ಹೊಸಪೇಟೆ: ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಸಾವು-ನೋವುಗಳ ಕನಿಷ್ಠ ಮಟ್ಟಕ್ಕೆ ಇಳಿಸಲು ಜಿಲ್ಲಾಡಳಿತದ ವಿವಿಧ ಇಲಾಖೆಗಳ ನಡುವಿನ ಸಮನ್ವಯ ಮತ್ತು ಕ್ಷಿಪ್ರ ಸ್ಪಂದನೆ ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹೇಳಿದರು.
ನಗರದ 100 ಹಾಸಿಗೆ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಗೃಹರಕ್ಷಕ ಮತ್ತು ಪೊಲೀಸ್ ಇಲಾಖೆ ಸಹಯೋಗದಲ್ಲಿ ಗುರುವಾರ ಆಯೋಜಿಸಲಾಗಿದ್ದ ವಿಪತ್ತು ನಿರ್ವಹಣಾ ಅಣಕು ಪ್ರದರ್ಶನ ವೀಕ್ಷಿಸಿ ಅವರು ಮಾತನಾಡಿದರು.ಅಣಕು ಪ್ರದರ್ಶನದ ವೇಳೆ ಆಗುವ ಸಣ್ಣಪುಟ್ಟ ಲೋಪದೋಷಗಳನ್ನು ತಿದ್ದಿಕೊಳ್ಳುವ ಮೂಲಕ, ನೈಜ ತುರ್ತು ಸಂದರ್ಭದಲ್ಲಿ ಆಗಬಹುದಾದ ದೊಡ್ಡ ಅನಾಹುತ ತಪ್ಪಿಸಬಹುದು. ಅಣಕು ಪ್ರದರ್ಶನ ಕೇವಲ ತಾಲೀಮಾಗಿರದೆ, ಜನರ ಜೀವ ರಕ್ಷಣೆಗಾಗಿ ಜಿಲ್ಲಾಡಳಿತ ಸನ್ನದ್ಧವಾಗಿದೆ ಎಂಬುದಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು.
ಬೇಸಿಗೆ ಕಾಲದಲ್ಲಿ ವಿದ್ಯುತ್ ಲೋಡ್ ಹೆಚ್ಚಳದಿಂದ ಸಂಭವಿಸಬಹುದಾದ ಶಾರ್ಟ್ ಸರ್ಕ್ಯೂಟ್ ಅವಘಡಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಇಂತಹ ಸಂದರ್ಭಗಳಲ್ಲಿ ಬೆಂಕಿ ನಂದಿಸುವ ತಾಂತ್ರಿಕತೆ ಮತ್ತು ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ವಿಧಾನಗಳ ಬಗ್ಗೆ ಪ್ರತಿಯೊಬ್ಬರಿಗೂ ಕನಿಷ್ಠ ಜ್ಞಾನವಿರಬೇಕು ಎಂದು ಅವರು ಹೇಳಿದರು.ಕಣ್ಣಿಗೆ ಕಟ್ಟುವಂತೆ ಪ್ರಾತ್ಯಕ್ಷಿಕೆಯ ದೃಶ್ಯ:
ನಗರದ 100 ಹಾಸಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಅನಿರೀಕ್ಷಿತವಾಗಿ ಮೊಳಗಿದ ಸೈರನ್ ಸದ್ದು, ಕ್ಷಣಾರ್ಧದಲ್ಲಿ ಧಾವಿಸಿ ಬಂದ ಅಗ್ನಿಶಾಮಕ ವಾಹನಗಳು, ಆ್ಯಂಬುಲೆನ್ಸ್ಗಳ ದೌಡು ಮತ್ತು ಬಿಗಿ ಪೊಲೀಸ್ ಬಂದೋಬಸ್ತ್!
ಇದನ್ನು ಕಂಡ ಸಾರ್ವಜನಿಕರು ಒಂದು ಕ್ಷಣ ಸ್ತಬ್ಧರಾದರು. ಆದರೆ, ಇದು ಯಾವುದೇ ನೈಜ ಅವಘಡವಲ್ಲ, ಬದಲಾಗಿ ವಿಪತ್ತು ಎದುರಿಸಲು ಜಿಲ್ಲಾಡಳಿತ ನಡೆಸಿದ ಅಣಕು ಪ್ರದರ್ಶನ.
ಆಸ್ಪತ್ರೆಯ ಒಂದು ಕಟ್ಟಡದಲ್ಲಿ ಬಾಂಬ್ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡಿದೆ ಎಂಬ ಸನ್ನಿವೇಶ ಜನರಿಗೆ ಮನಮುಟ್ಟುವಂತೆ ಸೃಷ್ಟಿಸಲಾಯಿತು. ಅಗ್ನಿಶಾಮಕ ದಳದ ಸಿಬ್ಬಂದಿ ಹೊಗೆಯ ನಡುವೆ ನುಗ್ಗಿ, ಸ್ಫೋಟದಲ್ಲಿ ಸಿಲುಕಿಕೊಂಡವರನ್ನು ರಕ್ಷಿಸುವ ಸಾಹಸಮಯ ದೃಶ್ಯಗಳು ಜನರಲ್ಲಿ ಕುತೂಹಲ ಕೆರಳಿಸಿತು. ದಟ್ಟ ಹೊಗೆಯ ನಡುವೆ ’ಕೋಡ್ ರೆಡ್’ ಘೋಷಣೆಯಾಗುತ್ತಿದ್ದಂತೆ, ರಕ್ಷಣಾ ಕಾರ್ಯ ಚುರುಕುಗೊಂಡಿತು.ಕರೆ ಬಂದ ತಕ್ಷಣ ಸ್ಥಳಕ್ಕೆ ರಕ್ಷಣಾ ಸಿಬ್ಬಂದಿ ಧಾವಿಸಿ, ಬೆಂಕಿಯನ್ನು ನಿಯಂತ್ರಿಸುವ ಜತೆಗೆ ಮಕ್ಕಳನ್ನು ಮತ್ತು ಸಂಕಷ್ಟದಲ್ಲಿದ್ದವರನ್ನು ಸುರಕ್ಷಿತವಾಗಿ ಹೊರತಂದರು. ಸೈರನ್ ಮೊಳಗಿದ ಕೆಲವೇ ಕ್ಷಣಗಳಲ್ಲಿ ಆ್ಯಂಬುಲೆನ್ಸ್ಗಳು ಸ್ಥಳಕ್ಕೆ ತಲುಪಿದವು. ಗಂಭೀರವಾಗಿ ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ನೀಡಿ, ಅವರನ್ನು ತಕ್ಷಣವೇ ಆಸ್ಪತ್ರೆಗೆ ರವಾನಿಸುವ ಪ್ರಕ್ರಿಯೆ ವ್ಯವಸ್ಥಿತವಾಗಿತ್ತು.
ತುರ್ತು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲು ಟ್ರಾಫಿಕ್ ನಿಯಂತ್ರಿಸಿ, ಸಾರ್ವಜನಿಕರಲ್ಲಿ ಆತಂಕ ಮೂಡದಂತೆ ಎಚ್ಚರಿಕೆ ವಹಿಸಿದರು.ಅಗ್ನಿಶಾಮಕದಳ ಜಿಲ್ಲಾ ಅಧಿಕಾರಿ ವಾಲಿ ಪ್ರಮೋದ್, ಡಿಎಚ್ಒ ಶಂಕರ್ ನಾಯ್ಕ್ ಉಪಸ್ಥಿತರಿದ್ದರು.