲ್ ಸ್ಥಳಾಂತರ ಮಾಡಲಾಗಿದೆ. ಇದಕ್ಕೂ, ರಾಜ್ಯ ಸರ್ಕಾರಕ್ಕೂ ಸಂಬಂಧವಿಲ್ಲ ಎಂದರು.
ಸಂಕಷ್ಟದ ಸಂದರ್ಭದಲ್ಲೂ ಅನುಮತಿ
ಐಪಿಎಲ್ ಪಂದ್ಯಾವಳಿಗಳು ಬೆಂಗಳೂರಿನಿಂದ ಸ್ಥಳಾಂತರವಾಗಬಾರದು ಎಂಬ ಕಾರಣಕ್ಕಾಗಿ ಸಂಕಷ್ಟದ ಸಂದರ್ಭದಲ್ಲೂ ಅನುಮತಿ ನೀಡಲಾಗಿತ್ತು. ನ್ಯಾಯಮೂರ್ತಿ ಮೈಕಲ್ ಕುನ್ಹಾ ಅವರ ವರದಿ ಪ್ರಕಾರ ಹಲವು ಕೆಲಸಗಳನ್ನು ಕೈಗೊಳ್ಳಬೇಕಿತ್ತು. ಅವುಗಳಲ್ಲಿ ದೀರ್ಘಾವಧಿ, ಅಲ್ಪಾವಧಿ ಎಂದು ವಿಂಗಡಿಸಲಾಗಿತ್ತು. ಅಲ್ಪಾವಧಿ ಕೆಲಸಗಳನ್ನು ತ್ವರಿತವಾಗಿ ಕೈಗೊಂಡು ಐಪಿಎಲ್ ಪಂದ್ಯಾವಳಿ ನಡೆಸಲು ಅನುವು ಮಾಡಿಕೊಡಲಾಗಿತ್ತು.


