ಸಂಘದ ದಾಖಲಾತಿ ಕೇಳಿದ್ದಕ್ಕೆ ಜಾತಿ ನಿಂದನೆ: ಆರೋಪ

| Published : Jun 14 2025, 01:13 AM IST

ಸಂಘದ ದಾಖಲಾತಿ ಕೇಳಿದ್ದಕ್ಕೆ ಜಾತಿ ನಿಂದನೆ: ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಸಾಲ ವಸೂಲು ಮಾಡುವ ವೇಳೆ ಸಾಲ ಬಾಕಿ ಉಳಿಸಿಕೊಂಡಿದ್ದ ಮಹಿಳೆಯ ಮನೆ ಬಳಿ ತೆರಳಿ ಜಾತಿ ನಿಂದನೆ ಮಾಡಿದ್ದಲ್ಲದೇ ಮಾನಸಿಕವಾಗಿ ಅವಮಾನ ಮಾಡಿದ್ದಾರೆಂದು ಆರೋಪಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 5 ಮಂದಿ ಸಂಘಟಕರ ವಿರುದ್ಧ ಪ್ರಕರಣ ದಾಖಲಾಗಿದೆ.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಸಾಲ ವಸೂಲು ಮಾಡುವ ವೇಳೆ ಸಾಲ ಬಾಕಿ ಉಳಿಸಿಕೊಂಡಿದ್ದ ಮಹಿಳೆಯ ಮನೆ ಬಳಿ ತೆರಳಿ ಜಾತಿ ನಿಂದನೆ ಮಾಡಿದ್ದಲ್ಲದೇ ಮಾನಸಿಕವಾಗಿ ಅವಮಾನ ಮಾಡಿದ್ದಾರೆಂದು ಆರೋಪಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 5 ಮಂದಿ ಸಂಘಟಕರ ವಿರುದ್ಧ ಪ್ರಕರಣ ದಾಖಲಾಗಿದೆ.

ತಾಲೂಕಿನ ಮಾಚೇನಹಳ್ಳಿಯ ಮಂಜುಳಾ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಳಿಕಾಂಬ ಎಂಬ ಸಂಘದಲ್ಲಿ ಕಳೆದ ಎಂಟತ್ತು ವರ್ಷದಿಂದ ಸದಸ್ಯರಾಗಿದ್ದಾರೆ. ಇವರು ಆ ಸಂಘದ ವತಿಯಿಂದ ಸಾಲವನ್ನೂ ಸಹ ಪಡೆದುಕೊಂಡಿದ್ದಾರೆ. ಪ್ರತಿ ವಾರಕ್ಕೊಮ್ಮೆ ಇಂತಿಷ್ಟು ಕಂತು ಕಟ್ಟುತ್ತಿದ್ದಾರೆ. ಈ ವೇಳೆ ಈ ಸಂಘದ ಹಣಕಾಸು ವ್ಯವಹಾರದಲ್ಲಿ ಅನುಮಾನ ಬಂದು ಕೆಲವು ದಾಖಲಾತಿಗಳನ್ನು ಕೇಳಿದ್ದಾರೆ. ದಾಖಲಾತಿಗಳನ್ನು ಕೊಡುವ ತನಕ ವಾರದ ಕಂತಿನ ಹಣವನ್ನು ಕೊಡುವುದಿಲ್ಲ ಎಂದು ಹೇಳಿ ಸುಮಾರು ಮೂರ್ನಾಲ್ಕು ವಾರದ ಕಂತನ್ನು ಕಟ್ಟಿಲ್ಲ ಎಂದು ಹೇಳಲಾಗಿದೆ. ಮಂಜುಳಾ ವಾರದ ಬಾಕಿ ಹಣ ಕಟ್ಟದಿದ್ದರಿಂದ ಸಂಘದ ಉಳಿಕೆ ಸದಸ್ಯರು ಈಕೆಯ ಮನೆ ಬಳಿ ತೆರಳಿ ಸಾಲ ವಸೂಲಿಗೆ ತೆರಳಿದ್ದಾರೆ. ತಾನು ಕೇಳಿರುವ ದಾಖಲಾತಿಗಳನ್ನು ಕೊಡುವ ತನಕ ಸಾಲದ ಕಂತನ್ನು ಕಟ್ಟುವುದಿಲ್ಲ ಎಂದು ಮಂಜುಳಾ ಪುನಃ ಹೇಳಿದ್ದಾರೆ. ಇದರಿಂದ ಕುಪಿತಗೊಂಡ ಸಂಘದ ಸಹ ಪ್ರತಿನಿಧಿ ಮಂಗಳಮ್ಮ ಎನ್ನುವವರು ಕೆಲವು ಗಂಡಸರನ್ನು ಜೊತೆಯಲ್ಲಿ ಕರೆದುಕೊಂಡು ಬಂದು ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ, ನನ್ನ ಜಾತಿ ಹಿಡಿದು ಅವಮಾನಿಸಿದರು. ಇವರೊಂದಿಗೆ ರಾಮಡೀಹಳ್ಳಿಯ ಲೀಲಾವತಿ, ಪುಷ್ಪ ರವರೂ ಸಹ ನನ್ನನ್ನು ಅವಮಾನಿಸಿ ಜೀವ ಬೆದರಿಕೆ ಹಾಕಿದರು ಎಂದು ಮಂಜುಳಾ ಆರೋಪಿಸಿದ್ದಾರೆ. ಈ ಕುರಿತು ದಂಡಿನಶಿವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ತೆರಳಿದಾಗ ಯೋಜನಾಧಿಕಾರಿಯಾಗಿರುವ ಶೇಖರ್ ಶೆಟ್ಟಿ ಮತ್ತು ಮಧು ಎಂಬುವವರು ಸಹ ಪೊಲೀಸ್ ಠಾಣೆಯ ಬಳಿ ನನ್ನ ಜಾತಿ ಹಿಡಿದು ನಿಂದಿಸಿದರು ಎಂದು ಮಂಜುಳಾ ದೂರಿದ್ದಾರೆ. ದಂಡಿನಶಿವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.