ಕುಷ್ಟಗಿ: ಸಮಾಜದ ಅಭಿವೃದ್ಧಿಯಲ್ಲಿ ಕಾರ್ಮಿಕರ ಪಾತ್ರ ಮಹತ್ವದ್ದಾಗಿದೆ. ದೇಶದ ಆರ್ಥಿಕ ಬೆಳವಣಿಗೆಗೆ ಕಾರ್ಮಿಕರ ಶ್ರಮವೇ ಆಧಾರವಾಗಿದ್ದು, ಅವರ ಹಕ್ಕುಗಳ ರಕ್ಷಣೆ ಹಾಗೂ ಸಾಮಾಜಿಕ ಭದ್ರತೆ ನೀಡುವುದು ಎಲ್ಲರ ಜವಾಬ್ದಾರಿ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಎಲ್.ಪೂಜೇರಿ ಹೇಳಿದರು.
ಪಟ್ಟಣದ ನ್ಯಾಯಾಲಯದ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಕಾರ್ಮಿಕ ಇಲಾಖೆಯ ಸಹಯೋಗದಲ್ಲಿ ನಡೆದ ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದ ಕಾರ್ಮಿಕ ಸಂಘಟನೆಗಳು, ವಿವಿಧ ಸಂಟನೆಗಳು ಶೋಷಣೆಗೊಳಗಾದ ಕಾರ್ಮಿಕರನ್ನು ಎತ್ತಿ ಹಿಡಿಯುವ ಕೆಲಸ ಮಾಡಬೇಕು ಸಂಘಟನೆಗಳು ನ್ಯಾಯದ ಪರ ಕೆಲಸ ಮಾಡಿದಾಗ ಮಾತ್ರ ನೈಜ ಕಾರ್ಮಿಕನಿಗೆ ನ್ಯಾಯ ದೊರೆಯುತ್ತದೆ. ಸಂಘಟಿತ ಹಾಗೂ ಅಸಂಘಟಿತ ಕಾರ್ಮಿಕರು ತಮ್ಮ ದೈನಂದಿನ ನಿತ್ಯ ಕೆಲಸ ಕಾರ್ಯದಲ್ಲಿ ಕಾನೂನಾತ್ಮಕವಾಗಿ ಕೆಲಸ ಕಾರ್ಯ ಮಾಡಿದರೆ ಕಾರ್ಮಿಕನ ಬೆನ್ನಿಗೆ ಕಾನೂನು ಸಹಾಯವಾಗಿ ನಿಲ್ಲುತ್ತದೆ ಎಂದರು.ಜಗತ್ತಿನಲ್ಲಿ ಜಾತಿ ವ್ಯವಸ್ಥೆ ತಾಂಡವಾಡುತ್ತಿದ್ದ ಸಮಯದಲ್ಲಿ ಜಾತಿ ವ್ಯವಸ್ಥೆ ಹೋಗಲಾಡಿಸಲು ಗೌತಮ ಬುದ್ದ ಮತ್ತು ಕಾಯಕ ಯೋಗಿ ಬಸವಣ್ಣನವರ ಕಾರ್ಯ ಯಶಸ್ವಿಯಾಗಿದೆ. ಶೋಷಣೆಗೊಳಗಾದವರು ಹಾಗೂ ಕಾರ್ಮಿಕರ ಪರ ನಿಂತುಕೊಂಡು ದುಡಿವ ಕೈಗಳಿಗೆ ಬೆಂಬಲವಾಗಿ ನಿಂತುಕೊಂಡಿದ್ದರು. ಆದ್ದರಿಂದ ಸಂಘಟನೆಗಳು ಕಾರ್ಮಿಕರ ಪರವಾಗಿ ಧ್ವನಿ ಎತ್ತಬೇಕು ಎಂದು ಹೇಳಿದರು.
ಕಾರ್ಮಿಕ ಇಲಾಖೆ ನಿರೀಕ್ಷಕಿ ಡಿ.ನಿವೇದಿತಾ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳ ಕುರಿತು ಉಪನ್ಯಾಸ ನೀಡಿದರು.ಈ ಸಂದರ್ಭದಲ್ಲಿ ತಾಪಂ ಸಹಾಯಕ ನಿರ್ದೇಶಕಿ ಗೀತಾ ಅಯ್ಯಪ್ಪನವರು, ಪುರಸಭೆ ಮುಖ್ಯಾಧಿಕಾರಿ ವಿ.ಐ.ಬೀಳಗಿ, ಶಶಿಧರ ಎಂ.ಶಟ್ಟರ್, ಡಿ.ಮಾರುತಿ, ಪಿ.ಆರ್.ಹುನಗುಂದ, ಎಚ್.ಆರ್.ನಾಯಕ, ರಾಯನಗೌಡ ಎಲ್, ಪರಸಪ್ಪ ಗುಜಮಾಗಡಿ, ಪ್ರಧಾನ ಬಸವರಾಜ ಹಿರೇಗೌಡ್ರ ಸೇರಿದಂತೆ ಇಲಾಖೆ ಅಧಿಕಾರಿಗಳು ಹಾಗೂ ನ್ಯಾಯಾಂಗ ಇಲಾಖೆ ಸಿಬ್ಬಂದಿ ಕಾರ್ಮಿಕರು ಇದ್ದರು.