ಸಾರಾಂಶ
ದರೋಡೆಕೋರರ ಹಲ್ಲೆಯಿಂದ ಮೃತಪಟ್ಟ ಸಂತೋಷ ಕನ್ನಾಳ ಕುಟುಂಬಕ್ಕೆ ಸರ್ಕಾರ ಕೂಡಲೇ ಸ್ಪಂದಿಸಿ ಪರಿಹಾರ ನೀಡುವಂತೆ ಆಗ್ರಹಿಸಿ ವಿವಿಧ ಸಂಘಟನೆಯ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ದರೋಡೆಕೋರರ ಹಲ್ಲೆಯಿಂದ ಮೃತಪಟ್ಟ ಸಂತೋಷ ಕನ್ನಾಳ ಕುಟುಂಬಕ್ಕೆ ಸರ್ಕಾರ ಕೂಡಲೇ ಸ್ಪಂದಿಸಿ ಪರಿಹಾರ ನೀಡುವಂತೆ ಆಗ್ರಹಿಸಿ ವಿವಿಧ ಸಂಘಟನೆಯ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.ಕಳ್ಳರ ಹಾವಳಿಯಿಂದ ಗಂಭೀರ ಗಾಯಗೊಂಡಿದ್ದ ವಿಜಯಪುರ ನಗರದ ಜೈನಾಪೂರ ಲೇಔಟ ನಿವಾಸಿ ಸಂತೋಷ ಕನ್ನಾಳ (ದಿಂಡವಾರ) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು ನೋವಿನ ಸಂಗತಿ. ಕೂಡಲೇ ಸರ್ಕಾರ ಮೃತ ಸಂತೋಷನ ಕುಟಂಬಕ್ಕೆ ಪರಿಹಾರ ಒದಗಿಸಬೇಕು ಎಂದು ನ್ಯಾಯವಾದಿ ಶ್ರೀಶೈಲ ಮುಳಜಿ ಒತ್ತಾಯಿಸಿದರು.
ನ್ಯಾಯವಾದಿ ದಾನೇಶ ಅವಟಿ ಮಾತನಾಡಿ, ದರೋಡೆ ಪ್ರಕರಣದಲ್ಲಿ ಅನ್ಯಾಯವಾಗಿ ಮೃತ ಪಟ್ಟ ಸಂತೋಷ, ಆತನ ಕುಟುಂಬ ಆರ್ಥಿಕವಾಗಿ ಸಂಕಷ್ಟದಲ್ಲಿದೆ. ಕೂಡಲೇ ಸರ್ಕಾರದಿಂದ ₹೨೫ ಲಕ್ಷ ಪರಿಹಾರ ಹಾಗೂ ಮೃತನ ಪತ್ನಿಗೆ ಸರ್ಕಾರಿ ನೌಕರಿ, ಮಗುವಿನ ಶೈಕ್ಷಣಿಕ ಖರ್ಚು ವೆಚ್ಚ ನೀಡಿ ಅನುಕೂಲ ಮಾಡಿಕೊಡಬೇಕು. ಇನ್ನುವರೆಗೂ ಮೃತರ ಕುಟುಂಬಕ್ಕೆ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಭೇಟಿ ನೀಡಿ ಸಾಂತ್ವಾನ ಹೇಳದೇ ಇರುವುದು ದುರ್ದೈವದ ಸಂಗತಿ. ಇಂತಹ ಗಂಭೀರ ಪ್ರಕರಣದಲ್ಲಿ ಜಾಣ ಕುರುಡುತನ ಪ್ರದರ್ಶಿಸುವುದು ನೋವಿನ ಸಂಗತಿಯಾಗಿದೆ ಎಂದು ವಿಷಾಧಿಸಿದರು.ವಿಜಯಪುರ ಜಿಲ್ಲೆಯಲ್ಲಿ ಸಂಭವಿಸಿದ ಈ ಘಟನೆಯಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಜನತೆ ಕಳ್ಳಕಾಕರ ಹಾವಳಿಯಿಂದ ಭಯಭೀತರಾಗಿದ್ದಾರೆ. ಕೂಡಲೇ ಜಿಲ್ಲಾಡಳಿತ ತಪ್ಪಿತಸ್ಥ ಕಳ್ಳರಿಗೆ ಉಗ್ರ ಶಿಕ್ಷೆ ನೀಡಿ, ಜಿಲ್ಲೆಯಲ್ಲಿ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.
ನ್ಯಾಯವಾದಿ ವಿ.ಎನ್.ಪಾಟೀಲ ಟಕ್ಕೆ ಮಾತನಾಡಿ, ದರೋಡೆಕೋರರ ಹಲ್ಲೆಯಿಂದ ಗಂಭೀರ ಗಾಯಗೋಂಡಿದ್ದ ಸಂತೋಷ ಕನ್ನಾಳಿಗೆ ಸೂಕ್ತ ಚಿಕಿತ್ಸೆ ನೀಡಲು ವಿಜಯಪುರ ಜಿಲ್ಲಾಸ್ಪತ್ರೆಯ ವೈದ್ಯರು ವಿಫಲರಾಗಿದ್ದಾರೆ. ಪರಿಸ್ಥಿತಿ ಕೈ ಮೀರಿದ ನಂತರ ಬೆಂಗಳೂರಿಗೆ ಸಾಗ ಹಾಕಿರುವುದು ವೈದ್ಯರು ತಮ್ಮ ಕರ್ತವ್ಯದಿಂದ ನುಣುಚಿಕೊಂಡಿರುವುದು ಎದ್ದು ಕಾಣಿಸುತ್ತಿದೆ. ಇಲ್ಲಿಯೆ ಸೂಕ್ತ ಚಿಕಿತ್ಸೆ ನೀಡಿದ್ದರೆ ಸಂತೋಷ ಬದುಕುಳಿಯುವ ಸಾಧ್ಯತೆ ಇತ್ತು. ಸಂತೋಷನನ್ನು ಉಳಿಸಿಕೊಳ್ಳುವಲ್ಲಿ ಜಿಲ್ಲಾಸ್ಪತ್ರೆಯ ವೈದ್ಯರು ವಿಫಲರಾಗಿರುವುದರಿಂದ ಸದರಿ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಜೊತೆಗೆ ಸರ್ಕಾರದಿಂದ ಪರಿಹಾರ ನೀಡಲು ವಿಳಂಬವಾದರೆ ಸಾರ್ವಜನಿಕರೆಲ್ಲರೂ ಸೇರಿಕೊಂಡು ಸಂಘ ಸಂಸ್ಥೆಗಳ ಮೂಲಕ ದೇಣಿಗೆ ಸಂಗ್ರಹಿಸಿ ಮೃತನ ಸಂತೋಷನ ಕುಟುಂಬಕ್ಕೆ ಆರ್ಥಿಕ ಸಹಾಯ ಒದಗಿಸಲಾಗುವುದು ಎಂದರು.ನ್ಯಾಯವಾದಿಗಳಾದ ಸಿ.ಎಂ.ಅಂಗಡಿ, ಸಿದ್ದನಗೌಡ ಪೊಲೀಸ್ಪಾಟೀಲ, ಪ್ರವೀಣ ಹುಡೇದಾಳ, ಶಿವಾನಂದ ಬಗಲಿ, ಜಿಲ್ಲಾ ರೈತ ಸಂಘ ಹಸಿರು ಸೇನೆ ಅಧ್ಯಕ್ಷ ಸಂಗಮೇಶ ಸಗರ, ತನು ಪೌಂಡೇಶನ್ ಅಧ್ಯಕ್ಷ ವಿಜಯಕುಮಾರ ಕಾಳಶೆಟ್ಟಿ, ಯುವ ಮುಖಂಡ ಷಣ್ಮುಖ ರಾಮತೀರ್ಥ, ಸಿದ್ಧಾರೂಢ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.