ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಅವಮಾನಿಸಿದ ಕಾಂಗ್ರೆಸ್, ಈಗ ಅವರ ಹೆಸರಿನ ಲಾಭ ಪಡೆಯಲು ಯತ್ನಿಸುತ್ತಿದೆ ಎಂದು ವಿಧಾನಪರಿಷತ್ತು ಸದಸ್ಯ ಹಾಗೂ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.ಮೈಸೂರಿನ ವಿಜಯನಗರದ ಸಪ್ತಪದಿ ಸಭಾಂಗಣದಲ್ಲಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮಂಗಳವಾರ ಬಿಜೆಪಿ ಆಯೋಜಿಸಿದ್ದ ಬಲಗೈ ಬಲವರ್ಧನೆ ಸಂದೇಶ ಸಭೆಯಲ್ಲಿ ಅವರು ಮಾತನಾಡಿದರು. ಬಿಜೆಪಿ ಸಂವಿಧಾನ ಬದಲಾಯಿಸುತ್ತದೆ, ಡಾ. ಅಂಬೇಡ್ಕರ್ ಅವರಿಗೆ ಅವಮಾನ ಮಾಡುತ್ತಿದೆ ಎಂದು ಹೇಳುತ್ತಾ ಕಾಂಗ್ರೆಸ್ ಸುಳ್ಳಿನ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದರು.
ಸಂವಿಧಾನ ರಕ್ಷಣೆಯ ನೆಪದಲ್ಲಿ ಜಾಥಾ ನಡೆಸಿದ್ದ ಕಾಂಗ್ರೆಸ್ ಅದೇ ಸಂವಿಧಾನವನ್ನು ಕಡೆಗಣಿಸಿ ಹಿಂದೆ ಜಮ್ಮು ಮತ್ತು ಕಾಶ್ಮೀರಕ್ಕೆ ಆರ್ಟಿಕಲ್ 370 ರೂಪಿಸಿದೆ. ಕಾಂಗ್ರೆಸ್ ನಲ್ಲಿರುವ ದಲಿತ ಸಮುದಾಯದ ನಾಯಕರಿಗೆ ಮುಖ್ಯಮಂತ್ರಿ ಸ್ಥಾನ ನೀಡಲಿಲ್ಲ. ಹೀಗಾಗಿ, ಯಾರು ದಲಿತರಿಗೆ ದ್ರೋಹ ಮಾಡಿದವರು ಎಂಬುದನ್ನು ಪರಾಮರ್ಶೆ ಮಾಡಬೇಕಿದೆ ಎಂದು ಅವರು ತಿಳಿಸಿದರು.1917 ರಲ್ಲಿ ಈ ಪ್ರಾಂತ್ಯಕ್ಕೆ ಮಹಾರಾಜರು ಮೀಸಲಾತಿ ನೀಡಿದ್ದಾರೆ. ಹೀಗಾಗಿ, ಇಲ್ಲಿನ ನಮ್ಮ ಸಮುದಾಯದ ಜನ ಉನ್ನತ ಸ್ಥಾನಮಾನ ಅಲಂಕರಿಸುವಂತಾಗಿದೆ. ಕಲ್ಯಾಣ, ಬಾಂಬೆ ಕರ್ನಾಟಕದಲ್ಲಿ ಸಮುದಾಯದವರೂ ಕೂಲಿ ಮಾಡಿಕೊಂಡೇ ಬದುಕಬೇಕಾದ ಸ್ಥಿತಿಯಿದೆ. ಹೀಗಾಗಿ ಅವರ ಕೊಡುಗೆಗಳನ್ನು ಸ್ಮರಿಸಿ ಯದುವೀರ ಅವರನ್ನು ಗೆಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.
ಮಾಜಿ ಸಚಿವ ಎನ್. ಮಹೇಶ್ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅಸ್ಪೃಶ್ಯರಿಗಾಗಿ 800 ಶಾಲೆ ಕಟ್ಟಿದ್ದರು. ಪ್ರಜಾಪ್ರತಿನಿಧಿ ಸಭೆಗೆ 8 ಜನ ಅಸ್ಪೃಶ್ಯರನ್ನು ನಾಮಕರಣ ಮಾಡಿದ್ದರು. ನಮ್ಮ ಅಭ್ಯರ್ಥಿ ಯದುವೀರ ಅವರು ನಗರದ ಬೆಳವಣಿಗೆಯಲ್ಲಿ ಕೈಜೋಡಿಸಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೊಂದಿಗೆ ಬೆರೆತು ಕಾಂಗ್ರೆಸ್ ಟೀಕೆಗೆ ಉತ್ತರಿಸಿದ್ದಾರೆ. ಉತ್ತಮ ನಾಯಕತ್ವದ ಗುಣವಿರುವ ಅವರನ್ನು ಗೆಲ್ಲಿಸಬೇಕು ಎಂದು ಕೋರಿದರು.ಸಕಲೇಶಪುರ ಶಾಸಕ ಸಿಮೆಂಟ್ ಮಂಜು, ಬಿಜೆಪಿ ನಗರಾಧ್ಯಕ್ಷರಾದ ಮಾಜಿ ಶಾಸಕ ಎಲ್. ನಾಗೇಂದ್ರ, ಬಿಜೆಪಿ ಮುಖಂಡರಾದ ಮಾಧವ, ಹರೀಶ್ ಕುಮಾರ್, ಡಾ. ರೇವಣ್ಣ, ನಾಗಣ್ಣ, ಪ್ರಮೀಳಾ, ಶಿವರಾಮ, ನಾರಾಯಣ, ಡಾ. ಅಶ್ವಿನಿ ಶರತ್, ಎಸ್. ಮಹದೇವಯ್ಯ, ಶೈಲೇಂದ್ರ ಮೊದಲಾದವರು ಇದ್ದರು.