ಗದಗ: ಜಂತುಹುಳು ಸೋಂಕಿನ ಲಕ್ಷಣಗಳನ್ನು ಸರಿಯಾಗಿ ಅರಿತು ಜಂತುಹುಳು ನಿವಾರಣಾ ಮಾತ್ರೆ ಸೇವಿಸಿ ಜಂತುಹುಳುಗಳಿಂದ ಮುಕ್ತಿ ಪಡೆಯಬೇಕು. ಜಂತುಹುಳು ಮುಕ್ತ ಮಗು ಆರೋಗ್ಯವಂತ ಮಗು ಎಂದು ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಕೆ.ಎಸ್. ಮೀನಾಕ್ಷಿ ಹೇಳಿದರು.

ಬೆಟಗೇರಿಯ ಸೇಂಟ್ ಜಾನ್ಸ್ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆರ್‌ಸಿಎಚ್ ಅಧಿಕಾರಿಗಳ ಕಾರ್ಯಾಲಯ, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸೇಂಟ್ ಜಾನ್ಸ್ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ನಡೆದ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಂತುಹುಳುಗಳಿಂದ ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆ, ರಕ್ತಹೀನತೆ, ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತ ಸಮಸ್ಯೆ ಕಂಡುಬರುತ್ತವೆ. ಇದಕ್ಕೆ ಕರುಳಿನಲ್ಲಿರುವ ಕೆಲ ಜಂತುಹುಳುಗಳು ಮನುಷ್ಯನ ಆಹಾರ ರಕ್ತ ಹಂಚಿಕೊಳ್ಳುವುದೇ ಪ್ರಮುಖ ಕಾರಣವಾಗಿದೆ ಎಂದರು.

ತಾಲೂಕು ಆರೋಗ್ಯ ಅಧಿಕಾರಿ ಡಾ. ಪ್ರೀತ್ ಖೋನಾ ಮಾತನಾಡಿ, ವೈಯಕ್ತಿಕ ಶುಚಿತ್ವ ಮತ್ತು ಆರೋಗ್ಯ, ಶುದ್ಧ ನೀರಿನ ಬಳಕೆಯನ್ನು ಕೈಗೊಂಡಲ್ಲಿ ಜಂತುಹುಳು ಸೋಂಕಿನಿಂದ ಪಾರಾಗಬಹುದು ಎಂದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಡಾ. ರಾಜೇಂದ್ರ ಎಸ್. ಗಡಾದ ಮಾತನಾಡಿ, ರಾಷ್ಟ್ರೀಯ ಜಂತುಹುಳು ನಿರ್ಮೂಲನಾ ದಿನವನ್ನು ಮಕ್ಕಳಲ್ಲಿ ಕಂಡುಬರುವ ಕರುಳಿನ ಜಂತುಹುಳು ಸೋಂಕನ್ನು ನಿಯಂತ್ರಿಸುವ ಉದ್ದೇಶದಿಂದ ಪ್ರತಿವರ್ಷ ಆಚರಿಸಲಾಗುತ್ತದೆ. ಮಕ್ಕಳಲ್ಲಿ ಜಂತುಹುಳು ಸೋಂಕು ತಡೆಗಟ್ಟುವುದು ಮತ್ತು ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆಯನ್ನು ಉತ್ತಮಗೊಳಿಸುವುದು ರಕ್ತಹೀನತೆ ಮತ್ತು ಅಪೌಷ್ಟಿಕತೆಯನ್ನು ಕಡಿಮೆ ಮಾಡುವುದು ದಿನಾಚರಣೆಯ ಉದ್ದೇಶವಾಗಿದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಸೇಂಟ್ ಜಾನ್ಸ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಫಾದರ್ ರಾಜಪ್ಪ ಮಾತನಾಡಿದರು. ಸೇಂಟ್ ಜಾನ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಮೇರಿ ಮಸ್ಕರೇನಸ್, ಡಾ. ಮಧುಮತಿ ಪಂಚಮುಖಿ, ಪ್ರವೀಣ ಮಾನ್ವಿ, ಯಾಸ್ಮಿನಭಾನು ವಡ್ಡಟ್ಟಿ, ಶಿಲ್ಪಾ ಪೂಜಾರ, ಗೀತಾ ಜಮಾದಾರ, ಶ್ರೀದೇವಿ ಕುಂಬಾರ ಸೇರಿದಂತೆ ಶಾಲಾ ಮಕ್ಕಳು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿ ಇದ್ದರು. ಲಲಿತಾ ಹೊಸಳ್ಳಿ ಪ್ರಾರ್ಥಿಸಿದರು. ಸಾವಿತ್ರಿ ಪವಾರ ಸ್ವಾಗತಿಸಿದರು. ಶಿಕ್ಷಕ ಮಹೇಶ ಶೆಟವಾಜಿ ವಂದಿಸಿದರು.