ಸಾರಾಂಶ
ಅವಿರೋಧ ಆಯ್ಕೆ । ೧೧ ಕ್ಷೇತ್ರದಲ್ಲಿ ೧೧ ಕಾಂಗ್ರೆಸ್ ವಶ । ೩ ಚುನಾವಣೇಲೂ ಶಾಸಕ ಗಣೇಶ್ ಪ್ರಸಾದ್ ಸ್ವ ಗ್ರಾಮದಲ್ಲಿ ಅಭೂತಪೂರ್ವ ಗೆಲುವು
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಸ್ವ ಗ್ರಾಮವಾದ ತಾಲೂಕಿನ ಹಾಲಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ ಎಲ್ಲಾ ಸ್ಥಾನಗಳಲ್ಲಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಹಾಲಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ನೂತನ ನಿರ್ದೇಶಕರಾಗಿ ಕಾಂಗ್ರೆಸ್ ಬೆಂಬಲಿತ ಜಿಲ್ಲಾ ಯೂನಿಯನ್ ಅಧ್ಯಕ್ಷರೂ ಆದ ಚಾಮುಲ್ ನಿರ್ದೇಶಕ ಎಚ್.ಎಸ್.ನಂಜುಂಡ ಪ್ರಸಾದ್, ಎಚ್.ಎಸ್.ನಾಗರಾಜು, ನಂಜುಂಡಸ್ವಾಮಿ, ಅಶೋಕ ಮರಳಾಪುರ, ಅಂಕಶೆಟ್ಟಿ ರಂಗನಾಥಪುರ, ಬೈರೇಗೌಡ ತೊರವಳ್ಳಿ, ಕಮರಹಳ್ಳಿ ಮಾದಪ್ಪ, ಪುಟ್ಟಸ್ವಾಮಿ ನಿಟ್ರೆ, ಎಚ್.ಎಂ.ರಾಜು, ಜಿ.ಗೀತಾ ಹಾಲಹಳ್ಳಿ, ರೇವಮ್ಮ ನಿಟ್ರೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಸೋಮವಾರ ಅಧ್ಯಕ್ಷ,ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎಚ್.ಎಸ್.ನಂಜುಂಡ ಪ್ರಸಾದ್ ಮೂರನೇ ಬಾರಿಗೆ ಸತತವಾಗಿ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ನಿಟ್ರೆ ಪುಟ್ಟಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರಾದ ಬಳಿಕ ಎಚ್.ಎಸ್.ನಂಜುಂಡ ಪ್ರಸಾದ್ ಮಾತನಾಡಿ ಮೊದಲಿಗೆ ನನ್ನ ಸೇರಿ ಇತರೆ ಎಲ್ಲಾ ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡಿದ ಸದಸ್ಯರಿಗೆ ಧನ್ಯವಾದ ಸಲ್ಲಿಸಿ,ನನ್ನ ಅಧ್ಯಕ್ಷನಾಗಲು ಕಾರಣರಾದ ಎಲ್ಲಾ ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸಿದರು.ಕಳೆದ ೧೦ ವರ್ಷಗಳಿಂದ ಸಂಘದ ಅಧ್ಯಕ್ಷನಾಗಿ ಸಂಘದ ಬೆಳವಣಿಗೆಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಸಂಘದಿಂದ ಕೆಸಿಸಿ ಬೆಳೆ ಸಾಲ ೩೫೮ ಮಂದಿ ರೈತರಿಗೆ ಬಡ್ಡಿ ರಹಿತ ೩.೪೦ ಕೋಟಿ ರು. ನೀಡಲಾಗಿದೆ ಎಂದರು.
೩ ಮಂದಿ ರೈತರಿಗೆ ಟ್ರ್ಯಾಕ್ಟರ್ ಸಾಲ, ೨೩೦ ಮಹಿಳೆಯರಿಗೆ ೧ ಕೋಟಿ ರು. ಸಾಲ ನೀಡಲಾಗಿದೆ. ಕಳೆದ ೧೦ ವರ್ಷಗಳಲ್ಲಿ ಸಂಘ ಶೇ.೧೦೦ ರಷ್ಟು ಸಾಲ ವಸೂಲಾತಿ ಮಾಡುವ ಮೂಲಕ ಪ್ರಗತಿಯತ್ತ ಸಂಘ ದಾಪುಗಾಲು ಹಾಕುತ್ತಿದೆ ಎಂದರು.ಸಂಘದ ವತಿಯಿಂದಲೇ ಮುಂದಿನ ದಿನಗಳಲ್ಲಿ ರಸಗೊಬ್ಬರ, ಔಷಧಿ ಮಳಿಗೆ ತೆರೆಯಲು ಪ್ರಯತ್ನ ನಡೆಸಿದೆ. ರೈತರು ಹಾಗೂ ಸಂಘದ ಸದಸ್ಯರಿಗೆ ಪೂರಕವಾದ ಎಲ್ಲಾ ಕಾರ್ಯಕ್ರಮಕ್ಕೆ ಸಂಘ ಚಿಂತನೆ ನಡೆಸುತ್ತಿದೆ ಎಂದರು.
ನಂಜುಂಡ ಪ್ರಸಾದ್ಗೆ ಹ್ಯಾಟ್ರಿಕ್ ಗೆಲುವು:ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರೂ ಆದ ಚಾಮುಲ್ ನಿರ್ದೇಶಕ ಎಚ್.ಎಸ್.ನಂಜುಂಡ ಪ್ರಸಾದ್ ಹಾಲಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಮೂರನೇ ಬಾರಿ ಅಧ್ಯಕ್ಷರಾಗಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ.
ತಾಪಂ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು, ಪಟೇಲ್ ನಂಜುಂಡಸ್ವಾಮಿ, ಎಂಡಿಸಿಸಿ ಬ್ಯಾಂಕ್ನ ಮೇಲ್ವಿಚಾರಕ ಜಿ.ಕಾರ್ತಿಕ್, ಸಹಕಾರ ಅಭಿವೃದ್ಧಿ ಅಧಿಕಾರಿ ಪದ್ಮನಾಭ, ಸಂಘದ ಉಪಾಧ್ಯಕ್ಷ ಪುಟ್ಟಸ್ವಾಮಿ ನಿಟ್ರೆ, ಎಚ್.ಎಸ್.ನಾಗರಾಜು, ನಂಜುಂಡಸ್ವಾಮಿ, ಮರಳಾಪುರ, ಅಂಕಶೆಟ್ಟಿ ರಂಗನಾಥಪುರ, ಬೈರೇಗೌಡ ತೊರವಳ್ಳಿ, ಕಮರಹಳ್ಳಿ ಮಾದಪ್ಪ, ಎಚ್.ಎಂ.ರಾಜು, ಜಿ.ಗೀತಾ ಹಾಲಹಳ್ಳಿ, ರೇವಮ್ಮ ನಿಟ್ರೆ,ಸಂಘದ ಸಿಇಒ ಶಂಕರ್ ಇದ್ದರು.