ಬೆಳ್ತಂಗಡಿ: ವರ್ಷಾಂತ್ಯ ಹಾಗೂ ಹೊಸ ವರ್ಷದ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ, ಸುರ್ಯ ದೇವಸ್ಥಾನ, ಸೌತಡ್ಕ ಸೇರಿದಂತೆ ತಾಲೂಕಿನ ದೇವಸ್ಥಾನಗಳಲ್ಲಿ ಹೆಚ್ಚಿನ ಜನಸಂದಣಿ ಕಂಡುಬಂದಿದೆ. ದೇವಸ್ಥಾನಗಳ ಅನ್ನಛತ್ರಗಳಲ್ಲೂ ಭಾರೀ ಸಂಖ್ಯೆಯಲ್ಲಿ ಜನರು ಅನ್ನ ಪ್ರಸಾದ ಸ್ವೀಕರಿಸಿದರು.

ಕಎಸ್‌ಆರ್‌ಟಿಸಿ ಗುತ್ತಿಗೆ ಚಾಲಕರು ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಬಸ್‌ಗಳ ವ್ಯತ್ಯಯದಿಂದ ನಾನಾ ಭಾಗಗಳಿಂದ ಆಗಮಿಸಿದ ಬಸ್ಸುಗಳಲ್ಲಿ ಹೆಚ್ಚಿನ ಪ್ರಯಾಣಿಕರ ಸಂಖ್ಯೆ ಕಂಡು ಬಂತು. ಬೆಂಗಳೂರಿನಿಂದ ಪ್ರತಿದಿನ 15 ರಿಂದ 20 ಬಿಎಂಟಿಸಿ ಬಸ್ಸುಗಳು ಧರ್ಮಸ್ಥಳಕ್ಕೆ ಬರುತ್ತಿವೆ. ಹೆದ್ದಾರಿಯಲ್ಲೂ ಭಾರಿ ಸಂಖ್ಯೆಯ ವಾಹನಗಳು ಕಂಡುಬಂದಿದೆ. ತಾಲೂಕಿನ ಪೇಟೆಗಳಲ್ಲೂ ಹೆಚ್ಚಿನ ಜನ-ವಾಹನ ಸಂದಣಿ ಇದೆ. ಹೊಸ ವರ್ಷದ ಆಗಮನದ ಹಿನ್ನಲೆಯಲ್ಲಿ ಪ್ರತಿವರ್ಷದಂತೆ ಬೆಂಗಳೂರಿನ ಭಕ್ತರು ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ದೇವಾಲಯದ ಮುಂಭಾಗ ಬಣ್ಣದ ಹೂಗಳಿಂದ ವಿಶೇಷಾಲಂಕಾರ ಮಾಡಿದರು.